
ಜ. 28 ರಂದು ಉಡುಪಿಯ ಕಾಪು ರಾಷ್ಟ್ರೀಯ ಹೆದ್ದಾರಿಯ 66ರ ಉಳಿಯಾರಗೋಳಿ ಕೋತಲಕಟ್ಟೆಯಲ್ಲಿ ಎರಡು ಬೈಕ್ ಗಳ ನಡುವೆ ಅಪಘಾತ ಸಂಭವಿಸಿ ಓರ್ವ ಮೃತಪಟ್ಟು, ಇಬ್ಬರು ಸವಾರರು ಗಾಯಗೊಂಡ ಘಟನೆ ನಡೆದಿದೆ.

ಸಹಸವಾರ ಪಾಂಗಾಳ ದುರ್ಗಾ ವೆಲ್ ರಿಂಗ್ ವರ್ಕ್ಸ್ ಕಾರ್ಮಿಕನಾಗಿರುವ ಮಲ್ಲೇಶ್ (53) ಎಂಬಾತ ಮೃತಪಟ್ಟಿದ್ದು, ಬೈಕ್ ಸವಾರ ಜಯನ್ ಗಾಯಗೊಂಡಿದ್ದಾರೆ.ಉಡುಪಿಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಪಲ್ಸರ್ ಬೈಕ್ ಮತ್ತು ಉಳಿಯಾರಗೋಳಿ ಸರ್ವೀಸ್ ರಸ್ತೆಯಿಂದ ಹೆದ್ದಾರಿಗೆ ಪ್ರವೇಶಿಸುತ್ತಿದ್ದ ಹೋಂಡಾ ಬೈಕ್ ಪರಸ್ಪರ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಅಪಘಾತದ ರಭಸಕ್ಕೆ ಸಹ ಸವಾರನಾಗಿದ್ದ ಮಲ್ಲೇಶ್ ರಸ್ತೆಗೆ ಎಸೆಯಲ್ಪಟ್ಟಿದ್ದು ತಲೆಗೆ ತೀವ್ರ ಗಾಯಗಳುಂಟಾಗಿತ್ತು. ಸವಾರ ಜಯನ್ ಕಾಲು ಮುರಿತಕ್ಕೊಳಗಾಗಿದ್ದು ಇಬ್ಬರನ್ನೂ ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದಿದ್ದು ಅಲ್ಲಿ ಮಲ್ಲೇಶ್ ಮೃತಪಟ್ಟಿದ್ದಾರೆ.ಪಲ್ಸರ್ ಬೈಕ್ ಸವಾರ ಶ್ರೀನಿವಾಸ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾಪು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
