
ಅಕ್ರಮ ಜಾನುವಾರು ಸಾಗಾಟ ಮಾಡುತ್ತಿದ್ದ ಐವರನ್ನು ವೇಣೂರು ಪೊಲೀಸ್ ಠಾಣೆಯ ಎಸ್.ಐ.ಸೌಮ್ಯ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ.
ಬೆಳ್ತಂಗಡಿ ತಾಲೂಕು ಬಡಗಕಾರಂದೂರು ಗ್ರಾಮದ ನಡಾಯಿ ಎಂಬಲ್ಲಿ ಜ.4ರಂದು ಕಾರ್ಯಾಚರಣೆ ನಡೆಸಲಾಗಿದ್ದು ಉಪ್ಪಿನಂಗಡಿ ಸಮೀಪದ ಕರಾಯ ಗ್ರಾಮದ ತೌಸಿಫ್, ಪುತ್ತಿಲದ ಉಸ್ಮಾನ್, ಇಕ್ಬಾಲ್ ಪುತ್ತೂರು, ಇರ್ಫಾನ್ ಕರಾಯ ಮತ್ತು ಅನಾಸ್ ಕರಾಯ ಎಂಬವರನ್ನು ಬಂಧಿಸಲಾಗಿದೆ. ಬಂಧಿತ ಐವರ ವಿರುದ್ಧ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧ್ಯಾದೇಶ 2020ರಂತೆ ಕೇಸು ದಾಖಲಿಸಿಕೊಳ್ಳಲಾಗಿದೆ.
ಮಾರುತಿ ಒಮ್ನಿ ಕಾರನ್ನು ತಡೆದು ನಿಲ್ಲಿಸಿ ಕಾರು ಪರಿಶೀಲಿಸಿದಾಗ ಕಾರಿನಲ್ಲಿ ಚಾಲಕ ಹಾಗೂ ಇತರ ಇಬ್ಬರು ಇದ್ದು, ಕಾರಿನಲ್ಲಿ 5 ಜಾನುವಾರುಗಳನ್ನು ಹಿಂಸಾತ್ಮಕವಾಗಿ ಕೈಕಾಲು ಕಟ್ಟಿ ಸಾಗಾಟ ಮಾಡುತ್ತಿರುವುದು ಕಂಡು ಬಂದಿತ್ತು. ಸಾಗಾಟ ಮಾಡುತ್ತಿದ್ದ 5 ಜಾನುವಾರುಗಳನ್ನು ಹಾಗೂ ಅಕ್ರಮ ಸಾಗಾಟಕ್ಕೆ ಉಪಯೋಗಿಸಿದ ಮಾರುತಿ ಒಮ್ನಿ ಕಾರು ಮತ್ತು ದ್ವಿಚಕ್ರ ವಾಹನವನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಸ್ವಾಧೀನ ಪಡಿಸಿದ ಜಾನುವಾರುಗಳ ಅಂದಾಜು ಮೌಲ್ಯ 15,000 ರೂ. ಹಾಗೂ ವಾಹನಗಳ ಅಂದಾಜು ಮೌಲ್ಯ 1,75,000/- ರೂ. ಅಗಬಹುದು ಎಂದು ತಿಳಿದು ಬಂದಿದೆ.

