ತಾವು ಗೆದ್ದ ಪದಕಗಳನ್ನು ಗಂಗಾ ನದಿಗೆ ಎಸೆಯುತ್ತೇವೆ ಎಂದ ಕುಸ್ತಿ ಪಟುಗಳು…!

ತಾವು ಗೆದ್ದ ಪದಕಗಳನ್ನು ಗಂಗಾ ನದಿಗೆ ಎಸೆಯುತ್ತೇವೆ ಎಂದ ಕುಸ್ತಿ ಪಟುಗಳು…!


ನವದೆಹಲಿ ಮೇ 30 : ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಪ್ರತಿಭಟನೆ ಮತ್ತೆ ಉಗ್ರ ಸ್ವರೂಪ ಪಡೆಯುವ ಸಾಧ್ಯತೆ ಇದ್ದು, ಇದೀಗ ಕುಸ್ತಿ ಪಟುಗಳು ತಾವು ಕಷ್ಟ ಪಟ್ಟು ಸಂಪಾದಿಸಿರುವ ಪದಕಗಳನ್ನು ಗಂಗಾ ನದಿಗೆ ಎಸೆಯುತ್ತೇವೆ ಎಂದು ಹೇಳಿದ್ದಾರೆ.

ಮಹಿಳಾ ಕುಸ್ತಿ ಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿರುವ ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್ ಬಂಧನಕ್ಕೆ ಒತ್ತಾಯಿಸಿ ಹಲವು ಕುಸ್ತಿ ಪಟುಗಳು ಜಂತರ್‌ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಇಂದು ಬೆಳಿಗ್ಗೆ ಅವರನ್ನು ಜಂತರ್‌ಮಂತರ್‌ನಿಂದ ಪೊಲೀಸರು ಹೊರಹಾಕಿದ್ದಾರೆ. ಆದರೂ ಛಲ ಬಿಡದ ಕುಸ್ತಿಪಟುಗಳು, ಇಂಡಿಯಾ ಗೇಟ್ ಬಳಿ ಸೇರಿದ್ದು, ಪ್ರಾಣ ಇರುವವರೆಗೂ ಹೋರಾಟ ನಡೆಸುವುದಾಗಿ ಹೇಳಿದ್ದಾರೆ.

ಕುಸ್ತಿ ಪಟುಗಳು ಇಂದು ಸಂಜೆ 6 ಗಂಟೆಗೆ ಹರಿದ್ವಾರಕ್ಕೆ ತೆರಳಿ ತಮ್ಮ ಪದಕಗಳನ್ನು ಗಂಗಾ ನದಿಗೆ ಹಾಕಲಿದ್ದಾರೆ ಎಂದು 2016ರ ಒಲಿಂಪಿಕ್ಸ್‌ನ ಕಂಚಿನ ಪದಕ ವಿಜೇತ ಕುಸ್ತಿ ಪಟು ಸಾಕ್ಷಿ ಮಲಿಕ್ ತಮ್ಮ ಟ್ವಿಟರ್‌ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ‘ಈ ಪದಕಗಳು ನಮ್ಮ ಜೀವ ಮತ್ತು ಆತ್ಮವಾಗಿವೆ. ಅವುಗಳನ್ನು ನಾವು ಗಂಗಾ ನದಿಗೆ ಎಸೆಯಲಿದ್ದೇವೆ. ಅದಾದ ಬಳಿಕ, ಬದುಕುವ ಪ್ರಶ್ನೆಯೇ ಇಲ್ಲ. ಸಾಯುವವರೆಗೂ ಇಂಡಿಯಾ ಗೇಟ್ ಬಳಿ ಉಪವಾಸ ಸತ್ಯಾಗ್ರಹ ನಡೆಸುತ್ತೇವೆ’ ಎಂದು ಹಿಂದಿಯಲ್ಲಿ ಹೇಳಿಕೆ ಪೋಸ್ಟ್ ಮಾಡಿದ್ದಾರೆ. ಕುಸ್ತಿ ಪಟು ವಿನೇಶ್ ಫೊಗಟ್ ಸಹ ಇದೇ ಹೇಳಿಕೆಯನ್ನು ಹಂಚಿಕೊಂಡಿದ್ದಾರೆ.

ರಾಜ್ಯ