ಚುನಾವಣಾ ನಿಯಮ ಉಲ್ಲಂಘನೆ ಮಾಡುವ ವಾಟ್ಸಪ್‌ ಗ್ರೂಪ್‌ಗಳಿಗೂ ತಟ್ಟಿದ ಬಿಸಿ : ಕುಶಾಲನಗರದಲ್ಲಿ ವ್ಯಾಟ್ಸಪ್ ಗ್ರೂಪ್ ಅಡ್ಮಿನ್ ಗೆ ಚುನಾವಣಾಧಿಕಾರಿಯಿಂದ ನೋಟಿಸ್..!

ಚುನಾವಣಾ ನಿಯಮ ಉಲ್ಲಂಘನೆ ಮಾಡುವ ವಾಟ್ಸಪ್‌ ಗ್ರೂಪ್‌ಗಳಿಗೂ ತಟ್ಟಿದ ಬಿಸಿ : ಕುಶಾಲನಗರದಲ್ಲಿ ವ್ಯಾಟ್ಸಪ್ ಗ್ರೂಪ್ ಅಡ್ಮಿನ್ ಗೆ ಚುನಾವಣಾಧಿಕಾರಿಯಿಂದ ನೋಟಿಸ್..!

: ಕರ್ನಾಟಕದಲ್ಲಿ ವಿಧಾನಸಭಾ ಸಾರ್ವತ್ರಿಕ ಚುನಾವಣಾ ಸಂಬಂಧ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಸುದ್ದಿಪತ್ರಿಕೆಗಳು, ಸಾಮಾಜಿಕ ಜಾಲತಾಣಗಳು ಮತ್ತು ಇನ್ನಿತರೆ ಮೂಲಗಳಿಂದ ಯಾವುದೇ ರಾಜಕೀಯ ಪ್ರಚಾರ ಮಾಡಬೇಕಿದ್ದಲ್ಲಿ ಮತ್ತು ರಾಜಕೀಯ ಪ್ರೇರಿತ ಹೇಳಿಕೆ ನೀಡಬೇಕಿದ್ದಲ್ಲಿ ಚುನಾವಣಾ ಸಂಬಂಧ ನೇಮಕ ಮಾಡಲಾಗಿರುವ ಸಮಿತಿಯಿಂದ ಪೂರ್ವ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಇದೇ ನಿಯಮ ಉಲ್ಲಂಘನೆ ಮಾಡುವ ವಾಟ್ಸಪ್‌ ಗ್ರೂಪ್‌ಗಳಿಗೂ ಈಗ ಬಿಸಿ ತಟ್ಟಿದೆ
ಇದಕ್ಕೆ ಸಂಬಂಧಪಟ್ಟಂತೆ “ನಮ್ಮ ಕುಶಾಲನಗರ” ವಾಟ್ಸಪ್‌ ಗ್ರೂಪ್‌ಗೆ ಚುನಾವಣಾಧಿಕಾರಿ ಕಳುಹಿಸಿರುವ ನೋಟಿಸ್‌ ವೈರಲ್‌ ಆಗಿದೆ. ವೈರಲ್‌ ಆಗಿರುವ ಈ ನೋಟಿಸ್‌ ಕುರಿತು ಎಚ್‌ಟಿ ಕನ್ನಡವು ಖಚಿತಪಡಿಸಿಕೊಂಡಿದ್ದು, ಈ ರೀತಿ ನೋಟಿಸ್‌ ಜಾರಿ ಮಾಡಲಾಗುತ್ತಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ.

ಈ ರೀತಿ ವಾಟ್ಸಪ್‌ ಗ್ರೂಪ್‌ಗಳಿಗೆ ಚುನಾವಣಾ ಅಧಿಕಾರಿಗಳು ನೋಟಿಸ್‌ ಕಳುಹಿಸುವುದು ಇದೇ ಮೊದಲಲ್ಲ. 2019ರ ಸಾರ್ವತ್ರಿಕ ಚುನಾವಣೆಯಲ್ಲಿ ವಿವಿಧ ರಾಜ್ಯಗಳಲ್ಲಿ ಹಲವು ವಾಟ್ಸಪ್‌ ಗ್ರೂಪ್‌ಗಳಿಗೆ ಈ ರೀತಿ ನೋಟಿಸ್‌ ಕಳುಹಿಸಲಾಗಿತ್ತು. ಸೂಕ್ತ ಸ್ಪಷ್ಟನೆ ನೀಡದ ಅಡ್ಮಿನ್‌ಗಳ ಮೇಲೆ ಕ್ರಮ ಜರುಗಿಸಲಾಗಿತ್ತು.

