ಕುಕ್ಕೆ: ದೇವರಗದ್ದೆ ಮೊಗೇರ್ಕಳ ಮತ್ತು ಶ್ರೀ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ.

ಕುಕ್ಕೆ: ದೇವರಗದ್ದೆ ಮೊಗೇರ್ಕಳ ಮತ್ತು ಶ್ರೀ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ.

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದ ದೇವರಗದ್ದೆಯ ಅಗರಿಕಜೆ ಶ್ರೀ ನಾಗಬ್ರಹ್ಮ ಆದಿ ಮೊಗೇರ್ಕಳ ಹಾಗೂ ಶ್ರೀ ಸ್ವಾಮಿ ಕೊರಗಜ್ಜ ದೈವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ದೈವಗಳ ನೇಮೋತ್ಸವವು ಭಕ್ತಿ ಸಡಗರದಿಂದ ನೆರವೇರಿತು. ಪ್ರತಿಷ್ಠಾ ವಾರ್ಷಿಕೋತ್ಸವದ ನಿಮಿತ್ತ ಮಹಾಗಣಪತಿ ಹೋಮ, ದೈವಗಳಿಗೆ ಕಲಶಾಭಿಷೇಕ, ಪೂರ್ವಕ ತಂಬಿಲ, ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಅನ್ನ ಸಂತರ್ಪಣೆ ನೆರವೇರಿತು.ಸಂಜೆ ಕುಕ್ಕೆಶ್ರೀ ಭಜನಾ ತಂಡ ಸುಬ್ರಹ್ಮಣ್ಯ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಬಳಿಕ ಆದಿ ಮೊಗೇರ್ಕಳರು ಗರಡಿ ಇಳಿಯುವುದು ಮತ್ತು ಅನ್ನ ಸಂತರ್ಪಣೆ ನೆರವೇರಿತು.ನಂತರ ಆದಿಮೊಗೇರ್ಕಳರು ರಂಗಸ್ಥಳದಲ್ಲಿ ನರ್ತನ ಸೇವೆ ನೆರವೇರಿಸಿದರು.ಬಳಿಕ ಶ್ರೀ ದೈವಗಳು ಹಾಲು ಕುಡಿಯುವ ಕಾರ್ಯ ನಡೆಯಿತು.ನಂತರ ಸತ್ಯದೇವತೆ ತನ್ನಿಮಾನಿಗ ಗರಡಿ ಇಳಿದು ರಂಗಸ್ಥಳ ಪ್ರವೇಶಿಸಿತು.ನಂತರ ನರ್ತನ ಸೇವೆ ನೆರವೇರಿಸಿತು.ಬಳಿಕ ಆದಿಮೊಗೇರ್ಕಳರು ಮತ್ತು ತನ್ನಿಮಾನಿಗ ದೈವಗಳು ರಂಗಸ್ಥಳದಲ್ಲಿ ನರ್ತನ ಸೇವೆ ನೆರವೇರಿಸಿದರು.ಮುಂಜಾನೆ ದೈವಗಳು ಭಕ್ತರಿಗೆ ಪ್ರಸಾದ ವಿತರಿಸಿದರು.


ಕೊರಗಜ್ಜ ನೇಮೋತ್ಸವ:
ಗುರುವಾರ ಬೆಳಗ್ಗೆ ಕಾರಣಿಕ ಶ್ರೀ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ ಆರಂಭಗೊAಡಿತು.ಬಳಿಕ ನರ್ತನ ಸೇವೆ ನಡೆಯಿತು. ಈ ಸಂದರ್ಭ ಶ್ರೀ ದೈವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಚಕ್ಕುಲಿ ಹಾರ, ವೀಳ್ಯದೆಲೆಯ ಹಾರ, ಕೇಪುಳ ಹೂವಿನ ಹಾರ, ಸುಗಂಧರಾಜದ ಹಾರ, ಸೇವಂತಿಗೆ ಹಾರ, ಕಾಕಡ ಮಲ್ಲಿಗೆ ಹಾರ, ಮಂಗಳೂರು ಮಲ್ಲಿಗೆ ಹಾರ ಸಮರ್ಪಿಸಿದರು. ನರ್ತನ ಸೇವೆಯ ನಂತರ ಶ್ರೀ ಸ್ವಾಮಿ ಕೊರಗಜ್ಜ ದೈವವು ಸರ್ವ ಭಕ್ತರಿಗೆ ಪ್ರಸಾದ ವಿತರಿಸಿತು.
ಅಜ್ಜನ ನೇಮಕ್ಕೆ ಹರಿದು ಬಂದ ಭಕ್ತ ಸಾಗರ:
ಅಜ್ಜನ ನೇಮೋತ್ಸವವನ್ನು ವೀಕ್ಷಿಸಲು ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.ಸಹಸ್ರಾರು ಭಕ್ತರು ಅಜ್ಜನಿಂದ ಕರಿಗಂಧ ಸ್ವೀಕರಿಸಿದರು. ಅಲ್ಲದೆ ಅರಿಕೆ, ಹರಿಕೆ, ಕಾಣಿಕೆ ಸಮರ್ಪಣೆ ನೆರವೇರಿಸಿದರು.ನೇಮೋತ್ಸವದ ನಿಮಿತ್ತ ಉಪಹಾರ ಮತ್ತು ಮದ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆ ನೆರವೇರಿತು.ಶುಕ್ರವಾರ ಬೆಳಗ್ಗೆ ಪತ್ರಕರ್ತ ಲೋಕೇಶ್ ಬಿ.ಎನ್ ಮತ್ತು ಮನೆಯವರಿಂದ ಶ್ರೀ ಸ್ವಾಮಿ ಕೊರಗಜ್ಜ ದೈವದ ಹರಕೆಯ ನೇಮೋತ್ಸವ ನಡೆಯಿತು.ದ್ವಿ ದಿನಗಳ ನೇಮೋತ್ಸವ ಸಂದರ್ಭ ನೇಮೋತ್ಸವ ಸಮಿತಿ ಅಧ್ಯಕ್ಷ ಮಾಧವ.ಡಿ.ದೇವರಗದ್ದೆ ಸೇರಿದಂತೆ ಸಹಸ್ರಾರು ಭಕ್ತರು ಆಗಮಿಸಿ ದೈವದ ನೇಮೋತ್ಸವ ವೀಕ್ಷಿಸಿ ಕೃತಾರ್ಥರಾದರು.ನೇಮೋತ್ಸವದ ನಿಮಿತ್ತ ದೈವಸ್ಥಾನವನ್ನು ವಿಶೇಷ ಹೂವಿನ ಅಲಂಕಾರದಿAದ ಸಿಂಗರಿಸಲಾಗಿತ್ತು.ಅಲ್ಲದೆ ಆಕರ್ಷಕ ವಿದ್ಯುದ್ದೀಪಾಲಂಕಾರದಿಂದ ದೈವಸ್ಥಾನ ಮತ್ತು ದೈವಸ್ಥಾನದ ಪರಿಸರ ಕಂಗೊಳಿಸಿತು.

ರಾಜ್ಯ