ಬಾಂಗ್ಲಾದೇಶದ 30 ವರ್ಷದ ವಿವಾಹಿತ ಮಹಿಳೆಯನ್ನು ಕೆಲಸ ಕೊಡಿಸುವುದಾಗಿ ಆಮಿಷವೊಡ್ಡಿ ಬೆಂಗಳೂರಿಗೆ ಕರೆತಂದು ವೇಶ್ಯಾವಾಟಿಕೆಗೆ ದೂಡಿದ ಘಟನೆ ಬೆಳಕಿಗೆ ಬಂದಿದೆ.

ಸಂತ್ರಸ್ತೆ ಹುಳಿಮಾವು ಪೊಲೀಸರು ಹಾಗೂ ಸಂಚಾರಿ ಪೊಲೀಸರ ಸಹಾಯದಿಂದ ದಂಧೆಗಾರರ ಕೈಯಿಂದ ತಪ್ಪಿಸಿಕೊಂಡಿದ್ದಾರೆ. ಆಕೆ ಬಾಂಗ್ಲಾದೇಶದಲ್ಲಿ ಕೆಲಸ ಹುಡುಕುತ್ತಿದ್ದ ವೇಳೆ, ದಕ್ಷಿಣ ಭಾರತದಲ್ಲಿ ಬ್ಯೂಟಿ ಪಾರ್ಲರ್ನಲ್ಲಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿ ಒಂದು ಗ್ಯಾಂಗ್ ಆಕೆಯನ್ನು ಬೆಂಗಳೂರಿಗೆ ಕರೆತಂದಿತ್ತು.
ಆದರೆ, ಬದಲಾಗಿ ಎಚ್ಎಸ್ಆರ್ ಲೇಔಟ್ನ ಮನೆಯೊಂದಕ್ಕೆ ಕರೆದೊಯ್ದು, ಪೌಡರ್ ಬೆರೆಸಿದ ಜ್ಯೂಸ್ ಕುಡಿಸಿ ಮೋಸಗೈದು, ಬಳಿಕ ಬನ್ನೇರುಘಟ್ಟದ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದರು. ಈ ವೇಳೆ ಎಚ್ಚರಗೊಂಡ ಸಂತ್ರಸ್ತೆ ಅಲ್ಲಿಂದ ತಪ್ಪಿಸಿಕೊಂಡು ಜನನಿಬಿಡ ರಸ್ತೆಯಲ್ಲಿ ಸಂಚಾರಿ ಪೊಲೀಸರ ಬಳಿ ಧಾವಿಸಿ ಸಹಾಯ ಕೇಳಿದರು.
ತಾನು ಮದುವೆಯಾಗಿರುವುದು, ಇಬ್ಬರು ಮಕ್ಕಳ ತಾಯಿ, ಆದರೆ ವೇಶ್ಯಾವಾಟಿಕೆಗೆ ಬಲವಂತವಾಗಿ ದೂಡಲಾಯ್ತು ಎಂದು ಆಕೆ ಪೊಲೀಸರ ಮುಂದೆ ಬಿಚ್ಚಿಟ್ಟಿದ್ದಾಳೆ.
ಸದ್ಯ ಹುಳಿಮಾವು ಪೊಲೀಸರು ಆಕೆಯನ್ನು ರಕ್ಷಿಸಿ, ಬೆಂಗಳೂರಿನ ಎನ್ಜಿಒ ವಶಕ್ಕೆ ಒಪ್ಪಿಸಿದ್ದಾರೆ. ಕೌನ್ಸೆಲಿಂಗ್ ಬಳಿಕ ಆಕೆಯನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸುವ ಪ್ರಕ್ರಿಯೆ ಆರಂಭವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

