
ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ(ರಿ.) ಸುಳ್ಯ ಇದರ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಕಾರದಲ್ಲಿ ಫೆಬ್ರವರಿ 01 ರಿಂದ 04 ರ ವರೆಗೆ ನಾಲ್ಕು ದಿನಗಳ ‘ರಂಗ ಸಂಭ್ರಮ- 2024’ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳ ಉತ್ಸವವನ್ನು ಎರ್ಪಡಿಸಲಾಗಿದೆ.


ಫೆ.01 ರಂದು ಗುರುವಾರ ಮೂಡುಬಿದ್ರೆಯ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಕಲಾವಿದರಿಂದ ಶ್ರೀಮತಿ ವೈದೇಹಿ ರಚಿಸಿರುವ, ಡಾ.ಜೀವನ್ ರಾಂ ಸುಳ್ಯ ನಿರ್ದೇಶನದ ಪ್ರಸಿದ್ಧ ಮಕ್ಕಳ ಪ್ರಯೋಗ ‘ನಾಯಿಮರಿ ನಾಟಕ’ ಪ್ರದರ್ಶನವಿರುತ್ತದೆ.
ಫೆ.02 ಶುಕ್ರವಾರ ಮಂಡ್ಯ ರಮೇಶ್ ನೇತೃತ್ವದ ನಟನ ಮೈಸೂರು ಸಂಸ್ಥೆಯ ಪ್ರತಿಭಾನ್ವಿತ ಕಲಾವಿದರಾದ ಮೇಘ ಸಮೀರ ಮತ್ತು ದಿಶಾ ರಮೇಶ್ ಅಭಿನಯಿಸುವ ‘ಕಣಿವೆಯ ಹಾಡು’ ನಾಟಕ ಪ್ರದರ್ಶನವಿರುತ್ತದೆ. ಅತೊಲ್ ಫ್ಯೂಗಾರ್ಡ್ ರಚಿಸಿದ ಈ ನಾಟಕವನ್ನು ಡಾ.ಮೀರಾಮೂರ್ತಿ ಕನ್ನಡಕ್ಕೆ ಅನುವಾದಿಸಿದ್ದು , ರಂಗಕರ್ಮಿ ಡಾ.ಶ್ರೀಪಾದ ಭಟ್ ನಿರ್ದೇಶಿಸಿದ್ದಾರೆ.

ಫೆ.03 ರಂದು ಮದ್ವಾದೀಶ ವಿಠಲದಾಸ ನಾಮಾಂಕಿತ ರಾಮಕೃಷ್ಣ ಕಾಟುಕುಕ್ಕೆ ಇವರಿಂದ’ ದಾಸ ಸಂಕೀರ್ತನೆ’ ಹಾಗೂ ಕೆನರಾ ಕಲ್ಚರಲ್ ಅಕಾಡೆಮಿ ಮಂಗಳೂರು ಇಲ್ಲಿನ ಕಲಾವಿದರಿಂದ, ನೀನಾಸಂ ಪದವೀಧರರಾದ ಭುವನ್ ಮಣಿಪಾಲರ ನಿರ್ದೇಶನ ಹಾಗೂ ಉಜ್ವಲ್ ಯು.ವಿ. ಇವರ ವಿನ್ಯಾಸದಲ್ಲಿ ‘ ಶೂರ್ಪಣಖಾಯನ ‘ ಎಂಬ ನಾಟಕ ಪ್ರದರ್ಶನವಿರುತ್ತದೆ.
ಫೆ.04 ರಂದು ಮೂಡುಬಿದ್ರೆಯ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಕಲಾವಿದರಿಂದ ಶಶಿರಾಜ್ ರಾವ್ ಕಾವೂರು ರಚಿಸಿದ, ಜೀವನ್ ರಾಂ ಸುಳ್ಯ ನಿರ್ದೇಶನದ
‘ ಏಕಾದಶಾನನ ‘ ನಾಟಕ ಪ್ರದರ್ಶನ ಮತ್ತು ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿ ಸುರತ್ಕಲ್ ಪ್ರಸ್ತುತ ಪಡಿಸುವ, ವಿದ್ವಾನ್ ಚಂದ್ರಶೇಖರ ನಾವುಡ ನಿರ್ದೇಶನದಲ್ಲಿ ‘ದಶಾವತಾರ’ ಎಂಬ ನೃತ್ಯ ರೂಪಕವು ಪ್ರದರ್ಶನಗೊಳ್ಳಲಿದೆ.
ಪ್ರತಿದಿನ ಸಂಜೆ 6.30 ಕ್ಕೆ ಸರಿಯಾಗಿ ಕಾರ್ಯಕ್ರಮ ಆರಂಭವಾಗಲಿದ್ದು , ರಂಗಸಂಭ್ರಮಕ್ಕೆ ಪ್ರವೇಶ ಉಚಿತವಾಗಿರುತ್ತದೆ ಎಂದು ರಂಗಮನೆಯ ಅಧ್ಯಕ್ಷ ಡಾ.ಜೀವನ್ ರಾಂ ಸುಳ್ಯ ತಿಳಿಸಿದ್ದಾರೆ.

