![](https://newsroomfirst.com/wp-content/uploads/2023/09/vitla-1.jpeg)
ವಿಟ್ಲ : ಸೇತುವೆಗೆ ಬೈಕ್ ಡಿಕ್ಕಿಹೊಡೆದ ಪರಿಣಾಮ ಬೈಕ್ ಸವಾರ 40 ಅಡಿ ಆಳದ ಹೊಳೆಗೆ ಬಿದ್ದಿದ್ದು, ಸ್ಥಳೀಯರು ರಕ್ಷಣೆ ಮಾಡಿದ ಘಟನೆ ವಿಟ್ಲ ಪಡ್ನೂರು ಗ್ರಾಮದ ಕೊಡಂಗಾಯಿಯಲ್ಲಿ ನಡೆದಿದೆ.
![](https://newsroomfirst.com/wp-content/uploads/2023/09/vitla-2.jpeg)
ಹೊಳೆಗೆ ಬಿದ್ದ ವ್ಯಕ್ತಿಯನ್ನು ಕೊಳ್ನಾಡು ಗ್ರಾಮದ ಮಂಕುಡೆ ನಿವಾಸಿ ಹರ್ಷವರ್ಧನ್ ಭಟ್(55) ಎಂದು ಗುರುತಿಸಲಾಗಿದೆ. ಹರ್ಷವರ್ಧನ್ ಮಂಜಾನೆ 4 ಗಂಟೆ ಸಂದರ್ಭ ಕೆಲಸಕ್ಕೆಂದು ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಬೈಕ್ ನ ನಿಯಂತ್ರಣ ತಪ್ಪಿ ವಿಟ್ಲ-ಸಾಲೆತ್ತೂರು ರಸ್ತೆಯ ಕೊಡಂಗಾಯಿ ಸೇತುವೆಯ ತಡೆಗೋಡೆಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿ ಹೊಡೆದ ಸಂದರ್ಭ ಸವಾರ 40ಅಡಿ ಆಳದ ಹೊಳೆಗೆ ಬಿದ್ದಿದ್ದರು. ಇದನ್ನು ನೋಡಿದ ಸ್ಥಳೀಯರು ಹುಡುಕತೊಡಗಿದಾಗ ಐವತ್ತು ಮೀಟರ್ ದೂರದಲ್ಲಿ ಹೊಳೆ ಮಧ್ಯೆ ನೀರಿನಲ್ಲಿ ಬೊಬ್ಬೆ ಹೊಡೆಯುವ ಶಬ್ದ ಕೇಳಿಸಿದೆ. ತಕ್ಷಣವೇ ಹೊಳೆ ನೀರಿಗೆ ಹಾರಿದ ಯುವಕರು ವ್ಯಕ್ತಿಯನ್ನು ಮೇಲಕ್ಕೆತ್ತಿ ರಸ್ತೆಗೆ ತಂದು ವಿಚಾರಿಸಿದಾಗ ತನ್ನ ಪರಿಚಯ ತಿಳಿಸಿದ್ದಾರೆ. ಗಾಯಾಳು ಹರ್ಷವರ್ಧನ್ ಭಟ್ ರನ್ನು ಉಪಚರಿಸಿದ ಯುವಕರು ಆಟೋ ಮೂಲಕ ಅವರ ಮನೆಗೆ ತಲುಪಿಸಿ ಮಾನವೀಯತೆ ಮೆರೆದಿದ್ದಾರೆ.