
ಬೆಳ್ತಂಗಡಿ: ಮುಂಡಾಜೆ ಗ್ರಾಮದ ಕಡಂಬಳ್ಳಿ ವಾಳ್ಯದ ಮನೆಯೊಂದರ ನೆಲಮಾಳಿಗೆಯಲ್ಲಿ ಇರಿಸಲಾಗಿದ್ದ ಚಿನ್ನಾಭರಣ ಕಳವಾಗಿರುವ ಪ್ರಕರಣದ ಕುರಿತು ಪೊಲೀಸರಿಗೆ ದೂರು ನೀಡಿದ ಎರಡೇ ದಿನಗಳಲ್ಲಿ ದೂರುದಾರರ ಮನೆಯಂಗಳದಲ್ಲೇ ಕಳವಾದ ಎಲ್ಲ ಚಿನ್ನಾಭರಣ ಪತ್ತೆಯಾಗಿದೆ.


ಪ್ರಮೋದ ವಿ. ಭಿಡೆ ಅವರು ತಮ್ಮ ಮನೆಯ ಸಾರಣೆ ಹಾಗೂ ಪೈಂಟಿಂಗ್ ಕೆಲಸವನ್ನು ಕಾರ್ಮಿಕರ ಮೂಲಕ ಜು. 5ರಂದು ಆರಂಭಿಸಿದ್ದು, ಇದಕ್ಕೆ ಮೊದಲು ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಅವರ ಪತ್ನಿ ಮನೆಯ ನೆಲಮಾಳಿಗೆಯಲ್ಲಿ ಕೋಣೆಗೆ ಬೀಗ ಹಾಕದೆ ಇರಿಸಿದ್ದರು. 10ರಿಂದ 13 ಮಂದಿ ಕಾರ್ಮಿಕರು ಜು. 19ರಂದು ಕಾಮಗಾರಿ ಮುಗಿಸಿ ತೆರಳಿದ್ದರು.
ಸೆ. 12ರಂದು ಕಾರ್ಯಕ್ರಮಕ್ಕೆ ತೆರಳುವ ವೇಳೆ ಆಭರಣ ಧರಿಸಲು ಆಭರಣ ಇರಿಸಲಾಗಿದ್ದ ಸ್ಥಳಕ್ಕೆ ಹೋಗಿ ನೋಡಿದಾಗ ಸುಮಾರು 5 ಲಕ್ಷ ರೂ. ಮೌಲ್ಯದ 122 ಗ್ರಾಂ. ಚಿನ್ನಾಭರಣ ಕಳವಾಗಿರುವ ಘಟನೆ ಬೆಳಕಿಗೆ ಬಂದಿತ್ತು. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪೊಲೀಸರು ಪ್ರಕರಣದ ಕುರಿತು ಕೆಲವರನ್ನು ಠಾಣೆಗೆ ಕರೆಯಿಸಿ ತನಿಖೆ ನಡೆಸಿದ್ದರು.
ತನಿಖೆ ಚುರುಕುಗೊಳ್ಳುತ್ತಿದ್ದಂತೆ ಕಳವಾದ ಚಿನ್ನಾಭರಣ ಶುಕ್ರವಾರ ಬೆಳಗ್ಗೆ ಪ್ರಮೋದ್ ವಿ. ಭಿಡೆಯವರ ಮನೆಯಂಗಳದಲ್ಲೇ ಪತ್ತೆಯಾಗಿದೆ. ಬೆಳ್ತಂಗಡಿ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ ಹಾಗೂ ತಂಡದವರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