
ಸುಳ್ಯ: 2000 ಕೋಟಿ ಅನುದಾನ ತಂದು ಸಚಿವ ಎಸ್.ಅಂಗಾರರು ಈ ಭಾಗದಲ್ಲಿ 6 ಅವಧಿಯಲ್ಲಿ ಗೆದ್ದುಮಾಡಿರುವ ಅಭಿವೃದ್ಧಿ ಕಾರ್ಯಗಳೇ ನಮ್ಮ ಅಭ್ಯರ್ಥಿ ಗೆಲುವಿಗೆ ಶ್ರೀರಕ್ಷೆಯಾಗಲಿದೆ, ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಸುಳ್ಯದಲ್ಲಿ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ದೊಡ್ಡ ಅಂತರದಲ್ಲಿ ವಿಜಯಿಯಾಗಲಿದ್ದಾರೆ. ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ .


ಸುಳ್ಯ ಸೇರಿದಂತೆ ದ.ಕ ಜಿಲ್ಲೆಯ 8 ಸ್ಥಾನಗಳನ್ನು ಕೂಡಾ ಬಿಜೆಪಿ ಗೆಲ್ಲಲಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಹೇಳಿದ್ದಾರೆ.ಮೇ.8 ರಂದು ಸುಳ್ಯ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಈಗಾಗಲೇ ಎರಡೆರಡು ಬಾರಿ ಬಿಜೆಪಿ ಮನೆ ಮನೆ ಅಭಿಯಾನ ನಡೆಸಿ ಪ್ರಚಾರ ಕಾರ್ಯ ಮಾಡಿದ್ದೇವೆ ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರ ಮಾಡಿರುವ ಜನಪರ ಯೋಜನೆಗಳು, ರೈತರ ಕಲ್ಯಾಣ ಕಾರ್ಯಕ್ರಮ ಗಳು ಜನರ ಮನ ಮುಟ್ಟಿದೆ. ಆದ್ದರಿಂದ ಈಗಾಗಲೇ ಮತದಾರ ಬಿಜೆಪಿಯನ್ನು ಗೆಲ್ಲಿಸಲು ನಿಶ್ಚಯ ಮಾಡಿರುವುದು ವರದಿ ನಮಗೆ ಬಂದಿದೆ. ಕರಾವಳಿ ಭಾಗದ 19 ಸ್ಥಾನಗಳನ್ನು ನಾವು ಗೆಲ್ಲುವುದರ ಮೂಲಕ ರಾಜ್ಯದಲ್ಲಿ 125 ರಿಂದ 130 ಸ್ಥಾನ ಗೆದ್ದು ಬಹುಮತದ ಸರಕಾರ ರಚನೆ ಮಾಡುತ್ತೇವೆ .

ಕಾಂಗ್ರೇಸ್ ಜನರಿಗೆ ಗ್ಯಾರಂಟಿ ಕಾರ್ಡ್ ವಿತರಣೆ ಮಾಡಿದ್ದು ಇದೆಲ್ಲಾ ನಂಬಲು ಸಾಧ್ಯವೇ ಇಲ್ಲ ಎಂದು ಜನರೇ ಆಡುತ್ತಿದ್ದಾರೆ. ಕಾಂಗ್ರೆಸ್ ಆ ರೀತಿಯಲ್ಲಿ ತನ್ನ ಪ್ರಣಾಳಿಕೆ ಮಾಡಿದೆ ಎಂದು ಅವರು ಹೇಳಿದರು
ಕರಾವಳಿ ಭಾಗದ ಜನರಿಗೆ ಕುಚ್ಚಲಕ್ಕಿ ನೀಡಬೇಕೆಂಬ ನಿಟ್ಟಿನಲ್ಲಿ ನಾವು ಪ್ರಯತ್ನ ಮಾಡಿದೆವು. ಅನುಮೋದನೆಯೂ ಸಿಕ್ಕಿತ್ತು. ಆದರೆ ಆಡಳಿತಾತ್ಮಕ ಕಾರಣದಿಂದ ಈ ಬಾರಿ ನೀಡಲು ಸಾದ್ಯವಾಗಿಲ್ಲ . ಮುಂದಿನ ದಿನದಲ್ಲಿ ನಮ್ಮ ಸರಕಾರ ಮತ್ತೆ ಅಧಿಕಾರಕ್ಕೆ ಬಂದ ಕೂಡಲೇ ನಾವು ಕುಚ್ಚಲಕ್ಕಿ ವಿತರಣೆ ಮಾಡಲಿದ್ದೇವೆ ಎಂದು ಅವರು ಹೇಳಿದರು.
ಬಿಜೆಪಿ ಮಾಡಿದ ಅಭಿವೃದ್ಧಿಯನ್ನು ಕಾಂಗ್ರೆಸ್ ಯಾವತ್ತೂ ಹೇಳುವುದದಿಲ್ಲ ಅವರು ಅಪಪ್ರಚಾರ ಮಾಡುತ್ತಾರೆ ಅಷ್ಟೇ. ಈ ಭಾಗದಲ್ಲಿ ಶಾಸಕರಾಗಿ ಅಂಗಾರರು ದೊಡ್ಡ ಮಟ್ಟದ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಅದೇ ನಮ್ಮ ಅಭ್ಯರ್ಥಿ ಗೆಲುವಿಗೆ ಶ್ರೀರಕ್ಷೆಯಾಗುತ್ತದೆ ಎಂದು ಪತ್ರಕರ್ತರ ಪ್ರಶ್ನೆಗೆ ಸಚಿವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷರಾದ ಹರೀಶ್ ಕಂಜಿಪಿಲಿ, ಮೀನುಗಾರಿಕಾ ನಿಗಮಾಧ್ಯಕ್ಷ ಎ.ವಿ.ತೀರ್ಥರಾಮ, ನ.ಪಂ. ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ, ಪ್ರಮುಖರಾದ ಎಸ್.ಎನ್. ಮನ್ಮಥ, ಎನ್.ಎ.ರಾಮಚಂದ್ರ, ಶ್ಯಾಮ್ ಪಾನತ್ತಿಲ, ಶೀನಪ್ಪ ಬಯಂಬು, ಸೀತಾರಾಮ ಕೊಲ್ಲರಮೂಲೆ, ಪ್ರಧಾನ ಕಾರ್ಯದರ್ಶಿ ಸುಭೋದ್ ಶೆಟ್ಟಿ ಮೇನಾಲ ಉಪಸ್ಥಿತರಿದ್ದರು.
