ಭೈರವೈಕ್ಯ ಡಾ| ಶ್ರೀ ಬಾಲಗಂಗಾಧರನಾಥ ಮಹಾ ಸ್ವಾಮೀಜಿ ಜಯಂತ್ಯೋತ್ಸವಕ್ಕೆ 50ಸಾವಿರ ಮಿಕ್ಕಿ ಜನರು ಸೇರುವ ನಿರೀಕ್ಷೆ : ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಹೇಳಿಕೆ.

ಭೈರವೈಕ್ಯ ಡಾ| ಶ್ರೀ ಬಾಲಗಂಗಾಧರನಾಥ ಮಹಾ ಸ್ವಾಮೀಜಿ ಜಯಂತ್ಯೋತ್ಸವಕ್ಕೆ 50ಸಾವಿರ ಮಿಕ್ಕಿ ಜನರು ಸೇರುವ ನಿರೀಕ್ಷೆ : ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಹೇಳಿಕೆ.

ಪುತ್ತೂರು: ಶ್ರೀ ಆದಿ ಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾಗಿ ಸುದೀರ್ಘ ಕಾಲ ಸೇವಾ ಕಾರ್ಯಗಳನ್ನು ನಡೆಸಿ ಭೈರವೈಕ್ಯರಾದ ಜಗದ್ಗುರು ಡಾ.ಬಾಲಗಂಗಾಧರನಾಥ ಮಹಾ ಸ್ವಾಮೀಜಿಯವರು ಜಗತ್ತಿಗೆ ನೀಡಿದ ಕೊಡುಗೆಗಳನ್ನು ಜ್ಞಾಪಿಸುವ ಮತ್ತು ಸೇವಾ ಕಾರ್ಯಗಳನ್ನು ಸಮಾಜಕ್ಕೆ ತಿಳಿಸುವ ನಿಟ್ಟಿನಲ್ಲಿ ಅವರ ಜಯಂತ್ಯೋತ್ಸವ ಆಚರಿಸಲಾಗುತ್ತಿದ್ದು, ಈ ಬಾರಿ ಅವರ 78ನೇ ಜಯಂತ್ಯೋತ್ಸವ ಪುತ್ತೂರಿನ ಮಹಾಲಿಂಗೇಶ್ವರ ದೇವಳದ ಎದುರಿನ ಗದ್ದೆಯಲ್ಲಿ ಜ.22ರಂದು ನಡೆಯಲಿದ್ದು, ಕಾರ್ಯಕ್ರಮಕ್ಕೆ ಸುಮಾರು 50ಸಾವಿರಕ್ಕೂ ಮಿಕ್ಕಿ ಜನರು ಸೇರುವ ನಿರೀಕ್ಷೆ ಇದೆ ಎಂದು ಜಯಂತ್ಯೋತ್ಸವ ಸ್ವಾಗತ ಸಮಿತಿ ಗೌರವಾಧ್ಯಕ್ಷರಾದ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಹೇಳಿದ್ದಾರೆ.


ತೆಂಕಿಲ ಒಕ್ಕಲಿಗ ಗೌಡ ಸೇವಾ ಸಂಘದ ಸಭಾಭವನದಲ್ಲಿ ಜ.3ರಂದು ನಡೆದ ಕಾರ್ಯಕ್ರಮದ ಪೂರ್ವ ತಯಾರಿ ಸಭೆಗೆ ಸಂಬಂಧಿಸಿ ಪತ್ರಿಕಾ ಮಾದ್ಯಮದವರೊಂದಿಗೆ ಮಾತನಾಡಿದರು.

