ಸುಳ್ಯ ನಗರ ಪಂಚಾಯತ್ ಸಾಮಾನ್ಯ ಸಭೆಮಹಾಯೋಜನೆಗೆ ತಾತ್ಕಾಲಿಕ ಮಂಜೂರಾತಿ: ನಗರದಲ್ಲಿ ಸಾರ್ವಜನಿಕ ಸಭೆಗೆ ನಿರ್ಧಾರ.

ಸುಳ್ಯ ನಗರ ಪಂಚಾಯತ್ ಸಾಮಾನ್ಯ ಸಭೆ
ಮಹಾಯೋಜನೆಗೆ ತಾತ್ಕಾಲಿಕ ಮಂಜೂರಾತಿ: ನಗರದಲ್ಲಿ ಸಾರ್ವಜನಿಕ ಸಭೆಗೆ ನಿರ್ಧಾರ.


ಸುಳ್ಯ: ಸುಳ್ಯ ನಗರದ ಮಹಾಯೋಜನೆ ಸರಕಾರದಿಂದ ತಾತ್ಕಾಲಿಕ ಮಂಜೂರಾತಿಗೊಂಡಿದ್ದು, ಈ ಬಗ್ಗೆ ಸಾರ್ವಜನಿಕರ ಸಭೆ ಕರೆದು ಚರ್ಚೆ ನಡೆಸಲು ತೀರ್ಮಾನ ಕೈಗೊಂಡ ಘಟನೆ ಸುಳ್ಯ ನಗರ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಡೆದಿದೆ
ಸುಳ್ಯ ನಗರ ಪಂಚಾಯತ್ ಸಾಮಾನ್ಯ ಸಭೆ ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಅಧ್ಯಕ್ಷತೆಯಲ್ಲಿ ಗುರುವಾರ ನಗರ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಸುಳ್ಯ ನಗರದ ಮಹಾಯೋಜನೆಗೆ ಸರಕಾರದಿಂದ ತಾತ್ಕಾಲಿಕ ಮಂಜೂರಾತಿ ದೊರೆತಿದ್ದು, ಯೋಜನೆಗೆ
ಆಕ್ಷೇಪಣೆಗೆ 60 ದಿನಗಳ ಗಡುವು ನೀಡಲಾಗಿದೆ ಎಂದು ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ಸಭೆಗೆ ಮಾಹಿತಿ ನೀಡಿದರು. ಈ ಹಿಂದೆ ಚರ್ಚೆಯಾಗದೆ ಮಹಾಯೋಜನೆ ಪಟ್ಟಿ ಸರಕಾರಕ್ಕೆ ಹೋಗಿತ್ತು. ಅದರಲ್ಲಿ ಸಾಕಷ್ಟು ನ್ಯೂನ್ಯತೆಗಳಿವೆ. ಅದನ್ನು ವಾಪಸ್ ತರಿಸುವ ಪ್ರಯತ್ನ ನಡೆಸಲಾಯಿತಾದರೂ ಆಗಿಲ್ಲ. ಇದೀಗ ತಾತ್ಕಾಲಿಕ ಮಂಜೂರಾತಿಗೊಂಡು ಬಂದಿದೆ.
ಅದರಲ್ಲಿನ ಸಾಧಕ ಬಾಧಕ ಚರ್ಚೆಯಾಗಿ ಆಕ್ಷೇಪಣೆಗೆ ಅವಕಾಶ ಇದೆ. ನಮ್ಮೂರಿಗೆ ಅಗತ್ಯವಿರುವ ಪ್ರಾಜೆಕ್ಟ್ ನಮಗೆ ಆಗಬೇಕಾಗಿದೆ. ಆ ನಿಟ್ಟಿನಲ್ಲಿ ಚರ್ಚೆ ಮಾಡೋಣ ಎಂದು ವಿನಯ ಕಂದಡ್ಕ ಹೇಳಿದರು. ಸದಸ್ಯರಾದ ಎಂ.ವೆಂಕಪ್ಪ ಗೌಡ ಹಾಗೂ ಕೆ.ಎಸ್.ಉಮ್ಮರ್ ಮಾತನಾಡಿ, ಈಗ ಬಂದಿರುವ ವರದಿಯ ಅಧ್ಯಯನ ಮಾಡಿ ಸದಸ್ಯರ ಸಭೆಯಲ್ಲಿ ಚರ್ಚಿಸೋಣ. ಬಳಿಕ ಸಾರ್ವಜನಿಕ ಸಭೆ ಕರೆದು ಅಭಿಪ್ರಾಯ ಸಂಗ್ರಹಿಸುವ ಕೆಲಸ ಮಾಡೋಣ ಎಂದು ಸಲಹೆ ನೀಡಿದರು.
