ಸುಳ್ಯ: ಸುಳ್ಯದ ವಾಸವಿ ಸಾಹಿತ್ಯ ಕಲಾವೇದಿಕೆ ವತಿಯಿಂದ ಮೇ 18ರಂದು ಖ್ಯಾತ ವೈದ್ಯೆ ಹಾಗೂ ಕವಯಿತ್ರಿ ಡಾ. ವೀಣಾ ಎನ್. ಸುಳ್ಯ ಅವರ “ಭಾವ ಲಹರಿ” ಕವನ ಸಂಕಲನದ ಲೋಕಾರ್ಪಣೆ ಹಾಗೂ ‘ಥಟ್ ಅಂತ ಹೇಳಿ’ ಕಾರ್ಯಕ್ರಮದ ಖ್ಯಾತಿಯ ಡಾ. ನಾ. ಸೋಮೇಶ್ವರ ಅವರಿಂದ ಸಾರ್ವಜನಿಕ ರಸ ಪ್ರಶ್ನೆ ಕಾರ್ಯಕ್ರಮ ಆಯೋಜನೆಗೊಂಡಿದ್ದು ಈ ವಿಶಿಷ್ಟ ಕಾರ್ಯಕ್ರಮವು ಸುಳ್ಯದ ಸಿ.ಎ. ಬ್ಯಾಂಕಿನ ಎಸ್. ವಿಜಯಕುಮಾರ್ ಸಭಾಭವನದಲ್ಲಿ ನಡೆಯಲಿದೆ.


ಅಪರಾಹ್ನ 1.00 ರಿಂದ 2.30ರ ವರೆಗೆ ರಸಪ್ರಶ್ನೆಯ ಲಿಖಿತ ಪರೀಕ್ಷೆ ನಡೆಯಲಿದ್ದು ನಂತರ ಸಂಜೆ 3.30ರಿಂದ ಅಂತಿಮ ಸುತ್ತು ನಡೆಯಲಿದೆ. ಅಂತಿಮ ಸುತ್ತು ‘ಥಟ್ ಅಂತ ಹೇಳಿ’ ಮಾದರಿಯದಾಗಿದ್ದು ಮೂರು ಮಂದಿಯ ತಂಡವನ್ನು ಲಿಖಿತ ಪರೀಕ್ಷೆಯ ಫಲಿತಾಂಶದ ಆಧಾರದಲ್ಲಿ ಆಯ್ಕೆ ಮಾಡಲಾಗುವುದು ಮತ್ತು ಆಯ್ಕೆಗೊಂಡ 5 ತಂಡಗಳು ಅಂತಿಮ ಸುತ್ತಿಗೆ ಪ್ರವೇಶ ಪಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ನಾ. ಸೋಮೇಶ್ವರ ಅವರು ವಹಿಸಲಿದ್ದು ಖ್ಯಾತ ವೈದ್ಯೆ ಹಾಗೂ ಕವಯಿತ್ರಿ ಡಾ. ವೀಣಾ ಎನ್. ಸುಳ್ಯ ಅವರ “ಭಾವ ಲಹರಿ” ಕವನ ಸಂಕಲನದ ಲೋಕಾರ್ಪಣೆಯನ್ನು ಡಾ. ವಸಂಧರಾ ಭೂಪತಿ, ಖ್ಯಾತ ಸಾಹಿತಿಗಳು, ಬೆಂಗಳೂರು ಇವರು ನೆರವೇರಿಸಲಿದ್ದಾರೆ. ಅಭ್ಯಾಗತರಾಗಿ ಸಾಹಿತಿಗಳು ಮತ್ತು ಸಂಯುಕ್ತ ಕರ್ನಾಟಕ ಪತ್ರಿಕೆಯ ಅಧ್ಯಕ್ಷೆ ಶ್ರೀಮತಿ ಲೀಲಾ ದಾಮೋದರ್, ಸಾಹಿತಿಗಳು ಹಾಗೂ ಯಕ್ಷಗಾನ ಕಲಾವಿದ ಶ್ರೀ ವೆಂಕಟ್ರಾಮ ಭಟ್ ಪಾಲ್ಗೊಳ್ಳಲಿದ್ದಾರೆ.