
ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ ಹಾಗೂ ಕೊಯಮತ್ತೂರು ಬಾಂಬ್ ಸ್ಫೋಟ ಪ್ರಕರಣದಲ್ಲಿ ಎನ್ಐಎ ತನಿಖೆ ಮುಂದುವರಿದಿದೆ.
ಕಳೆದ ವರ್ಷದ ಅಕ್ಟೋಬರ್ 23ರಂದು ತಮಿಳುನಾಡಿನ ಕೊಯಮತ್ತೂರು ಬಳಿ ಕಾರಿನಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಉಗ್ರ ಜಮೇಶಾ ಮುಬೀನ್ ಸಾವನ್ನಪ್ಪಿದ್ದ. ನವೆಂಬರ್ 19ರಂದು ಮಂಗಳೂರಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಉಗ್ರ ಶಾರೀಕ್ ಹಾಗೂ ಆಟೋ ಚಾಲಕ ಗಾಯಗೊಂಡಿದ್ದರು. ಈ ಎರಡೂ ಪ್ರಕರಣಗಳಲ್ಲಿ ಉಗ್ರರ ಕೈವಾಡ ಶಂಕೆ ಹಿನ್ನೆಲೆಯಲ್ಲಿ ಎನ್ಐಎ ದಾಳಿ ಮುಂದುವರಿಸಿದೆ.



ಇನ್ನು NIA ಅಧಿಕಾರಿಗಳು ಕರ್ನಾಟಕ, ತಮಿಳುನಾಡು, ಕೇರಳ ರಾಜ್ಯಗಳ 60 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಐಸಿಸ್ ಸಂಘಟನೆ ಜೊತೆ ಸಂಪರ್ಕ ಜೊತೆಗೆ ಯುವಕ ಯುವತಿಯರಿಗೆ ಹಣದ ಆಮಿಷ ಒಡ್ಡಿ ಉಗ್ರ ಸಂಘಟನೆಗಳಿಗೆ ಸೇರಿಸಲಾಗ್ತಿದೆ ಅನ್ನೋ ಶಂಕೆ ಮೇಲೆ NIA ದಾಳಿ ಮಾಡಿದೆ. ಕೊಯಂಬತ್ತೂರಿನ 14 ಕಡೆಗಳಲ್ಲಿ, ತಿರುಚಿಯ ಒಂದು ಕಡೆ, ನೀಲಗಿರೀಸ್ನ 2 ಕಡೆ, ತಿರುನಲ್ವೇಲಿಯ 3 ಕಡೆಗಳಲ್ಲಿ ಟುಟಿಕಾರಿನ್ನ ಒಂದು ಕಡೆ, ಟ್ರಿಕಾನ್ನ ಒಂದು ಕಡೆ, ಚೆನ್ನೈನ 3 ಕಡೆ, ತಿರುವಣ್ಣಾಮಲೈನ 2ಕಡೆ, ದಿಂಡಿಗಲ್, ಮೈಲಾಡುಥುರೈ, ಕೃಷ್ಣಗಿರಿ, ಕನ್ಯಾಕುಮಾರಿ, ತೇಕ್ಸಿ ಹಾಗೂ ಕೇರಳದ ಎರ್ನಾಕುಲಂ, ತಿರುಪುರ್ನಲ್ಲಿ 2 ಕಡೆಗಳಲ್ಲಿ ಹಾಗೂ ಕರ್ನಾಟಕದ ಮೈಸೂರಿನಲ್ಲಿ 1 ಕಡೆ ದಾಳಿ ಮಾಡಿ ಎನ್ಐಎ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಬಾಂಬ್ ಸ್ಫೋಟ ಪ್ರಕರಣದ ಆರೋಪಿಗಳ ಜೊತೆ ನಂಟು ಇರುವ ವ್ಯಕ್ತಿಗಳ ಮೇಲೆ ದಾಳಿ ಪರಿಶೀಲನೆ ನಡೆಸಿರುವ ಎನ್ಐಎ ಅಧಿಕಾರಿಗಳು ಲಕ್ಷಾಂತರ ರೂಪಾಯಿ ಹಣ, ಬೃಹತ್ ಪ್ರಮಾಣದ ಡಿಜಿಟಲ್ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಒಟ್ಟಿನಲ್ಲಿ ದೊಡ್ಡ ಪ್ರಮಾಣದಲ್ಲಿ ದಾಳಿಗೆ ಸಂಚು ರೂಪಿಸಿದ್ದ ಉಗ್ರರ ಜಾಡು ಹಿಡಿದಿರುವ ಎನ್ಐಎಗೆ ಮಹತ್ವದ ಸಾಕ್ಷ್ಯಗಳು ಲಭ್ಯವಾಗಿವೆ ಎನ್ನಲಾಗಿದೆ.