
ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ
ಶತಸಂಭ್ರಮ ಕಾರ್ಯಕ್ರಮ ಜ. 21 ಮತ್ತು 22ರಂದು
ಅದ್ದೂರಿಯಾಗಿ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಮೆರವಣಿಗೆ ಹಲವು ಸಾಧಕರಿಗೆ ಸನ್ಮಾನ ಹಾಗೂ ಹಲವು ಮನೋರಂಜನೆ ಕಾರ್ಯಕ್ರಮ ನಡೆಯಲಿದೆ ಎಂದು ಸಂಪಾಜೆ ಸೊಸೈಟಿ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ ತಿಳಿಸಿದ್ದಾರೆ. ಅವರು ಇಂದು ಸುಳ್ಯದ ಪ್ರೆಸ್ಕ್ಲಬ್ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ
ಕಾರ್ಯಕ್ರಮವ ವಿವರ ನೀಡಿದರು. ಜ. 21 ರಂದು ಮೆರವಣಿಗೆ ಮತ್ತು ಧ್ವಜಾರೋಹಣದ ಬಳಿಕ
ಶತಮಾನೋತ್ಸವದ ಉದ್ಘಾಟನಾ ಸಮಾರಂಭ ನಡೆಯಲಿದೆ. ಕಲ್ಲುಗುಂಡಿಯ ಕೂಲಿಶೆಡ್ನಿಂದ ಸಮಾರಂಭ ನಡೆಯುವ ದ.ಕ. ಸಂಪಾಜೆ ಉ.ಹಿ.ಪ್ರಾ.ಶಾಲೆಯ ವಠಾರದವರೆಗೆ
ವೈಭವಯುತವಾದ ಸಹಕಾರಿ ಮೆರವಣಿಗೆ ನಡೆಯಲಿದ್ದು, ಮೆರವಣಿಗೆಗೆ ಸಹಕಾರ ರತ್ನ ನಿತ್ಯಾನಂದ ಮುಂಡೋಡಿಯವರು ಚಾಲನೆ ನೀಡಲಿದ್ದಾರೆ. ಜಿಲ್ಲಾ ಸಹಕಾರಿ ಯೂನಿಯನ್ನ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ ಧ್ವಜಾರೋಹಣಗೈಯಲ್ಲಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ಒಡಿಯೂರು ಗುರುದೇವ ದತ್ತ ಸಂಸ್ಥಾನ ಮಠದ ಸ್ವಾಮೀಜಿ ಗುರುದೇವಾನಂದ ಸ್ವಾಮೀಜಿಯವರು, ಕಲ್ಲುಗುಂಡಿಯ ಸಂತ
ಪ್ರಾನ್ಸಿಸ್ ಕ್ಸೆವಿಯರ್ ಚರ್ಚ್ನ ಧರ್ಮಗುರುಗಳಾದ
ಫಾವುಲ್ ಕ್ರಾಸ್ತಾ ಹಾಗೂ ಕಲ್ಲುಗುಂಡಿ ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬರಾದ ಅಹಮ್ಮದ್ ನಹಿಮ್ ಪೈಝಿ ಭಾಗವಹಿಸಿ ಆಶೀರ್ವಚನ ಮಾಡಲಿದ್ದಾರೆ.



ಈ ವೇದಿಕೆಯಲ್ಲಿ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಕಿನ ಅಧ್ಯಕ್ಷ ಡಾ. ಎಂ.ಎನ್.ರಾಜೇಂದ್ರಕುಮಾರ್, ಸಚಿವ ಎಸ್.ಅಂಗಾರ, ಮಾಜಿ ಸಚಿವ ಬಿ.ರಮಾನಾಥ ರೈ ಮತ್ತು ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಟಿ.ಶ್ಯಾಂ ಭಟ್ರನ್ನು ಮತ್ತು ತಾಲೂಕಿನ 20 ಮಂದಿ ಗಣ್ಯರನ್ನು ಬ್ಯಾಂಕಿನ 5 ಮಂದಿ ಮಾಜಿ ಅಧ್ಯಕ್ಷರನ್ನು
ಸನ್ಮಾನಿಸಲಾಗುವುದು 9 ಹಂತಗಳಲ್ಲಿ ಧಾರ್ಮಿಕ, ಸಾಮಾಜಿಕ ಕಾರ್ಯದಲ್ಲಿ ದುಡಿಯುತ್ತಿರುವ ಸ್ಥಳಿಯ ಒಟ್ಟು 156ಮಂದಿಯನ್ನು ಸನ್ಮಾನಿಸಲಾಗುವುದು , ಇದರಲ್ಲಿ ನೇಜಿ ತೆಗೆಯುವವರು, ಕಾಯಿ ಕೀಳುವವರು, ಮಾಜೀ ಸೈನಿಕರು ಸೇರಿದ್ದಾರೆ ,ಎಂದು ಸೋಮಶೇಖರ ಕೊಯಿಂಗಾಜೆ ವಿವರ ನೀಡಿದರು.

ಅಪರಾಹ್ನ ವಿಚಾರಗೋಷ್ಠಿ ,ಹಾಸ್ಯ ಕಾರ್ಯಕ್ರಮಗಳು ನೃತ್ಯ ಹಾಗು ಸಂಗೀತ ಕಾರ್ಯಕ್ರಮಗಳು ನಡೆಯಲಿರುವುದು ಜ.22 ರಂದು ಯಕ್ಷಗಾನ ನಾಟ್ಯವೈಭವ, ಗೀತ ಸಾಹಿತ್ಯ ಕಾರ್ಯಕ್ರಮ, ತುಳು ಯಕ್ಷಗಾನ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ ನಳಿನ್ಕುಮಾರ್ ಕಟೀಲ್, ಮಂಜುನಾಥ ಭಂಡಾರಿ, ಸುಚರಿತ ಶೆಟ್ಟಿ, ಡಾ. ರೇಣುಕಾ ಪ್ರಸಾದ್ ಕೆ.ವಿ. ಮೊದಲಾದವರು ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಸಹಕಾರಿ ಸಂಘದ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಮಹಮ್ಮದ್ ಕುಂಞ ಗೂನಡ್ಕ ,ಸನ್ಮಾನ ಸಮಿತಿ ಸಂಚಾಲಕ ಕೆ.ದಾಮೋದರ ಮಾಸ್ತರ್, ಕಾರ್ಯಕ್ರಮ ಸಂಯೋಜನಾ ಸಮಿತಿ ಸಂಚಾಲಕ ಚಿದಾನಂದ ಯು.ಎಸ್., ಪ್ರಚಾರ ಸಮಿತಿ ಸಂಚಾಲಕ ಜಿ.ಕೆ. ಹಮೀದ್ , ವಾಹನ ನಿಲುಗಡೆ ಸಮಿತಿ ಸಂಚಾಲಕ ಮುಜಾಫರ್ ಅಹಮ್ಮದ್, ಚಪ್ಪರ ಮತ್ತು ಅಲಂಕಾರ ಸಮಿತಿ ಸಂಚಾಲಕ ಗಣಪತಿ ಭಟ್ ಪಿ.ಎನ್.,ನಿರ್ದೇಶಕ ಹಮೀದ್ ಹೆಚ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೀರೇಂದ್ರಕುಮಾರ್ ಜೈನ್ ಮೊದಲಾದವರಿದ್ದರು.