ಕರ್ನಾಟಕದಲ್ಲಿ ಮತದಾನ ದಿನಾಂಕ ಘೋಷಣೆಯಾದ ಬಳಿಕ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈಗಾಗಲೇ ಮುದ್ರಣ ಮಾಧ್ಯಮಗಳು ಮತ್ತು ಟೀವಿ ಮಾಧ್ಯಮಗಳ ಮೇಲೆ ಆಯೋಗ ಕಣ್ಣಿಟ್ಟಿದೆ. ಇದೀಗ ಈ ವ್ಯಾಪ್ತಿಯಲ್ಲಿ ವಾಟ್ಸಪ್‌ ಗ್ರೂಪ್‌ಗಳ ಮೇಲೂ ಆಯೋಗದ ಅಧಿಕಾರಿಗಳು ಕಣ್ಣಿಟ್ಟಿದ್ದು, ನೀತಿ ಸಂಹಿತೆ ಉಲ್ಲಂಘಿಸಿದವರಿಗೆ ಕಾರಣ ಕೇಳಿ ನೋಟಿಸ್‌ ಬರುತ್ತಿದೆ.

ಮಡಿಕೇರಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳು ನಮ್ಮ ಕುಶಾಲನಗರ ಗ್ರೂಪ್‌ಗೆ ನೋಟಿಸ್‌ ಕಳುಹಿಸಿದ್ದಾರೆ. “ನೀವು ಅಡ್ಡಿನ್ ಆಗಿರುವ -ನಮ್ಮ ಕುಶಾಲನಗರ- ವಾಟ್ಸ್ ಆಪ್ ಗ್ರೂಪ್‌ನ ಮೂಲಕ ಯಾವುದೇ ಪೂರ್ವ ಆನುಮತಿ ಪಡೆಯದೇ ರಾಜಕೀಯ ಪ್ರೇರಿತ ಹೇಳಿಕೆಯ ವೀಡಿಯೋ ತುಣುಕನ್ನು ಹಂಚಿಕೊಂಡಿರುವುದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿರುತ್ತದೆ…” ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

“…ಮಾದರಿ ನೀತಿ ಸಂಹಿತೆ ಉಲ್ಲಂಘಿಸಿರುವ ಬಗ್ಗೆ ಪ್ರಜಾ ಪ್ರತಿನಿಧಿ ಕಾಯ್ದೆ 1951 ರ ರೀತ್ಯ ನಿಮ್ಮ ಮೇಲೆ ಏಕ ಕಾನೂನು ಕ್ರಮ ಜರುಗಿಸಬಾರದು ಎಂಬುದಕ್ಕೆ ಈ ನೋಟಿಸ್‌ ತಲುಪಿದ 24 ಗಂಟೆಯೊಳಗಾಗಿ ಖುದ್ದು ಲಿಖಿತ ಸಮಜಾಯಿಷಿಕೆಯನ್ನು ನೀಡಲು ಸೂಚಿಸಿದೆ. ತಪ್ಪಿದಲ್ಲಿ ನಿಮ್ಮ ಸಮಜಾಯಿಷಿಕೆ ಏನು ಇಲ್ಲವೆಂದು ಪರಿಗಣಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರ ಮತ್ತು ಉಪವಿಭಾಗಾಧಿಕಾರಿಯವರು ನೋಟಿಸ್‌ ಕಳುಹಿಸಿದ್ದಾರೆ.

“ಮಾದರಿ ನೀತಿ ಸಂಹಿತೆಯು ಜಾರಿಯಲ್ಲಿರುವ ಸಂದರ್ಭ ಪತ್ರಿಕೆ, ಮಾದ್ಯಮ, ಸಾಮಾಜಿಕ ಜಾಲತಾಣ ಹಾಗೂ ಇನ್ನಿತರೆ ಮೂಲಗಳಿಂದ ಯಾವುದೇ ರಾಜಕೀಯ ಪ್ರಚಾರ ಮಾಡಬೇಕಾದಲ್ಲಿ ಮತ್ತು ರಾಜಕೀಯ ಪ್ರೇರಿತ ಹೇಳಿಕೆ ನೀಡಬೇಕಾದಲ್ಲಿ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ನೇಮಕ ಮಾಡಲಾಗಿರುವ District Media Certification and Monitoring Committe ಇವರಿಂದ ಪೂರ್ವ ಅನುಮತಿ ಪಡೆಯಬೇಕಾಗಿರುತ್ತದೆ” ಎಂಬ ಎಚ್ಚರಿಕೆಯ ಸಂದೇಶವೂ ನೋಟಿಸ್‌ನಲ್ಲಿದೆ.

