
ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಸೇವಾ ಸಂಸ್ಥೆ ಹೆಸರಿನಲ್ಲಿ ಹಣ ವಸೂಲಿ ದಂಧೆ ಮಾಡಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹ ಮಾಡುತ್ತಿದ್ದ ಇಬ್ಬರು ಯುವಕರ ವಿರುದ್ದ ಪ್ರಕರಣ ದಾಖಲಾಗಿದೆ.ಬೆಳ್ತಂಗಡಿ ತಾಲೂಕಿನ ನಿಡ್ಲೆ ಗ್ರಾಮದ ಧನುಷ್ ಎಂಬವರು ನೀಡಿದ ದೂರಿನ ಮೇರೆಗೆ ಆರೋಪಿಗಳ ವಿರುದ್ದ ವಂಚನೆ ಪ್ರಕರಣ ದಾಖಲಾಗಿದೆ.

ಡಿ. 7 ರಂದು ಬೆಳ್ತಂಗಡಿ ತಾಲೂಕು ನಿಡ್ಲೆ ಗ್ರಾಮದ ಪರಾಂಡ ಎಂಬಲ್ಲಿಗೆ ಇಬ್ಬರು ಯುವಕರು ಆಗಮಿಸಿದ್ದು ಧನುಷ್ ಮನೆಗೂ ಭೇಟಿ ನೀಡಿರುತ್ತಾರೆ.ಈ ಯುವಕರು ತಾವು ಬೆಂಗಳೂರಿನಲ್ಲಿರುವ ಸ್ವಾಮಿ ವಿವೇಕಾನಂದ ಸೋಷಿಯಲ್ ಸರ್ವಿಸ್ ಟ್ರಸ್ಟ್ (ರಿ) ಇದರ ವತಿಯಿಂದ ದೇಣಿಗೆ ಸಂಗ್ರಹಣೆಗೆ ಬಂದಿದ್ದು, ದೇಣಿಗೆ ನೀಡುವಂತೆ ವಿನಂತಿಸಿದ್ದಾರೆ. ಸಂಶಯಗೊಂಡ ಧನುಶ್ ಯುವಕರ ಬಳಿಯಿದ್ದ ಕರಪತ್ರದಲ್ಲಿದ್ದ ಸಂಸ್ಥೆಯದ್ದೆಂದು ಹೇಳಲಾದ ಮೊಬೈಲ್ ನಂಬರ್ಗೆ ಕರೆ ಮಾಡಿ ವಿಚಾರಿಸಿದ್ದಾರೆ.
ಆಗ ಆ ಸಂಸ್ಥೆಯವರು ನಾವು ಯಾರನ್ನೂ ಕಳುಹಿಸಿರುವುದಿಲ್ಲವೆಂದು ತಿಳಿಸಿರುತ್ತಾರೆ. ಆದ್ದರಿಂದ ಚಾಲ್ತಿಯಲ್ಲಿ ಇಲ್ಲದೇ ಇರುವ ಸಂಸ್ಥೆಯ ಹೆಸರಿನಲ್ಲಿ ಹಣ ಸಂಗ್ರಹಣೆ ಮಾಡಿ ಸಾರ್ವಜನಿಕರಿಗೆ ಮೋಸ ಮಾಡುತ್ತಿರುವುದಾಗಿ ಧನುಶ್ ದೂರು ನೀಡಿದ್ದು ಆರೋಪಿಗಳ ವಿರುದ್ದ ಐಪಿಸಿ ಕಲಂ 420 ಜೊತೆಗೆ 34ರಂತೆ ಪ್ರಕರಣ ದಾಖಲಾಗಿದೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

