
ಪುತ್ತೂರು: ಶೇಂದಿ (ಕಳಿ) ಕೊಂಡೊಯ್ಯುತ್ತಿದ್ದ ವ್ಯಕ್ತಿಯನ್ನು ತಡೆದು ಆತನ ವಿರುದ್ದ ಪ್ರಕರಣ ದಾಖಲಿಸಿ, ವಾಹನ ಸೀಝ್ ಮಾಡಿದ್ದಲ್ಲದೆ ಆತನಿಂದ ಲಂಚವನ್ನು ಪಡೆದ ಅಧಿಕಾರಿಯಿಂದ ಲಂಚದ ಹಣವನ್ನು ಶಾಸಕರು ಮರಳಿ ಕೊಡಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಪುತ್ತೂರು ಕ್ಷೇತ್ರ ವ್ಯಾಪ್ತಿಯ ಗ್ರಾಮವೊಂದರಲ್ಲಿ ಗ್ರಾಮಕರಣಿಕರೋರ್ವರು ಕಡತ ವಿಲೇವಾರಿಗೆ 30 ಸಾವಿರ ರೂ ಲಂಚ ಪಡೆದುಕೊಂಡಿದ್ದು ಲಂಚ ಪಡೆದ ಮೊತ್ತಕ್ಕೆ 5 ಸಾವಿರ ಸೇರಿಸಿ ಮರಳಿಸುವಂತೆ ಶಾಸಕ ಅಶೋಕ್ ರೈ ಸೂಚಿಸಿದ್ದಾರೆ.


ಏನಿದು ಘಟನೆ
ಕೋಡಿಂಬಾಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಷಯ ತಿಳಿಸಿದ ಶಾಸಕ ಅಶೋಕ್ ರೈ ಶೇಂದಿ ಕೊಂಡೊಯ್ಯತ್ತಿದ್ದ ಓರ್ವ ಬಡಪಾಯಿಯ ವಾಹನ ನಿಲ್ಲಿಸಿದ್ದ ಅಬಕಾರಿ ಇಲಾಖೆಯವರು ಆತನನ್ನು ತಡೆದು ಶೇಂದಿ ಕೊಂಡು ಹೋಗುವುದು ಯಾಕೆ ಎಂದೆಲ್ಲಾ ಆತನನ್ನು ಬೆದರಿಸಿ ಆತನ ವಿರುದ್ದ ಪ್ರಕರಣ ದಾಖಲಿಸಿದ್ದು ಮಾತ್ರವಲ್ಲದೆ ಆತನ ವಾಹನವನ್ನು ಜಪ್ತಿ ಮಾಡಿದ್ದಾರೆ. ಆ ಬಳಿಕ ಆತನಿಂದ 50000 ಲಂಚವನ್ನು ಪಡೆದುಕೊಂಡಿದ್ದಾರೆ. ಈ ವಿಚಾರವನ್ನು ಆತ ತನ್ನ ಬಳಿ ಹೇಳಿದಾಗ ಕಚೇರಿಗೆ ಅಧಿಕಾರಿಯನ್ನು ಕರೆಸಿ ಲಂಚ ಪಡೆದುಕೊಂಡಿದ್ದ ಮೊತ್ತವನ್ನು ಸೇಂದಿ ಮಾರಾಟಗಾರನಿಗೆ ಮರಳಿಸಿದ್ದೇನೆ. ಅನ್ಯಾಯವಾಗಿ ಓರ್ವ ಬಡಪಾಯಿಯಿಂದ ಲಂಚ ಪಡೆದುಕೊಳ್ಳುತ್ತಾರೆಂದರೆ ಏನೆನ್ನಬೇಕು. ಲಂಚ,ಭೃಷ್ಟಾಚಾರವನ್ನು ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಶಾಸಕರು ಹೇಳಿದರು.
30 ಸಾವಿರ ಲಂಚ ಪಡೆದ ಗ್ರಾಮಕರಣಿಕ
35 ಸಾವಿರ ಮರಳಿ ಕೊಡಿಸಿದ ಶಾಸಕ ರೈ.
ಜಮೀನಿಗೆ ಸಂಬಂಧಪಟ್ಟ ಕಡತವನ್ನು ವಿಲೇವಾರಿ ಮಾಡುವಾಗ ಗ್ರಾಮ ಕರಣಿಕ ಲಂಚ ಪಡೆದಿದ್ದ. ನಾನು ಲಂಚ ಕೊಡುವುದಿಲ್ಲ ಶಾಸಕರಲ್ಲಿ ದೂರು ನೀಡುವುದಾಗಿ ವ್ಯಕ್ತಿ ಹೇಳಿದಾಗ ಗ್ರಾಮ ಕರಣಿಕ ನನಗೆ ಶಾಸಕರ ಪರಿಚಯ ಇದೆ ಎಂದು ಹೇಳಿದ್ದ. ಲಂಚ ಕೊಟ್ಟ ವ್ಯಕ್ತಿ ಶಾಸಕರಲ್ಲಿ ದೂರು ನೀಡಿದ್ದು 24 ಗಂಟೆಯೊಳಗೆ ಪಡೆದ ಮೊತ್ತಕ್ಕೆ 5 ಸಾವಿರ ಸೇರಿಸಿ ಮರಳಿಸಬೇಕು ಎಂದು ಖಡಕ್ ಸೂಚನೆ ನೀಡಿದ್ದಾರೆ.