
ಡಿ.16ರ ಶನಿವಾರ ಮುಂಜಾನೆ ಇಲ್ಲಿನ ಕೊಣಾಜೆ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ (ಕೆ.ಎಫ್.ಡಿ.ಸಿ) ದ ರಬ್ಬರ್ ತೋಟದಲ್ಲಿ ರಬ್ಬರ್ ಟಾಪಿಂಗ್ ಮಾಡುತ್ತಿದ್ದ ಕಾರ್ಮಿಕರನ್ನು ಕಾಡಾನೆಗಳ ಗುಂಪೊಂದು ಬೆನ್ನಟ್ಟಿದ ಪರಿಣಾಮ ಮೂವರು ಗಾಯಗೊಂಡ ಘಟನೆ ಸಂಭವಿಸಿದೆ.
ನಿಗಮದ ಟಾಪಿಂಗ್ ಕಾರ್ಮಿಕ ರಾಜಗೋಪಾಲ್ (49), ಮೇಸ್ತ್ರಿಗಳಾದ ನಾಗಪ್ಪ (53) ಹಾಗೂ ಶಿವರಾಜ್ (43) ಗಾಯಗೊಂಡವರು.ಗಾಯಾಳುಗಳನ್ನು ಕಡಬ ಸಮುದಾಯ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಗಿದೆ. ಕಾರ್ಮಿಕರು ಕೆಲಸದಲ್ಲಿ ನಿರತರಾಗಿದ್ದಾಗ ಆನೆಗಳು ಕಾಣಿಸಿಕೊಂಡಿವೆ. ಭಯಭೀತಗೊಂಡು ಓಡಿ ತಪ್ಪಿಸಿಕೊಳ್ಳುವ ವೇಳೆ ಬಿದ್ದು ತರಚಿದ ಗಾಯಗಳಾಗಿವೆ. ಓಡುವ ವೇಳೆ ಆನೆಗಳು ಅವರನ್ನು ಬೆನ್ನಟ್ಟಿವೆ ಎಂದು ಗಾಯಾಳುಗಳು ತಿಳಿಸಿದ್ದಾರೆ. ಮಾಹಿತಿ ತಿಳಿದ ಅರಣ್ಯ ಇಲಾಖೆಯ ಸಿಬಂದಿ ಸ್ಥಳಕ್ಕೆ ಧಾವಿಸಿದ್ದಾರೆ ಎಂದು ತಿಳಿದು ಬಂದಿದೆ.
