ಇತ್ತೀಚಿನ ದಿನಗಳಲ್ಲಿ ಮಕ್ಕಳು ಕಂಪ್ಯೂಟರ್ ನಲ್ಲಿಯೇ ಕ್ರಿಕೆಟ್, ವಾಲಿಬಾಲ್, ಫುಟ್ ಬಾಲ್ ಆಡುತ್ತಿರುವುದು ಕಳವಳಕಾರಿ, ದೈಹಿಕ ಕಸರತ್ತು ವ್ಯಾಯಾಮಕ್ಕೆ ಒತ್ತು ನೀಡುವ ಹೊರಾಂಗಣ ಆಟೋಟಗಳಲ್ಲಿ ಕ್ರೀಡಾ ಚಟುವಟಿಕೆಗಳಲ್ಲಿ ಮಕ್ಕಳು ಹೆಚ್ಚು ಹೆಚ್ಚು ಪಾಲ್ಗೊಳ್ಳಬೇಕು. ಪಠ್ಯದ ಜೊತೆಗೆ ಹೊರಾಂಗಣ ಕ್ರೀಡೆಗೂ ಆದ್ಯತೆ ನೀಡಬೇಕು. ಹಾಗಾದಲ್ಲಿ ಮಾತ್ರ ಮಕ್ಕಳ ಮಾನಸಿಕ ಮತ್ತು ದೈಹಿಕ ಬೆಳವಣಿಗೆ ಆಗಲು ಸಾಧ್ಯ ಮತ್ತು ಅವರು ಮುಂದೆ ಸಮಾಜಕ್ಕೆ ಆಸ್ತಿಯಾಗಬಲ್ಲದು. ಇಲ್ಲವಾದಲ್ಲಿ ಅಂತಹಾ ಮಕ್ಕಳು ದೈಹಿಕ ವ್ಯಾಯಾಮವಿಲ್ಲದೆ ಎಳೆ ವಯಸ್ಸಿನಲ್ಲಿಯೇ ಬೊಜ್ಜು, ಮಧುಮೇಹ, ಹೃದಯಘಾತ ಮುಂತಾದ ಮಾರಕ ರೋಗಗಳಿಗೆ ತುತ್ತಾಗಿ, ಸಮಾಜಕ್ಕೆ ಹೊರೆಯಾಗುವ ಎಲ್ಲಾ ಸಾಧ್ಯತೆ ಇದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ನುಡಿದರು. ದಿನಾಂಕ 20-11-2022ನೇ ಭಾನುವಾರದಂದು ನಗರದ ಬೋಂದೆಲ್ ಆಟದ ಮೈದಾನದಲ್ಲಿ ಪೃಥ್ವಿ ಚಾರಿಟೇಬಲ್ ಟ್ರಸ್ಟ್, ಮಹಾತ್ಮ ನಗರ, ಕ್ಷೇಮಭಿವೃದ್ಧಿ ಸಂಘ, ಕೆ. ಎಚ್. ಪಿ ಕಾಲೋನಿ ಕ್ಷೇಮಭಿವೃದ್ಧಿ ಸಂಘ, ಚೈತನ್ಯ ಮಹಿಳಾ ಮಂಡಳಿ ಹಾಗೂ ಗಣೇಶೋತ್ಸವ ಸಮಿತಿ ಜಂಟಿಯಾಗಿ ಮಕ್ಕಳ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಸೈಕಲ್ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಮಕ್ಕಳಲ್ಲಿ ಪರಿಸರ ಕಾಳಜಿ ಮತ್ತು ಆರೋಗ್ಯ ಕಾಳಜಿ ಮೂಡಿಸುವ ಸಲುವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪೃಥ್ವಿ ಚಾರಿಟೇಬಲ್ ಟ್ರಸ್ಟ್ ಇದರ ಸದಸ್ಯರಾದ ಶ್ರೀ ಕೃಷ್ಣಪ್ಪ ಪಿ ಮತ್ತು ರಾಮಚಂದ್ರ ಭಟ್ ತಿಳಿಸಿದರು. ಸುಮಾರು 30 ಮಕ್ಕಳು ಈ ಸೈಕಲ್ ಜಾಥಾದಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು. ಮಕ್ಕಳ ನಿಧಾನಗತಿಯ ಸೈಕಲ್ ರೇಡ್ ಮತ್ತು ಸ್ಪೀಡ್ ಸೈಕಲ್ ರೇಸ್ ಸ್ಪರ್ಧೆ ನಡೆಯಿತು.