ಚುನಾವಣೆಯಲ್ಲಿ ಕೋಮುದ್ವೇಷದ ಅಜೆಂಡಾಗಳು ಬೇಡ, ಶಿಕ್ಷಣ, ಆರೋಗ್ಯ, ಉದ್ಯೋಗದ ಪ್ರಶ್ನೆಗಳು ಚರ್ಚೆಯಾಗಲಿ: ಸಿ.ಪಿ.ಐ.ಎಂ

ಚುನಾವಣೆಯಲ್ಲಿ ಕೋಮುದ್ವೇಷದ ಅಜೆಂಡಾಗಳು ಬೇಡ, ಶಿಕ್ಷಣ, ಆರೋಗ್ಯ, ಉದ್ಯೋಗದ ಪ್ರಶ್ನೆಗಳು ಚರ್ಚೆಯಾಗಲಿ: ಸಿ.ಪಿ.ಐ.ಎಂ

ಭ್ರಷ್ಟಾಚಾರ, ಬೆಲೆಯೇರಿಕೆ, ಕಾರ್ಪೊರೇಟ್ ಪರ ಕೆಟ್ಟ ಆಡಳಿತದಿಂದ ಜನರ ಆಕ್ರೋಶಕ್ಕೆ ತುತ್ತಾಗಿರುವ ಬಿಜೆಪಿಯು ಮುಂದಿನ ಚುನಾವಣೆ ಎದುರಿಸಲು ಕೋಮು ದ್ವೇಷದ ಅಜೆಂಡಾಗಳನ್ನು ಮುನ್ನಲೆಗೆ ತಂದು ಮತೀಯ ವಿಭಜನೆಗೆ ಯತ್ನಿಸುತ್ತಿದೆ. ಜನ ಸಾಮಾನ್ಯರ ಬದುಕನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳುವ ಇಂತಹ ಕೋಮು ದ್ವೇಷದ ರಾಜಕೀಯ ಆಟಗಳನ‌್ನು ಸಿಪಿಐಎಂ ಪಕ್ಷವು ಬಲವಾಗಿ ವಿರೋಧಿಸುತ್ತಿದ್ದು ಶಿಕ್ಷಣ, ಉದ್ಯೋಗ, ಆರೋಗ್ಯದಂತಹ ಜನರ ಮೂಲಭೂತ ಪ್ರಶ್ನೆಗಳು ಚರ್ಚೆಯಾಗಬೇಕು ಎಂದು ಆಗ್ರಹಿಸುತ್ತದೆ ಎಂದು ಸಿ ಪಿ ಐ ಎಂ ರಾಜ್ಯ ಸಮಿತಿ ಸದಸ್ಯ ಮುನೀರ್ ಕಾಟಿಪಳ್ಳ ಹೇಳಿದ್ದಾರೆ.ಅವರು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ

