ಮಂಗಳೂರು ಗದ್ದೆಯಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ: ಗದ್ದೆಗೆ ಇಳಿದ ನಾಯಿಯನ್ನು ರಕ್ಷಿಸಲು ಹೋಗಿ CA ವಿದ್ಯಾರ್ಥಿನಿಯೂ ಸಾವು

ಮಂಗಳೂರು ಗದ್ದೆಯಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ: ಗದ್ದೆಗೆ ಇಳಿದ ನಾಯಿಯನ್ನು ರಕ್ಷಿಸಲು ಹೋಗಿ CA ವಿದ್ಯಾರ್ಥಿನಿಯೂ ಸಾವು

..

ಮಂಗಳೂರು : ಗದ್ದೆಯಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್  ತಂತಿಯನ್ನು ಸ್ಪರ್ಶಿಸಿ CA ವಿದ್ಯಾರ್ಥಿನಿ ದಾರುಣವಾಗಿ ಮೃತಪಟ್ಟ ಘಟನೆ ಮಂಗಳೂರು ಹೊರವಲಯದ ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಳೂರು ಗ್ರಾಮದ ಕಲ್ಲಕಲಂಬಿ ಎಂಬಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.

ಕಲ್ಲಕಲಂಬಿ ನಿವಾಸಿ ಹರೀಶ್ ಶೆಟ್ಟಿ ಎಂಬವರ ಪುತ್ರಿ ಆಶ್ನಿ ಶೆಟ್ಟಿ (20) ಮೃತಪಟ್ಟ ವಿದ್ಯಾರ್ಥಿನಿ.  ಅಶ್ನಿ ಸಿಎ ಅಭ್ಯಾಸ ಮಾಡುತ್ತಿದ್ದರು. ಹರೀಶ್ ಸಣ್ಣ ಪ್ರಮಾಣದ ಹೈನುಗಾರಿಕೆ ನಡೆಸುತ್ತಿದ್ದು ಎಂದಿನಂತೆ ಶುಕ್ರವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ದನಗಳನ್ನು ಮೇಯಿಸಲು ಮನೆಯಿಂದ ಹೊರಟಿದ್ದರು. ಈ ವೇಳೆ ಅವರೊಂದಿಗೆ ಮನೆಯ ನಾಯಿಯೂ ತೆರಳಿತ್ತು.

ತಂದೆಯೊಂದಿಗೆ ಹೊರಟಿದ್ದ ನಾಯಿಯನ್ನು ಕರೆತರಲು ಆಶ್ನಿ ತೆರಳಿದ್ದರು. ನಾಯಿ ನೀರು ತುಂಬಿದ್ದ ಗದ್ದೆಗೆ ಇಳಿದಾಗ ನಾಯಿಗೆ ವಿದ್ಯುತ್ ಶಾಕ್ ತಗುಲಿದೆ ಈ ಸಂದರ್ಭ ನಾಯಿ ರಕ್ಷಣೆಗೆ ಧಾವಿಸಿದ್ದ ಆಶ್ನಿ ಕೂಡಾ ಗದ್ದೆಗೆ ಕಾಲಿಟ್ಟಿದ್ದಾಳೆ.  ಈ ವೇಳೆ ವಿದ್ಯುತ್ ಆಘಾತ ಸಂಭವಿಸಿ ಆಶ್ನಿ ಸ್ಥಳದಲ್ಲೇ ಮೃತಪಟ್ಟರೆಂದು ತಿಳಿದುಬಂದಿದೆ. ಗದ್ದೆಯಲ್ಲಿದ್ದ ವಿದ್ಯುತ್ ಕಂಬದಿಂದ ವಿದ್ಯುತ್ ಪ್ರವಹಿಸುತ್ತಿದ್ದ ತಂತಿಯೊಂದು ತುಂಡಾಗಿ ಗದ್ದೆಗೆ ಬಿದ್ದಿದ್ದರಿಂದ ಈ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ. ಘಟನೆ ನಡೆದ ತಕ್ಷಣ ಸ್ಥಳೀಯರು ಮೆಸ್ಕಾಂಗೆ ಮಾಹಿತಿ ನೀಡಿದ್ದು, ವಿದ್ಯುತ್ ಕಡಿತಗೊಳಿಸಿದ ಬಳಿಕ ನಾಯಿ ಮತ್ತು ಆಶ್ನಿ ಮೃತದೇಹವನ್ನು ನೀರಿನಿಂದ ಹೊರತೆಗೆಯಲಾಯಿತು ಎಂದು ತಿಳಿದುಬಂದಿದೆ.

Uncategorized