ಡಾ.ಬಾಲಗಂಗಾಧರನಾಥ ಮಹಾ ಸ್ವಾಮೀಜಿಯ ಅವರ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಜಾತ್ಯಾತೀತವಾಗಿ, ಪಕ್ಷಾತೀತವಾಗಿ ಸೀಮಿತಗೊಳಿಸದೆ, ರಾಜಕೀಯ ರಹಿತವಾಗಿ ಸಮಾಜಮುಖಿ ಕಾರ್ಯಕ್ರಮವಾಗಿ ಜೋಡಣೆ ಮಾಡಲಾಗುತ್ತಿದೆ. ಇದು ಒಕ್ಕಲಿಗ ಗೌಡ ಸಮುದಾಯಕ್ಕೆ ಮಾತ್ರ ಸೀಮಿತವಾದ ಕಾರ್ಯಕ್ರಮ ಅಲ್ಲ. ಪ್ರತೀ ಮನೆಯವರೂ ಈ ಕಾರ್ಯಕ್ರಮದಲ್ಲಿ ಪಾಲುದಾರರಾಗಬೇಕು ಎಂದು ಅವರು ತಿಳಿಸಿದರು. ಕೆಲವೇ ಕೆಲವು ಮಂದಿ ವಿದ್ಯಾರ್ಥಿಗಳಿದ್ದ ವಿದ್ಯಾಸಂಸ್ಥೆಯನ್ನು ದೇಶದಾದ್ಯಂತ 480ಕ್ಕೂ ಅಧಿಕ ವಿದ್ಯಾಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಪ್ರಸ್ತುತ 1,68,000ವಿದ್ಯಾರ್ಥಿಗಳು ವ್ಯಾಸಂಗ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಸಾವಿರಕ್ಕೂ ಅಧಿಕ ಸಂಸ್ಥೆಗಳನ್ನು ಸ್ಥಾಪಿಸುವ ಜತೆಗೆ ಸಾಮಾಜಿಕ ಪರಿವರ್ತನೆ ಮಾಡಿದ್ದಾರೆ.

ದ.ಕ.ಜಿಲ್ಲೆಯಲ್ಲೂ 8 ವಿದ್ಯಾಸಂಸ್ಥೆಗಳನ್ನು ಸ್ಥಾಪನೆ ಮಾಡಿ ಜಿಲ್ಲೆಯ ಪ್ರಗತಿಗೂ ಕೊಡುಗೆ ನೀಡಿದ್ದಾರೆ. ಆಧುನಿಕ ಜಗತ್ತಿಗೆ ಹೊಸ ಆಯಾಮವನ್ನು ನೀಡುವ ಸೇವಾ ಕೆಲಸ ಕಾರ್ಯಗಳು ಅವರ ಮೂಲಕ ಆಗಿದೆ ಎಂದು ಅವರು ಮಾಹಿತಿ ನೀಡಿದರು.