ಸುಳ್ಯ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಆಡಳಿತದ ಅವಧಿಯಲ್ಲಿ ಜನರ ಬದುಕಿನ ಮೂಲಭೂತ ಪ್ರಶ್ನೆಗಳಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗಿಲ್ಲ. ಜಿಲ್ಲೆಯ ಬಿಜೆಪಿ ಶಾಸಕರುಗಳು ಹಿಂದು, ಮುಸ್ಲಿಂ ವಿಭಜನೆಯ ತಮ್ಮ ಪಕ್ಷದ ಎಂದಿನ ಅಜೆಂಡಾದ ಮೇಲೆಯೆ ತಮ್ಮ ಅವಧಿಯನ್ನು ಮುಗಿಸಿದ್ದಾರೆ. ಜಿಲ್ಲೆಯ ಜನರ ಬಹುಕಾಲದ ಬೇಡಿಕೆಯಾಗಿರುವ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ, ವೆನ್ ಲಾಕ್ ಜಿಲ್ಲಾಸ್ಪತ್ರೆಯನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸುವ ನಿಟ್ಟಿನಲ್ಲಿ ಯಾವುದೇ ಪ್ರಯತ್ನಗಳು ಬಿಜೆಪಿ ಶಾಸಕರುಗಳಿಂದ ನಡೆಯಲಿಲ್ಲ. ಸುಳ್ಯ ಹಾಗೂ ಜಿಲ್ಲೆಯ ತಾಲೂಕು, ಸಮುದಾಯ ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ನೇಮಕಾತಿ, ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಂತಹ ಕನಿಷ್ಟ ಕೆಲಸಗಳೂ ನಡೆಯಲಿಲ್ಲ. ನಾಲ್ಕು ಹೊಸ ತಾಲೂಕುಗಳು ಘೋಷಣೆಯಾದರೂ ಹೊಸ ತಾಲೂಕುಗಳಿಗೆ ತಾಲೂಕು ಆಸ್ಪತ್ರೆಗಳು ಮಂಜೂರಾಗಲಿಲ್ಲ. ಒಂದು ಹೊಸ ಸಮುದಾಯ ಆಸ್ಪತ್ರೆಯು ಜಿಲ್ಲೆಗೆ ದೊರಕಲಿಲ್ಲ. ಅದರ ಬದಲಿಗೆ ಜಿಲ್ಲೆಯ ಆರೋಗ್ಯ ಕ್ಷೇತ್ರವನ್ನು ಪೂರ್ತಿಯಾಗಿ ಖಾಸಗಿ ವ್ಯಾಪಾರಿ ಲಾಬಿಗಳ ಕೈಗೆ ಬಿಟ್ಟುಕೊಡಲಾಗಿದೆ. ಇದು ಜನಸಾಮಾನ್ಯರಿಗೆ ಸೂಕ್ತ ಆರೋಗ್ಯ ಸೇವೆ ದೊರಕದಂತೆ ಮಾಡಿದೆ. ಎಂಟು ಖಾಸಗಿ ಮೆಡಿಕಲ್ ಕಾಲೇಜು ಹೊಂದಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್ ಕಾಲೇಜಿಗೆ ಜನರ ಬೇಡಿಕೆಗಳ ಹೊರತಾಗಿಯುವ ಮತ್ತೊಂದು ಖಾಸಗಿ ಮೆಡಿಕಲ್ ಕಾಲೇಜಿಗೆ ಬಿಜೆಪಿ ಸರಕಾರ ಅನುಮತಿ ನೀಡಿದೆ. ಪುತ್ತೂರಿನಲ್ಲಿ ಸರಕಾರಿ ಮೆಡಿಕಲ್ ಕಾಲೇಜಿಗೆ ಕಾದಿರಿಸಿದ ಜಮೀನನ್ನು ಖಾಸಗಿ ಉದ್ಯಮಿಗಳಿಗೆ ಪರಭಾರೆ ಮಾಡಲು ಯತ್ನಿಸಲಾಗುತ್ತಿದೆ.

ಹಾಗೆಯೆ ಜಿಲ್ಲೆಯಲ್ಲಿ ಸರಕಾರಿ ಇಂಜಿನಿಯರಿಂಗ್ ಕಾಲೇಜು ಸ್ಥಾಪಿಸುವ ಬೇಡಿಕೆಯನ್ನೂ‌ ಕಡೆಗಣಿಸಲಾಗಿದೆ‌. ಬಿಜೆಪಿ ಸರಕಾರದ ಅವಧಿಯಲ್ಲಿ ಹೊಸದಾಗಿ ಯಾವುದೇ ಪಿಯು, ಪದವಿ ಕಾಲೇಜುಗಳು, ವೃತ್ತಿಪರ ಕಾಲೇಜುಗಳು ಸ್ಥಾಪನೆಗೊಳ್ಳಲಿಲ್ಲ. ಬದಲಿಗೆ ದುಬಾರಿ ಶುಲ್ಕ, ಡೊನೇಷನ್ ವಿಧಿಸುವ ಶಿಕ್ಷಣ ಸಂಸ್ಥೆಗಳು ಹೆಜ್ಜೆಗೊಂದು ಸ್ಥಾಪನೆಗೊಳ್ಳುತ್ತಿದೆ. ಇದರಿಂದಾಗಿ ಬಹುತೇಕ ಪೋಷಕರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲಾಗದ ಸ್ಥಿತಿ ನಿರ್ಮಾಣಗೊಂಡಿದೆ.

