
ಪುತ್ತೂರು: ಬಡಗನ್ನೂರು ಗ್ರಾ.ಪಂ ನ ಮಾಜಿ ಸದಸ್ಯ ಗುರುಪ್ರಸಾದ್ ರೈ ಕುಡ್ಕಾಡಿ ಅವರ ಮನೆಗೆ ನುಗ್ಗಿದ ದರೋಡೆಕೋರರ ಗುಂಪು ಚಿನ್ನ ಮತ್ತು ನಗದು ಹಣ ದೋಚಿ ಪರಾರಿಯಾದ ಘಟನೆ ಸೆ.5ರ ತಡರಾತ್ರಿ ನಡೆದಿದೆ.
ತೋಟದ ನಡುವೆ ಒಂಟಿಯಾಗಿರುವ ಮನೆಯಲ್ಲಿ ಗುರುಪ್ರಸಾದ್ ರೈ ಮತ್ತು ಅವರ ತಾಯಿ ಕಸ್ತೂರಿ ರೈ ಮಾತ್ರವಿದ್ದು 7 ರಿಂದ 8 ಜನರಿದ್ದ ದರೋಡೆಕೋರರ ಗುಂಪು ಕೈಯಲ್ಲಿ ತಲವಾರು ಮತ್ತು ರಾಡ್ ನಂತಹ ಮಾರಕಾಸ್ತ್ರ ಹಿಡಿದು ಮನೆಗೆ ನುಗ್ಗಿ, ಜೀವಬೆದರಿಕೆಯೊಡ್ಡಿ ತಾಯಿ ಮಗನನ್ನು ಕಂಬಕ್ಕೆ ಕಟ್ಟಿ ಹಾಕಿ ನಗದು ಮತ್ತು ಚಿನ್ನಾಭರಣ ದೋಚಿದೆ. ಗುರುತು ಸಿಗದಂತೆ ಮುಖವಾಡ ಧರಿಸಿ ಬಂದಿದ್ದ ದರೋಡೆಕೋರರ ಗುಂಪು, ಗುರುಪ್ರಸಾದ್ ರೈ ಯಾರನ್ನೂ ಸಂಪರ್ಕಿಸದಂತೆ ಅವರ ಮೊಬೈಲನ್ನು ನೀರಿಗೆ ಹಾಕಿದ್ದರು ಎನ್ನಲಾಗಿದೆ.
ಅದು ಹೇಗೋ ಗುರುಪ್ರಸಾದ್ ರೈ ಸಂಪ್ಯ ಪೊಲೀಸರಿಗೆ ಮಾಹಿತಿ ನೀಡಿದ್ದು ಘಟನಾ ಸ್ಥಳಕ್ಕೆ ಸಂಪ್ಯ ಪೊಲೀಸರು, ಬೆರಳಚ್ಚು ತಜ್ಞರು, ಶ್ವಾನದಳ, ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