ಸುಳ್ಯ ನ.ಪಂ. ವ್ಯಾಪ್ತಿಯಲ್ಲಿ 94 ಸಿಸಿ ಹಕ್ಕುಪತ್ರ ನೀಡಲು ಸಮಸ್ಯೆ ಇರುವಲ್ಲಿ ನ.ಪಂ.ನ ದೃಢೀಕರಣಕ್ಕಾಗಿ ತಾಲೂಕು ಕಚೇರಿಯಿಂದ ಸುತ್ತೋಲೆ ಬಂದಿದೆ ಎಂದು ಸಭೆಯಲ್ಲಿ ಮಾಹಿತಿ ನೀಡಲಾಯಿತು. ವಾರ್ಡ್ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿಗಳ ಉಪ ಸಮಿತಿ ರಚಿಸಿ ಸ್ಥಳ ಪರಿಶೀಲನೆ ಮಾಡಿ ಶಿಫಾರಸ್ಸು ಮಾಡಲು ಸಭೆಯಲ್ಲಿ ನಿರ್ಧರಿಸಲಾಯಿತು.
ಬೇಡಿಕೆಯಂತೆ ಸುಳ್ಯ ನಗರ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗೆ ಅನುದಾನ ಬಂದಿದೆ. ಆದ್ದರಿಂದ ಅಭಿವೃದ್ಧಿಗೆ ನಾವು ಸಹಕಾರ ನೀಡಲಿದ್ದೇವೆ ಎಂದು ವಿಪಕ್ಷ ಸದಸ್ಯ ವೆಂಕಪ್ಪ ಗೌಡ ಸಭೆಯಲ್ಲಿ ತಿಳಿಸಿದರು. ಸದಸ್ಯ ಉಮ್ಮರ್ ಮಾತನಾಡಿ, ಸ್ಥಳೀಯ ಶಾಸಕರು ಅಭಿವೃದ್ಧಿ ನಡೆಸಿಲ್ಲ ಎಂದು ನಾನು ಹೇಳುತ್ತಿಲ್ಲ. ಆದರೆ ನ.ಪಂ‌.ನಲ್ಲೇ ಇನ್ನೂ ಹಲವು ಸಮಸ್ಯೆಗಳಿವೆ. ಆದ್ದರಿಂದ ಸಚಿವರು ಸಭೆಗೆ ಬರಬೇಕು ಎಂಬುದು ನನ್ನ ಬೇಡಿಕೆ. ಅಲ್ಲಿಯವರೆಗೆ ನಾನು ಕಪ್ಪು ಪಟ್ಟಿ ಧರಿಸುತ್ತಿದ್ದೇನೆ ಎಂದರಲ್ಲದೆ, ನನ್ನ ವಾರ್ಡ್ ಗೆ 35 ಲಕ್ಷ ಅನುದಾನದ ಅಗತ್ಯವಿದೆ, ಅದನ್ನು ನೀಡಿದಲ್ಲಿ ನನ್ನ ಪ್ರತಿಭಟನೆ ಹಿಂತೆಗೆದುಕೊಳ್ಳುತ್ತೇನೆ ಎಂದರು ಡಿ.9ರಂದು ನಡೆಯುವ ಅಭಿವೃದ್ಧಿ ಕಾಮಗಾರಿಗಳ ಆಮಂತ್ರಣ ಪತ್ರಿಕೆಯಲ್ಲಿ ಶಿಷ್ಟಾಚಾರ ಪಾಲಿಸಿಲ್ಲ ಎಂದು ಸದಸ್ಯ ವೆಂಕಪ್ಪ ಗೌಡ ದೂರಿದರು. ಆಮಂತ್ರಣದಲ್ಲಿ ಉಸ್ತುವಾರಿ ಸಚಿವರು, ಎಂಎಲ್ಸಿ ಗಳ ಹೆಸರು ಹಾಕಿಲ್ಲ ಎಂದರು‌. ತಾಲೂಕು ಮಟ್ಟದಲ್ಲಿ ಶಾಸಕರ ಹೆಸರು ಹಾಕಲಾಗಿದೆ. ಉಳಿದ ಯಾರದೇ ಹೆಸರು ಹಾಕಿಲ್ಲ. ಇದರಲ್ಲಿ ಯಾವುದೇ ಗೊಂದಲ ಬೇಡ ಎಂದು ನ.ಪಂ. ಅಧ್ಯಕ್ಷರು ತಿಳಿಸಿದರು. ಮುಂದಿನ ದಿನಗಳಲ್ಲಿ ನ.ಪಂ.ಗೆ 65 ಕೋಟಿ ಅನುದಾನ ಬರಲಿದೆ. ಆ ಕಾರ್ಯಕ್ರಮಕ್ಕೆ ಎಲ್ಲರನ್ನೂ ಕರೆದು ಅದ್ದೂರಿಯಾಗಿ ಮಾಡೋಣ ಎಂದರು.