ಉದ್ಯೋಗ ಸೃಷ್ಟಿ, ಸ್ಥಳೀಯರಿಗೆ ಉದ್ಯೋಗ ಒದಗಿಸುವ ವಿಷಯದಲ್ಲಿಯೂ ಜಿಲ್ಲೆ ಪೂರ್ತಿ ಹಿಂದುಳಿದಿದೆ. ಮಂಗಳೂರು ಸುತ್ತಮುತ್ತ ಬೃಹತ್ ಉದ್ಯಮಗಳು ಸ್ಥಾಪನೆಗೊಂಡಿದ್ದರೂ ಉದ್ಯೋಗವಕಾಶಗಳು ಅತ್ಯಂತ ಕಡಿಮೆ ಇದೆ. ಎಮ್ ಆರ್ ಪಿ ಎಲ್, ಎಸ್ ಇ ಝಡ್ ನಂತಹ ಸಾರ್ವಜನಿಕ ರಂಗದ ಉದ್ಯಮಗಳೂ ಸೇರಿದಂತೆ ಖಾಸಗಿ ರಂಗದ ಬೃಹತ್ ಹಾಗೂ ಮಧ್ಯಮ ಕೈಗಾರಿಕೆಗಳು ಸ್ಥಳೀಯ ಯುವಜನರನ್ನು ಉದ್ಯೋಗ ನೇಮಕಾತಿಯಲ್ಲಿ ಉದ್ದೇಶ ಪೂರ್ವಕವಾಗಿ ಹೊರಗಿಡುತ್ತಿದೆ. ಅತ್ಯುತ್ತಮ ಉದ್ಯೋವಕಾಶಗಳು ಉತ್ತರ ಭಾರತದವರ ಪಾಲಾಗುತ್ತಿದೆ. ಗುತ್ತಿಗೆ ಉದ್ಯೋಗಗಳಿಗೆ ಈಶಾನ್ಯ ರಾಜ್ಯಗಳಿಂದ ಏಜಂಟರ ಮೂಲಕ ಕಾರ್ಮಿಕರನ್ನು ಕರೆತಂದು ಅತಿ ಕಡಿಮೆ ವೇತನ ನೀಡಿ ದುಡಿಸಲಾಗುತ್ತಿದೆ. ಇದರಿಂದಾಗಿ ಸ್ಥಳೀಯವಾಗಿ ನಿರುದ್ಯೋಗ ವ್ಯಾಪಕವಾಗುತ್ತಿದೆ. ಜಿಲ್ಲೆಯ ಎಲ್ಲಡೆ ನಿರುದ್ಯೋಗಿಗಳ ದಂಡು ಕಂಡುಬರುತ್ತಿದೆ. ಜಿಲ್ಲೆಯ ಯುವಜನರು ಉದ್ಯೋಗ ಅರಸಿ ದೂರದ ಊರುಗಳಿಗೆ ವಲಸೆ ಹೋಗುವ, ಅಲ್ಲಿ ತಮ್ಮ ಶೈಕ್ಷಣಿಕ ಅರ್ಹತೆಗೆ ತಕ್ಕುದಲ್ಲದ ಕಡಿಮೆ ದರ್ಜೆಯ ಉದ್ಯೋಗಗಳನ್ನು ಮಾಡುವ ಸ್ಥಿತಿ ಉಂಟಾಗಿದೆ. ಜಿಲ್ಲೆಯ ಉದ್ಯಮಗಳಲ್ಲಿ ಸ್ಥಳೀಯರಿಗೆ ಆದ್ಯತೆ ಒದಗಿಸಲು ಅವಕಾಶಗಳಿದ್ದರೂ ಜಿಲ್ಲೆಯ ಬಿಜೆಪಿ ಶಾಸಕರುಗಳು ಆ ನಿಟ್ಟಿನಲ್ಲಿ ಪ್ರತಿ ಬಾರಿಯೂ ಬಾಯಿ ಮಾತಿನ ಆಶ್ವಾಸನೆ ನೀಡಿ ಯುವಜನರನ್ನು ವಂಚಿಸುತ್ತಾ ಬಂದಿದ್ದಾರೆ.

