
ಬೆಂಗಳೂರು: ಕೋಟ್ಯಂತರ ಮೌಲ್ಯದ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟಿ ರನ್ಯಾ ಅವರ ಪತಿ ಜತಿನ್ ವಿಜಯಕುಮಾರ್ ಹುಕ್ಕೇರಿ ಅವರನ್ನು ಕಾನೂನು ಪ್ರಕ್ರಿಯೆ ಪಾಲಿಸದೆ ಬಂಧಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಂಗಳವಾರ ಆದೇಶಿಸಿದೆ. ಜತಿನ್ ಹುಕ್ಕೇರಿ ಅವರ ಮೇಲೆ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್ಐ) ಅಧಿಕಾರಿಗಳು ಬಲವಂತದ ಕ್ರಮ ತೆಗೆದುಕೊಳ್ಳದಂತೆ ಆದೇಶಿಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.



ಕಾನೂನು ಪ್ರಕ್ರಿಯೆ ಪಾಲಿಸದೇ ಬಂಧಿಸಬಾರದು – ಹೈಕೋರ್ಟ್
ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಪ್ರಭುಲಿಂಗ ಕೆ. ನಾವದಗಿ ಅವರು, “ರನ್ಯಾ ವಿರುದ್ಧದ ಪ್ರಕರಣಕ್ಕೂ ಜತಿನ್ ಅವರಿಗೂ ಯಾವುದೇ ಸಂಬಂಧವಿಲ್ಲ. ಅವರು ತನಿಖೆಗೆ ಸಹಕರಿಸಿದ್ದಾರೆ. ಆದ್ದರಿಂದ, ಅವರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು” ಎಂದು ವಾದಿಸಿದರು. ಈ ವಾದವನ್ನು ಪರಿಗಣಿಸಿದ ಹೈಕೋರ್ಟ್ ಪೀಠವು, ಅರ್ಜಿದಾರರನ್ನು ಸೂಕ್ತ ಕಾನೂನು ಪ್ರಕ್ರಿಯೆ ಪಾಲಿಸದೇ ಬಂಧಿಸಬಾರದು” ಎಂದು ಆದೇಶಿಸಿ, ವಿಚಾರಣೆಯನ್ನು ಮುಂದೂಡಿತು.
ಡಿಆರ್ಐ ಸಮನ್ಸ್ ಹಾಗೂ ವಿಚಾರಣಾ ಪ್ರಕ್ರಿಯೆ
ಮಾರ್ಚ್ 4 ರಂದು ಡಿಆರ್ಐ ಅಧಿಕಾರಿಗಳು ಕಸ್ಟಮ್ಸ್ ಕಾಯಿದೆ ಸೆಕ್ಷನ್ 108 ಅಡಿಯಲ್ಲಿ ಸಮನ್ಸ್ ಜಾರಿಗೊಳಿಸಿದ್ದರು. ಇದನ್ನು ಅನುಸರಿಸಿ ಜತಿನ್ ವಿಚಾರಣೆಯಲ್ಲಿ ಸಹಕರಿಸಿದ್ದರು. ಈ ಆದೇಶದ ಬೆನ್ನಲ್ಲೇ ಜತಿನ್ ಹುಕ್ಕೇರಿ ಅವರ ಬಂಧನ ತಾತ್ಕಾಲಿಕವಾಗಿ ತಪ್ಪಿದಂತಾಗಿದೆ. ಮಾರ್ಚ್ 24 ರಂದು ನಟಿ ರನ್ಯಾ ಅವರ ನ್ಯಾಯಾಂಗ ಬಂಧನದ ವಿಚಾರಣೆ ನಡೆಯಲಿದೆ.