
ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸುರತ್ಕಲ್ ಘಟಕದ ವತಿಯಿಂದ ಡಿ.೨೫ ರಂದು ಸುರತ್ಕಲ್ ಲೈಟ್ ಹೌಸ್ ಕಡಲ ತೀರದಲ್ಲಿ ತ್ಯಾಜ್ಯಗಳನ್ನು ಸಂಗ್ರಹಿಸಿ ವಿಲೇವಾರಿ ಮಾಡುವ ಸ್ವಚ್ಛತಾ ಅಭಿಯಾನ ಕಾರ್ಯಕ್ರವನ್ನು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರು ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೌರರಕ್ಷಣಾ ಪಡೆಯ ಚೀಫ್ ವಾರ್ಡರ್ ಡಾ.ಮುರಲೀ ಮೋಹನ್ ಚೂಂತಾರು ಅವರ ನೇತೃತ್ವದಲ್ಲಿ ನಡೆಸಲಾಯಿತು.



ಈ ಸಂದರ್ಭದಲ್ಲಿ ಮಾತನಾಡಿದ ಅವರು ಕಡಲ ತೀರ ಮತ್ತು ಪರಿಸರವನ್ನು ನಾವು ಸ್ವಚ್ಛವಾಗಿಡಬೇಕು.ಕಡಲ ತೀರದ ಸ್ವಚ್ಚತೆ ಕೇವಲ ಜಿಲ್ಲಾಡಳಿತದ ಜವಾಬ್ದಾರಿ ಅಲ್ಲ.ಕಡಲ ತೀರದ ಸ್ವಚ್ಚತೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಪ್ಲಾಸ್ಟಿಕ್ ತ್ಯಾಜ್ಯ, ಬಾಟಲ್ ತ್ಯಾಜ್ಯಗಳು ಮತ್ತು ಇತರ ಪ್ಲಾಸ್ಟಿಕ್ ಗಳನ್ನು ಕಡಲ ತೀರದಲ್ಲಿ ಎಸೆದಲ್ಲಿ ಆಮೆ ಮೀನುಗಳ ಸಹಿತ ಅನೇಕ ಜೀವ ಸಂಕುಲಗಳಿಗೆ ಮಾರಕವಾಗಿದ್ದು, ಅವುಗಳನ್ನು ಸಮುದ್ರಕ್ಕೆ ಎಸೆಯದಂತೆ ಸಮುದ್ರ ತೀರದಲ್ಲಿ ಪ್ರವಾಸಿಗರಿಗೆ ಸೂಕ್ತ ಮಾರ್ಗದರ್ಶನ ಹಾಗೂ ಕಸದ ತೊಟ್ಟಿಗಳನ್ನು ಅಲ್ಲಲ್ಲಿ ಇಡುವುದರ ಮುಖಾಂತರ ತ್ಯಾಜ್ಯಗಳು ಸಮುದ್ರದ ನೀರಿಗೆ ಬೀಳದಂತೆ ಜಾಗೃತಿಯನ್ನು ವಹಿಸಬೇಕು ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಸುರತ್ಕಲ್ ಘಟಕದ ಪ್ರಭಾರ ಘಟಕಾಧಿಕಾರಿ ಶ್ರೀ ರಮೇಶ್ ಹಾಗೂ 20 ಮಂದಿ ಗೃಹರಕ್ಷಕ ಗೃಹರಕ್ಷಕಿಯರು ಉಪಸ್ಥಿತರಿದ್ದರು.

