
ಪುತ್ತೂರು: ಜೊತೆಯಾಗಿ ಜ್ಯೂಸ್ ಕುಡಿಯುತ್ತಿದ್ದ ವಿಭಿನ್ನ ಸಮುದಾಯದ ಸಹಪಾಠಿ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯನ್ನು ಅಡ್ಡಗಟ್ಟಿ ವಿದ್ಯಾರ್ಥಿಯನ್ನು ಕರೆದೊಯ್ದು ಹಲ್ಲೆ ನಡೆಸಿದ ಪ್ರಕರಣ ಮಂಗಳವಾರ ಪುತ್ತೂರಿನಲ್ಲಿ ನಡೆದಿದೆ.
ಪುತ್ತೂರು ನಗರದ ಪರ್ಲಡ್ಕ ಗೋಳಿಕಟ್ಟೆ ನಿವಾಸಿ ಮಹಮ್ಮದ್ ಫಾರಿಸ್(18)ಹಲ್ಲೆಗೊಳಗಾದ ವ್ಯಕ್ತಿ. ಈತ ತನ್ನ ಸಹಪಾಠಿ ವಿದ್ಯಾರ್ಥಿನಿಯ ಜೊತೆಗೆ ಬಸ್ಸು ನಿಲ್ದಾಣದ ಬಳಿಯಲ್ಲಿ ಜ್ಯೂಸ್ ಕುಡಿಯತ್ತಿದ್ದ ಎನ್ನಲಾಗಿದ್ದು, ಈ ಸಂದರ್ಭದಲ್ಲಿ ಸುಮಾರು 15 ಮಂದಿಯ ತಂಡ ಅಲ್ಲಿಗೆ ಆಗಮಿಸಿ ಆತನ ಹೆಸರು ಕೇಳಿ ಬಳಿಕ ಒತ್ತಾಯದಲ್ಲಿ ಕರೆದೊಯ್ದು ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ.



ಹಲ್ಲೆಗೊಳಗಾಗಿರುವ ಮಹಮ್ಮದ್ ಫಾರಿಸ್ ಪುತ್ತೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾನು ಮತ್ತು ನನ್ನ ತರಗತಿಯ ವಿದ್ಯಾರ್ಥಿನಿ ಜ್ಯೂಸ್ ಕುಡಿಯುತ್ತಿದ್ದ ವೇಳೆಯಲ್ಲಿ ಅಲ್ಲಿಗೆ ಬಂದ ಸುಮಾರು 15 ಮಂದಿ ಪುತ್ತೂರಿನ ಐಟಿಐ ಕಾಲೇಜ್ ವಿದ್ಯಾರ್ಥಿಗಳು ನನ್ನ ಹೆಸರು ಕೇಳಿದರು. ನಾನು ಹೆಸರು ಹೇಳಿದ ಬಳಿಕ ನಿನ್ನಲ್ಲಿ ಮಾತನಾಡಲಿದೆ ಎಂದು ನನ್ನನ್ನು ರೂಂ ಒಂದಕ್ಕೆ ಕರೆದೊಯ್ದರು. ಅಲ್ಲಿ ಸುಮಾರು 50 ಮಂದಿ ಸೇರಿಕೊಂಡು ತನ್ನ ಮೇಲೆ ವೈರ್ ಮತ್ತು ಲಾಠಿಯಿಂದ ಹೊಡೆದರು. ಕಬ್ಬಿಣ ಬಿಸಿ ಮಾಡಿ ಮೈಮೇಲಿಟ್ಟು ಹಲ್ಲೆ ನಡೆಸಿದರು, ಬಳಿಕ ನೀನು ಪೊಲೀಸರಿಗೆ ದೂರು ನೀಡಿದರೆ ನಿನ್ನನ್ನು ಕೊಲೆ ಮಾಡುತ್ತೇವೆ. ನಿನ್ನ ಮೇಲೆ ಪೋಕ್ಸೋ ಕಾಯ್ದೆ ದಾಖಲಾಗುವಂತೆ ಮಾಡುತ್ತೇವೆ ಎಂದು ಹೆದರಿಸಿದರು ಎಂದು ಗಾಯಾಳು ಮಹಮ್ಮದ್ ಫಾರಿಸ್ ತಿಳಿಸಿದ್ದಾರೆ.

ಎಸ್ಡಿಪಿಐ, ಮುಸ್ಲಿಂ ಯುವಜನ ಪರಿಷತ್ ಖಂಡನೆ..

ವಿದ್ಯಾರ್ಥಿಯ ಮೇಲೆ ನಡೆಸಿರುವ ಹಲ್ಲೆಯನ್ನು ಪುತ್ತೂರಿನ ಎಸ್ಡಿಪಿಐ ಮತ್ತು ಮುಸ್ಲಿಂ ಯುವಜನ ಪರಿಷತ್ ಖಂಡಿಸಿದೆ.
ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿಯ ಆರೋಗ್ಯ ವಿಚಾರಿಸಿದ ಎಸ್ಡಿಪಿಐ ಕ್ಷೇತ್ರ ಸಮಿತಿ ಅಧ್ಯಕ್ಷ ಇಬ್ರಾಹಿಂ ಹಾಜಿ ಸಾಗರ್ ಮತ್ತು ಮುಸ್ಲಿಂ ಯುವಜನ ಪರಿಷತ್ ಅಧ್ಯಕ್ಷ ಅಶ್ರಫ್ ಹಾಜಿ ಕಲ್ಲೇಗ ಅವರು ಕೋಮು ಗಲಭೆ ನಡೆಸಿ ಚುನಾವಣೆಯನ್ನು ಎದುರಿಸಲು ಈ ಹಲ್ಲೆ ನಡೆಸಲಾಗಿದೆ ಚುನಾವಣೆಯಲ್ಲಿ ಲಾಭ ಪಡೆಯಲು ಬಜರಂಗದಳದ ಗೂಂಡಾಗಳು ಈ ರೀತಿ ಅಮಾಯಕ ವಿದ್ಯಾರ್ಥಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಹಲ್ಲೆ ಆರೋಪಿಗಳನ್ನು ತಕ್ಷಣವೇ ಪೊಲೀಸರು ಬಂಧಿಸದಿದ್ದಲ್ಲಿ ನಾಳೆ ಪೊಲೀಸ್ ಇಲಾಖೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು. ಎಂದು ಎಚ್ಚರಿಸಿದ್ದಾರೆ.