
ಕಡಬ : ಬಿಳಿನೆಲೆಯಲ್ಲಿ ಸುಬ್ರಹ್ಮಣ್ಯ – ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಪಕ್ಕದಲ್ಲಿರುವ ರಕ್ಷಿತಾರಣ್ಯದಲ್ಲಿ ಮನುಷ್ಯ ತಲೆಬುರುಡೆಯೊಂದು ಪತ್ತೆಯಾಗಿರುವುದು ವರದಿಯಾಗಿದೆ.

ಸೌದೆ ತರಲೆಂದು ಕಾಡಿಗೆ ತೆರಳಿದ್ದ ಸ್ಥಳೀಯರು ಕೊಳೆತ ಸ್ಥಿತಿಯಲ್ಲಿದ್ದ ತಲೆಬುರುಡೆಯನ್ನು ಕಂಡು ಕಡಬ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.ಬಿಳಿನೆಲೆ ನಿವಾಸಿ ಚಂದ್ರಶೇಖರ್ ಎಂಬವರು ನೆರೆ-ಕೆರೆಯ ನಿವಾಸಿಗಳೊಂದಿಗೆ ಕಟ್ಟಿಗೆ ಸೌದೆಯನ್ನು ತರಲೆಂದು ಎ.19ರಂದು ಕಡಬ ತಾಲೂಕು ಬಿಳಿನೆಲೆ ಗ್ರಾಮದ ಹಳೆ ನರ್ಸರಿ ಬಳಿ ಸುಬ್ರಹ್ಮಣ್ಯ – ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಪಕ್ಕದಲ್ಲಿರುವ ರಕ್ಷಿತಾರಣ್ಯದಲ್ಲಿ ತೆರಳಿದ್ದರು.
ಈ ವೇಳೆ ದಾರಿಬದಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಮನುಷ್ಯನ ತಲೆಬುರುಡೆ ಹಾಗೂ ಬ್ಯಾಗ್ ಕಂಡುಬಂದಿದೆ. ಅಲ್ಲೇ ಸ್ವಲ್ಪ ದೂರದಲ್ಲಿ ಮರವೊಂದರಲ್ಲಿ ಬಟ್ಟೆಯೊಂದು ಮರದ ಕೊಂಬೆಯಿಂದ ನೇತಾಡುತ್ತಿರುವುದೂ ಕಂಡುಬಂದಿದೆ ಎನ್ನಲಾಗಿದೆ. ಈ ಬಗ್ಗೆ ಚಂದ್ರಶೇಖರ್ ನೀಡಿರುವ ಮಾಹಿತಿಯನ್ನು ಅನುಸರಿಸಿ ಕಡಬ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