ಮುಂದಕ್ಕೆ ನೀರಾವರಿ ಬಿಲ್ ಕಂಪ್ಯೂಟರೈಸ್ಡ್ ಆಗಲಿದೆ. ಈ ಸಂಬಂಧ ಒಂದು ವಾರ ನೀರಿನ ಫಲಾನುಭವಿಗಳ ನೀರಿನ ಅದಾಲತ್ ಮಾಡಲು ತೀರ್ಮಾನಿಸಲಾಗಿದೆ ಎಂದರು. ಇದಕ್ಕೂ ಮೊದಲು ಎಲ್ಲರಿಗೂ ನೀರಿನ ಬಿಲ್ ಹಾಗೂ ಮಾಹಿತಿ ಪತ್ರ ನೀಡಲು ತಿಳಿಸಿದ ಅವರು, ಅದಾಲತ್ ನಲ್ಲಿ ಬದಲಾವಣೆಗಳು ಇದ್ದಲ್ಲಿ ಫಲಾನುಭವಿಗಳು ತಿಳಿಸಬೇಕು ಎಂದರು ,ನಗರ ಪಂಚಾಯತ್ ವ್ಯಾಪ್ತಿಯಲ್ಲಿ ರಸ್ತೆಗಳ ತುರ್ತು ದುರಸ್ತಿ ಇದ್ದಲ್ಲಿ ಪಟ್ಟಿ ನೀಡುವಂತೆ ಅಧ್ಯಕ್ಷರು ಸೂಚಿಸಿದರು. ಪಂಚಾಯತ್ ವ್ಯಾಪ್ತಿಯ ಪ್ರತೀ ವಾರ್ಡ್ ಗೆ 8 ರಂತೆ ಬೀದಿ ದೀಪ ನೀಡಲಾಗುವುದು, ಸದಸ್ಯರು ಅಗತ್ಯ ಇರುವಲ್ಲಿ ಅಳವಡಿಸಬೇಕು ಎಂದರು. ಉಳಿಕೆ ಬೀದಿ ದೀಪಗಳನ್ನು ನ.ಪಂ. ವತಿಯಿಂದ ಪೊಲೀಸ್ ಇಲಾಖೆ ಸೂಚಿದ ಕಡೆಗಳಿಗೆ ಅಳವಡಿಸಲು ಸಲಹೆ ವ್ಯಕ್ತವಾಯಿತು.ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ್, ನ.ಪಂ. ಉಪಾಧ್ಯಕ್ಷೆ ಸರೋಜಿನಿ ಪೆಲತ್ತಡ್ಕ, ಸ್ಥಾಯಿ ಸಮಿತಿ ಅಧ್ಯಕ್ಷೆ ಶೀಲಾ ಕುರುಂಜಿ, ಸೇರಿದಂತೆ ನ.ಪಂ. ಸದಸ್ಯರು, ಅಧಿಕಾರಿಗಳು, ಸಿಬ್ಬಂದಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ರಾಜ್ಯ