

ಸುವರ್ಣ ಮಹೋತ್ಸವ ಸಂಭ್ರಮದಲ್ಲಿ ಕ್ಯಾಂಪೋದ ವಿವಿಧ ಯೋಜನೆಗಳಿಗೆ ಅಮಿತ್ ಶಾ ಅವರಿಂದ ಚಾಲನೆ ..


ಪುತ್ತೂರು: ಪ್ರತಿಷ್ಠಿತ ಅಂತರಾಜ್ಯ ಸಹಕಾರಿ ಸಂಸ್ಥೆಯಾಗಿರುವ ಕ್ಯಾಂಪ್ಕೋದ ಸುವರ್ಣ ಮಹೋತ್ಸವ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕೇಂದ್ರ ಗೃಹ ಸಚಿವ ಮತ್ತು ದೇಶದ ಪ್ರಥಮ ಸಹಕಾರಿ ಸಚಿವರಾಗಿರುವ ಅಮಿತ್ ಶಾ ಅವರು ಇಂದು ಅಪರಾಹ್ನ 4.10ಕ್ಕೆ ತೆಂಕಿಲಕ್ಕೆ ಆಗಮಿಸಿದರು.ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಡಿ, ಉಪಾಧ್ಯಕ್ಷ ಶಂಕರನಾರಾಯಣ ಖಂಡಿಗ, ವ್ಯವಸ್ಥಾಪಕ ನಿರ್ದೇಶಕ ಹೆಚ್.ಎಂ.ಕೃಷ್ಣಕುಮಾರ್ ಮತ್ತು ಆಡಳಿತ ಮಂಡಳಿ
ನಿರ್ದೇಶಕರು ಸಚಿವರನ್ನು ಸ್ವಾಗತಿಸ ಬರಮಾಡಿ ಕೊಂಡರು, ತೆಂಕಿಲ ವಿವೇಕಾನಂದ ಶಾಲಾ ಮೈದಾನದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಅಮಿತ್ ಶಾ ಅವರೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ದ.ಕ.ಸಂಸದ ಮತ್ತು ಬಿಜೆಪಿ ರಾಜ್ಯಾಧ್ಯಕ್ಷರೂ ಆಗಿರುವ ನಳಿನ್ ಕುಮಾರ್ ಕಟೀಲ್ ಅವರೂ ಜೊತೆಗಿದ್ದರು. ಹನುಮಗಿರಿ ಕಾರ್ಯಕ್ರಮ ಮುಗಿಸಿ ಹೆಲಿಕಾಪ್ಟರ್ನಲ್ಲಿ ಹೊರಟು ಮೊಟ್ಟೆತ್ತಡ್ಕ ಹೆಲಿಪ್ಯಾಡ್ನಲ್ಲಿ ಬಂದಿಳಿದ ಅಮಿತ್ ಶಾ ಅವರು ಅಲ್ಲಿಂದ ಕಾರಲ್ಲಿ ರಸ್ತೆ ಮಾರ್ಗವಾಗಿ ಮುಕ್ರಂಪಾಡಿ-ಬೈಪಾಸ್ ರಸ್ತೆ ಮೂಲಕ ತೆಂಕಿಲಕ್ಕೆ
ಆಗಮಿಸಿದರು. ಈ ಸಂದರ್ಭ ರಸ್ತೆಯಲ್ಲಿ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು. ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ಸುವರ್ಣ ಮಹೋತ್ಸವ ಸಂಭ್ರಮದಲ್ಲಿ ಕ್ಯಾಂಪ್ಕೋದ ವಿವಿಧ ಯೋಜನೆಗಳಿಗೆ ಅಮಿತ್ ಶಾ ಅವರು ಚಾಲನೆ ನೀಡಿದ್ದಾರೆ. ರಾಜ್ಯ ಗೃಹಸಚಿವ ಅರಗ ಜ್ಞಾನೇಂದ್ರ,ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್,ಬಂದರು ಮೀನುಗಾರಿಕೆ ಸಚಿವ ಎಸ್ ಅಂಗಾರ, ರಾಜ್ಯ
ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕಲ್ಲಡ್ಕ ಪ್ರಭಾಕರ ಭಟ್, ಶಾಸಕರಾದ ಸಂಜೀವ ಮಠಂದೂರು, ಹರೀಶ್ ಪೂಂಜ,ರಾಜೇಶ್ ನಾಯ್ ಉಳಿಪ್ಪಾಡಿಗುತ್ತು ಸಹಿತ ವಿವಿಧ ಜನಪ್ರತಿನಿಧಿಗಳು ಸಮಾರಂಭದ ವೇದಿಕೆಯಲ್ಲಿದ್ದರು, ಸಾವಿರಾರು ಮಂದಿ ಬಿ ಜೆ ಪಿ ಕಾರ್ಯಕರ್ತರು, ಸಹಕಾರಿ ಸಂಘಗಳ ಪದಾಧಿಕಾರಿಗಳು, ಸಿಬ್ಬಂದಿಗಳು, ಕ್ಯಾಂಪ್ಕೋ ಸಂಸ್ಥೆ ಸದಸ್ಯರು, ರೈತರು, ವಿವಿಧ ಯೋಜನೆಗಳ ಪಲಾನುಭವಿಗಳು, ಅಡಿಕೆ ,ರಬ್ಬರ್, ಕೊಕ್ಕೋ , ಕಾಳು ಮೆಣಸು ಬೆಳೆಗಾರರು ಭಾರೀ ನಿರೀಕ್ಷೆಯಲ್ಲಿ ಜಮಾಯಿಸಿದ್ದರು, ಕಾರ್ಯಕ್ರಮಕ್ಕೆ ಹಾಜರಾಗಲು ವಿಶೇಷ ಪಾಸ್ ವ್ಯವಸ್ಥೆ ಮಾಡಲಾಗಿತ್ತು, ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಕೇಂದ್ರ ಬಧ್ರತಾ ಪಡೆ ಮತ್ತು ರಾಜ್ಯ ಪೋಲಿಸರು ಸಾವಿರಾರು ಸಂಖ್ಯೆಯಲ್ಲಿ ಬಿಗಿ ಭದ್ರತೆ ಏರ್ಪಡಿಸಿದ್ದರು. ಒಟ್ಟಿನಲ್ಲಿ ಪುತ್ತೂರಿನಲ್ಲಿ ನಡೆದ ದಾಖಲೆಯ ಕಾರ್ಯಕ್ರಮದಲ್ಲಿ ಶತ ಸಾವಿರ ಮಂದಿ ಭಾಗಿಯಾದರು..