ಇಂತಹ ಶಿಕ್ಷಣ, ಆರೋಗ್ಯ, ಉದ್ಯೋಗದಂತಹ ತುಳುನಾಡಿನ ಮೂಲಭೂತ ಪ್ರಶ್ನೆಗಳಿಗೆ ಪರಿಹಾರ ಕಂಡುಕೊಳ್ಳಲು ಜಿಲ್ಲೆಯ ಬಿಜೆಪಿ ಶಾಸಕರುಗಳು ಪೂರ್ತಿ ವಿಫಲರಾಗಿದ್ದಾರೆ. ಬದಲಿಗೆ ಜನರ ಮಧ್ಯೆ ಕೋಮುದ್ವೇಷವನ್ನು ಬಿತ್ತುವ, ಹಿಂಸಾಚಾರಗಳಿಗೆ ಕುಮ್ಮಕ್ಕು ನೀಡುವ ಪಿತೂರಿ ರಾಜಕಾರಣವನ್ನು ಬಿಜೆಪಿ ಪರಿವಾರ ನಡೆಸುತ್ತಾ ಬಂದಿದೆ. ಚುನಾವಣೆಯ ಹೊಸ್ತಿಲಲ್ಲಿಯೂ ಮುಸ್ಲಿಂ ವಿರೋಧಿ ಭಾವನೆಗಳನ್ನು ಬಡಿದೆಬ್ಬಿಸುವ ಯೋಜನೆಯನ್ನು ಸರಕಾರದ ಯಂತ್ರವನ್ನು ಬಳಸಿ ರೂಪಿಸುತ್ತಿದೆ. ಸುಳ್ಯ ಹಾಗೂ ಜಿಲ್ಲೆಯ ಜನತೆ ಬಿಜೆಪಿಯ ಇಂತಹ ಕೋಮುವಾದಿ ರಾಜಕಾರಣವನ್ನು ತಿರಸ್ಕರಿಸಬೇಕು. ಶಿಕ್ಷಣ, ಆರೋಗ್ಯ, ಉದ್ಯೋಗ ಮುಂತಾದ ಬದುಕಿನ ಪ್ರಶ್ನೆಗಳನ್ನು ಚರ್ಚೆಗೆತ್ತಿಕೊಳ್ಳಬೇಕು ಎಂದು ಜನತೆಯಲ್ಲಿ ಮನವಿ ಮಾಡುತ್ತದೆ. ಹಾಗೂ ಭ್ರಷ್ಟ, ಕೋಮುವಾದಿ, ಜನವಿರೋಧಿ ಆಡಳಿತ ನಡೆಸಿದ ಬಿಜೆಪಿಯನ್ನು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸೋಲಿಸಬೇಕು .ಸುದ್ದಿಗೋಸ್ಟಿಯಲ್ಲಿ ಸಿ ಪಿ ಐ ಎಂ ಜಿಲ್ಲಾ ಕಾರ್ಯದರ್ಶಿ ಸುನಿಲ್ ಬಜಲಕೇರಿ, ಕೆ ಪಿ ಜಾನಿ, ಬಿಜು ಅಗಾಸ್ಟಿನ್, ನಾಗರಾಜು, ಶಿವರಾಮ, ವಸಂತ ಮೊದಲಾದವರಿದ್ದರು.

ರಾಜ್ಯ