ಈಗಾಗಲೇ ಹಲವು ವಾಟ್ಸಪ್‌ ಗ್ರೂಪ್‌ಗಳಿಗೆ ಇಂತಹ ನೋಟಿಸ್‌ ಬಂದಿದೆ ಎನ್ನಲಾಗಿದೆ. ಹೀಗಾಗಿ ವಾಟ್ಸಪ್‌ ಗ್ರೂಪ್‌ ಹೊಂದಿರುವವರು ಎಚ್ಚರಿಕೆಯಿಂದ ಇರುವುದು ಉತ್ತಮ.

ವಾಟ್ಸಪ್‌ ಅಡ್ಮಿನ್‌ಗಳು ಏನು ಮಾಡಬಹುದು? ಏನು ಮಾಡಬಾರದು?
1.ಅನಗತ್ಯವಾಗಿ ಹಲವು ವಾಟ್ಸಪ್‌ ಗ್ರೂಪ್‌ಗಳನ್ನು ರಚಿಸಬೇಡಿ. ನೀವು ಅಡ್ಮಿನ್‌ ಆಗಿರುವ ಗ್ರೂಪ್‌ಗಳು ಯಾವುವು ಎಂದು ನೆನಪಿಸಿಕೊಳ್ಳಿ. ಅಲ್ಲಿ ನಡೆಯುವ ಚಟುವಟಿಕೆಗಳ ಮೇಲೆ ಕಣ್ಣಿಟ್ಟಿರಿ.

2.ಯಾವುದೇ ರೀತಿಯ ಚುನಾವಣಾ ಪ್ರಚಾರ ಸಂದೇಶಗಳನ್ನು ಕಳುಹಿಸದಂತೆ ಗುಂಪಿನ ಸದಸ್ಯರಿಗೆ ಎಚ್ಚರಿಸುವುದು.
3.ಚುನಾವಣೆ ಮುಗಿಯುವರೆಗೆ ವಾಟ್ಸಪ್‌ನಲ್ಲಿ ಮಾಹಿತಿ ಕಳುಹಿಸುವ ಆಯ್ಕೆಯನ್ನು ಬದಲಾಯಿಸುವುದು. “ಅಡ್ಮಿನ್‌ಗೆ ಮಾತ್ರ” ಆಯ್ಕೆಯನ್ನು ಸೆಟಪ್‌ ಮಾಡುವ ಮೂಲಕ ಯಾರೇ ಸಂದೇಶ, ವಿಡಿಯೋ, ಫೋಟೊ ಕಳುಹಿಸದಂತೆ ಎಚ್ಚರವಹಿಸಬಹುದು.
4.-ಚುನಾವಣಾ ಪ್ರಚಾರಕ್ಕೆ ಸಂಬಂಧಪಟ್ಟ ವಾಟ್ಸಪ್‌ ಗ್ರೂಪ್‌ಗಳು, ರಾಜಕೀಯ ವಾಟ್ಸಪ್‌ ಗ್ರೂಪ್‌ಗಳಿಗೆ ನಿಮ್ಮನ್ನು ಅಡ್ಮಿನ್‌ ಮಾಡಿದ್ದರೆ ಅಲ್ಲಿನ ಚಟುವಟಿಕೆಯ ಕುರಿತು ಎಚ್ಚರಿಕೆ ವಹಿಸುವುದು, ಗ್ರೂಪ್‌ನಿಂದ ಹೊರಬರುವುದು ಸೇರಿದಂತೆ ಹಲವು ಕ್ರಮಗಳ ಮೂಲಕ ಸುರಕ್ಷಿತವಾಗಿರಬಹುದು.
5.ಎಲ್ಲಾದರೂ ಅಡ್ಮಿನ್‌ಗೆ ಇಂತಹ ನೋಟಿಸ್‌ ಬಂದರೆ ನಿಗದಿಪಡಿಸಿದ ಸಮಯದೊಳಗೆ ಹೋಗಿ ಸ್ಪಷ್ಟನೆ ನೀಡಬೇಕು. ಇಲ್ಲವಾದರೆ ಮುಂದಿನ ಕ್ರಮಗಳನ್ನು ಎದುರಿಸಬೇಕಾಗಬಹುದು.

ರಾಜ್ಯ