
ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಅಂಗವಾಗಿ ಸುಬ್ರಹ್ಮಣ್ಯ ದಲ್ಲಿ ಜಾತ್ರೋತ್ಸವದ ಪ್ರಧಾನ ದಿನಗಳಾದ ಪಂಚಮಿ ಮತ್ತು ಷಷ್ಠಿಯಂದು ವಾಹನ ನಿಲ್ದಾಣ ವ್ಯವಸ್ಥೆಯನ್ನು ಪ್ರತ್ಯೇಕವಾಗಿ ನಿಗದಿಪಡಿಸಲಾಗಿದೆ.ಉತ್ಸವಕ್ಕೆ ಆಗಮಿಸುವ ಭಕ್ತಾದಿಗಳಿಗೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ವಾಹನಗಳಿಗೆ ನ.28 ಮತ್ತು 29 ರಂದು ವಿಶೇಷ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ನ.28ರಂದು ಸಂಜೆ 4 ಗಂಟೆಯಿಂದ ಎಲ್ಲಾ ವಾಹನಗಳು ನಿಗದಿ ಪಡಿಸಿದ ಪಾರ್ಕಿಂಗ್ ಸ್ಥಳದಲ್ಲೇ ನಿಲುಗಡೆಗೊಳಿಸಬೇಕು. ವಸತಿ ಗೃಹದಲ್ಲಿ ಕೊಠಡಿ ಕಾಯ್ದಿರಿಸಿದವರು 4 ಗಂಟೆಯ ಒಳಗೆ ನಿಗದಿ ಪಡಿಸಿದ ವಸತಿಗೃಹಗಳಿಗೆ ತೆರಳಬೇಕು. ಅಲ್ಲದೆ ತುರ್ತು ಸಂದರ್ಭ ಹೊರತು ಪಡಿಸಿ ಸ್ಥಳಿಯರಿಗೆ ಕೂಡಾ ಈ ನಿಯಮಗಳು ಅನ್ವಯವಾಗಲಿದೆ. ಆದುದರಿಂದ ಸಾರ್ವಜನಿಕರು ಸಹಕರಿಸಬೇಕು ಎಂದು ಸುಬ್ರಹ್ಮಣ್ಯ ಠಾಣಾಧಿಕಾರಿ ಮಂಜುನಾಥ್.ಟಿ. ವಿನಂತಿಸಿದ್ದಾರೆ.
ನಿಲ್ದಾಣ ಮಾರ್ಗಸೂಚಿ:
ಗುಂಡ್ಯ, ಉಪ್ಪಿನಂಗಡಿ, ಪುತ್ತೂರು, ಕಡೆಯಿಂದ ಬರುವ ಕೆ.ಎಸ್.ಆರ್.ಟಿ.ಸಿ ಬಸ್ಗಳು ಸುಬ್ರಹ್ಮಣ್ಯದ ವಲ್ಲೀಶ ಸಭಾ ಭವನದ ಬಳಿ, ಲಘು ವಾಹನಗಳಿಗೆ ಕುಮಾರಧಾರ ಹಲಿಪ್ಯಾಡ್ ಮತ್ತು ಪದವಿ ಪೂರ್ವ ಕಾಲೇಜು ಮೈದಾನ, ದ್ವಿಚಕ್ರ ವಾಹನಗಳಿಗೆ ಪದವಿ ಕಾಲೇಜು ಮೈದಾನ, ಬಿಲದ್ವಾರದ ಎದುರಿನ ಮೈದಾನ ಮತ್ತು ಪೊಲೀಸ್ ಕವಾಯತು ಮೈದಾನಗಳನ್ನು ನಿಲುಗಡೆಗೆ ವ್ಯವಸ್ಥೆಗೊಳಿಸಲಾಗಿದೆ. ಸುಳ್ಯ ಕಡೆಯಿಂದ ಬರುವ ಕೆ.ಎಸ್.ಆರ್.ಟಿ.ಸಿ ಬಸ್ಗಳು ಇಂಜಾಡಿ ಫಾರೆಸ್ಟ್ ವಸತಿ ಗೃಹದ ಬಳಿ, ದ್ವಿಚಕ್ರವಾಹನಗಳು ಅಟೋ ನಿಲ್ದಾಣದ ಬಳಿ, ಲಘು ವಾಹನಗಳು ಸವಾರಿ ಮಂಟಪದ ಪಾರ್ಕಿಂಗ್ ಸ್ಥಳದಲ್ಲಿ ನಿಲುಗಡೆಗೊಳಿಸಬೇಕು.ಅಟೋ ರಿಕ್ಷಾ ಚಾಲಕರು ಪ್ರಯಾಣಿಕರನ್ನು ಕುಮಾರಧಾರದಿಂದ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ಎದುರಿನ ತನಕ ಸಾಗಾಟ ಮಾಡಬಹುದಾಗಿದೆ. ಜಾತ್ರೋತ್ಸವಕ್ಕೆ ಅತ್ಯಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಕಾರಣ ಅವರ ಸುರಕ್ಷತಾ ದೃಷ್ಠಿಯಿಂದ ವಿಶೇಷ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ವಿಶೇಷ ವಾಹನ ನಿಲ್ದಾಣ ವ್ಯವಸ್ಥೆ ಆಯೋಜನೆ ಮಾಡುವ ಮೂಲಕ ಕ್ಷೇತ್ರದಲ್ಲಿ ಜಾತ್ರಾ ವೇಳೆ ವಾಹನ ದಟ್ಟಣೆ ಅಧಿಕವಾಗದಂತೆ ಸುಬ್ರಹ್ಮಣ್ಯ ಪೋಲೀಸರು ವಿಶೇಷ ಯೋಜನೆ ಮಾಡಿದ್ದಾರೆ.


