
ಬಂಟ್ವಾಳ: ಕೆಲಸ ಕೊಡಿಸುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಜಾಹಿರಾತನ್ನು ನಂಬಿ ಮಾರು ಹೋಗುವ ಮುನ್ನ ಯುವಕರೇ ಎಚ್ಚರವಾಗಿರಿ. ಏಕೆಂದರೇ ಬಂಟ್ವಾಳದ ವೀರಕಂಭ ಗ್ರಾಮದ ನಿವಾಸಿಯೊಬ್ಬರು ಫೇಸ್ಬುಕ್ನಲ್ಲಿ ಬಂದ ಜಾಹೀರಾತಿನ ಮೂಲಕ ಉದ್ಯೋಗಕ್ಕೆ ಸಂಪರ್ಕಿಸಿ ಬರೋಬ್ಬರಿ 9.79 ಲಕ್ಷ ರೂ. ಕಳೆದುಕೊಂಡಿದ್ದಾರೆ.
ವೀರಕಂಭ ಗ್ರಾಮದ ನಡಾಲು ರಾಜೇಶ್ ಆಳ್ವ ಎನ್. ವಂಚನೆಗೊಳಗಾದವರು. ಅವರು ಬೆಂಗಳೂರಿನ ಕಂಪೆನಿ ಯೊಂದರಲ್ಲಿ ಉದ್ಯೋಗದಲ್ಲಿದ್ದು, ಸದ್ಯ ಈತ ವರ್ಕ್ ಫ್ರಾಮ್ ಹೋಮ್ನಲ್ಲಿದ್ದನು. ಹೀಗಿರುವಾಗಲೇ ಯುವಕ ಫೇಸ್ಬುಕ್ನಲ್ಲಿ ಕೆಲಸಕ್ಕೆ ಬೇಕಾಗಿದ್ದಾರೆ ಎಂಬ ಜಾಹಿರಾತನ್ನು ನೋಡಿದ್ದಾನೆ. ನಂತರ ಜಾಹಿರಾತು ನೀಡಿದವರಿಗೆ 18 ಡಿಸೆಂಬರ್ 2022ರಂದು ವಾಟ್ಸ್ಆ್ಯಪ್ ಮೂಲಕ ಸಂಪರ್ಕ ಮಾಡಿದ್ದಾನೆ. ನಂತರ ಆರೋಪಿ ಕೆಲಸದ ಫಾರ್ಮ್ನ್ನು ತುಂಬುವಂತೆ ಸಂತ್ರಸ್ತನಿರಿಗೆ ಕಳುಹಿಸಿದ್ದಾರೆ.
ಬಳಿಕ ಅವರು ಕಳುಹಿಸಿದ ಅಪ್ಲಿಕೇಶನ್ ಮೂಲಕ ಬಯೋ ಡೇಟಾ ಕಳುಹಿಸಿದ್ದು, ಮುಂದೆ ಅಪರಿಚಿತ ವ್ಯಕ್ತಿಗಳು ತಿಳಿಸಿದ ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ವೀಸಾ ಪ್ರೊ›ಸೆಸಿಂಗ್ ಚಾರ್ಜ್, ಕಸ್ಟಮ್ ಕ್ಲಿಯರೆನ್ಸ್ ಹಾಗೂ ವಿವಿಧ ಶುಲ್ಕಗಳನ್ನು ಎಟಿಎಂ ಕ್ಯಾಶ್ ಡೆಪಾಸಿಟ್ ಮೆಷಿನ್, ಪೋನ್ ಪೇ, ಪೇಟಿಎಂ ಮೂಲಕ 9.79 ಲಕ್ಷ ರೂ. ಹಣ ಜಮೆ ಮಾಡಿದ್ದಾರೆ.
ಈ ಸಂಬಂಧ ಸಿಇಎನ್ ಪೊಲೀಸ್ ಠಾಣೆಯಲ್ಲಿ ಐಟಿ ಕಾಯ್ದೆಯ ಸೆಕ್ಷನ್ 66 (ಡಿ) ಮತ್ತು ಐಪಿಸಿಯ ಸೆಕ್ಷನ್ 419 ಮತ್ತು 420 ರ ಅಡಿಯಲ್ಲಿ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