ಶ್ರೀ ಆದಿ ಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಡಾ| ಧರ್ಮಪಾಲನಾಥ ಸ್ವಾಮೀಜಿ ಅವರು ಮಾತನಾಡಿ, ನಾಥ ಪಂಥದ ಧರ್ಮಪೀಠಾಧ್ಯಕ್ಷರಾದ ಬಾಲಗಂಗಾಧರನಾಥ ಸ್ವಾಮೀಜಿಯವರು ಶೂನ್ಯವಾಗಿದ್ದ ಆದಿಚುಂಚನಗಿರಿ ಕ್ಷೇತ್ರವನ್ನು ಧಾರ್ಮಿಕವಾಗಿ, ಸಾಮಾಜಿಕವಾಗಿ, ಆಧ್ಮಾತ್ಮಿಕವಾಗಿ ಮತ್ತು ಶೈಕ್ಷಣಿಕವಾಗಿ ವಿಶ್ವದ ಭೂಪಟದಲ್ಲಿ ಗುರುತಿಸುವಂತೆ ಮಾಡಿದ್ದಾರೆ. ಟ್ರಸ್ಟ್ ಮೂಲಕ 1,68,000 ವಿದ್ಯಾರ್ಥಿಗಳಿಗೆ ಅನ್ನ,ಅಕ್ಷರ ನೀಡುವ ಕಾರ್ಯ ಮಾಡಿದ್ದಾರೆ. ಗೋಶಾಲೆ, ವೃದ್ಧಾಶ್ರಮ, ಪರಿಸರ ಸಂರಕ್ಷಣೆ ಮೊದಲಾದ ಕಾರ್ಯಗಳ ಜತೆಗೆ ಧರ್ಮ ಜಾಗೃತಿ ಮಾಡಿದ್ದಾರೆ.ತಮ್ಮ ಸೇವಾ ಕಾರ್ಯಗಳ ಮೂಲಕ ಪೀಠಕ್ಕೆ ಚಿನ್ನದ ಗರಿ ಮೂಡಿಸಿದ್ದಾರೆ. ಅವರ ಸೇವೆಗಳನ್ನು ನೆನಪಿಸುವ ಕಾರ್ಯ ಜಯಂತ್ಯೋತ್ಸವದ ಮೂಲಕ ಆಗುತ್ತಿದೆ ಎಂದರು.
ವಿವಿಧ ಕಾರ್ಯಕ್ರಮ:
ಕಾರ್ಯಕ್ರಮದಲ್ಲಿ `ಸಂಸ್ಕøತ-ಸಂಸ್ಕøತಿಗೆ ಬಾಲಗಂಗಾಧರನಾಥ ಸ್ವಾಮೀಜಿಯವರ ಕೊಡುಗೆ ಒಂದು ಅಧ್ಯಯನ’ ಗ್ರಂಥದ ಲೋಕಾರ್ಪಣೆ, 72ನೇ ಪೀಠಾಧ್ಯಕ್ಷರಾಗಿ ಆದಿ ಚುಂಚನಗಿರಿ ಸಂಸ್ಥಾನವನ್ನು ಮುನ್ನಡೆಸಿಕೊಂಡು ಬರುತ್ತಿರುವ ಡಾ.ನಿರ್ಮಲಾನಂದ ಸ್ವಾಮೀಜಿಯವರ ಪಟ್ಟಾಭಿಷೇಕದ ದಶಮನೋತ್ಸವದ ಅಂಗವಾಗಿ ಗುರುವಂದನೆ, ರಜತ ತುಲಾಭಾರ, ಭಕ್ತಿ ಸಮರ್ಪಣೆ ಕಾರ್ಯಕ್ರಮಗಳು ನಡೆಯಲಿದೆ. ಅದೇ ದಿನ ಪೆರಿಯಡ್ಕದಲ್ಲಿರುವ ಆದಿಚುಂಚನಗಿರಿ ವಿದ್ಯಾಸಂಸ್ಥೆಯಲ್ಲಿ ಆಂಗ್ಲ ಮಾಧ್ಯಮ ಶಾಲೆಗೆ ಶಂಕುಸ್ಥಾಪನೆ ನೆರವೇರಲಿದೆ ಎಂದು ಡಾ| ಧರ್ಮಪಾಲನಾಥ ಸ್ವಾಮೀಜಿಯವರು ಹೇಳಿದರು.

ಜಯಂತ್ಯೋತ್ಸವ ಸ್ವಾಗತ ಸಮಿತಿಯ ಅಧ್ಯಕ್ಷ ಶಾಸಕ ಸಂಜೀವ ಮಠಂದೂರು, ಜಿಲ್ಲಾ ಸಂಚಾಲಕರಾದ ಚಿದಾನಂದ ಬೈಲಾಡಿ, ಪುರುಷೋತ್ತಮ ಮುಂಗ್ಲಿಮನೆ, ಸಮಿತಿ ಉಪಾಧ್ಯಕ್ಷರಾದ ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಕೆಯ್ಯೂರು, ಕಾರ್ಯದರ್ಶಿ ನಾಗೇಶ್ ಕೆಡೆಂಜಿ, ತಾಲೂಕು ಸಂಚಾಲಕರಾದ ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು ಉಪಸ್ಥಿತರಿದ್ದರು.

ರಾಜ್ಯ