ಬೆಂಗಳೂರು: ರಾಜ್ಯದ ವಿವಿಧ ಕಾರಾಗೃಹಗಳಲ್ಲಿ ಕಳೆದ 36 ಗಂಟೆಗಳಿಂದ ನಡೆದ ವಿಶೇಷ ಕಾರ್ಯಾಚರಣೆಯಲ್ಲಿ ಮೊಬೈಲ್ ಫೋನ್ಗಳು, ಸಿಮ್ ಕಾರ್ಡ್ಗಳು ಮತ್ತು ಗಾಂಜಾ ಸೇರಿದಂತೆ ಹಲವು ನಿಷೇಧಿತ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಾರಾಗೃಹ ಇಲಾಖೆ ಡಿಜಿಪಿ ಅಲೋಕ್ ಕುಮಾರ್ ಬುಧವಾರ ತಿಳಿಸಿದ್ದಾರೆ.ಕಾರಾಗೃಹಗಳಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕಲು ಈ ವಿಶೇಷ ದಾಳಿ ನಡೆಸಲಾಗಿದ್ದು, ರಾಜ್ಯದ ಪ್ರಮುಖ ಜೈಲುಗಳಲ್ಲಿ ಶೋಧ ಕಾರ್ಯ ನಡೆಸಲಾಗಿದೆ.
ಡಿಜಿಪಿ ಅಲೋಕ್ ಕುಮಾರ್ ಅವರು ತಮ್ಮ ‘X’ ಖಾತೆಯಲ್ಲಿ ಹಂಚಿಕೊಂಡಿರುವ ಮಾಹಿತಿಯಂತೆ ಜಪ್ತಿ ಮಾಡಲಾದ ವಿವರಗಳು ಹೀಗಿವೆ:
- ಬೆಂಗಳೂರು ಜೈಲು: 6 ಮೊಬೈಲ್ ಫೋನ್ಗಳು ಮತ್ತು 4 ಚಾಕುಗಳನ್ನು ವಶಪಡಿಸಿಕೊಳ್ಳಲಾಗಿದೆ.
- ಮೈಸೂರು ಜೈಲು: ಇಲ್ಲಿ ಅತಿ ಹೆಚ್ಚು ಎಂದರೆ 9 ಮೊಬೈಲ್ ಫೋನ್ಗಳು ಮತ್ತು 11 ಸಿಮ್ ಕಾರ್ಡ್ಗಳು ಪತ್ತೆಯಾಗಿವೆ.
- ಬೆಳಗಾವಿ ಜೈಲು: 4 ಮೊಬೈಲ್ ಫೋನ್ಗಳು ಹಾಗೂ ಹೊರಗಿನಿಂದ ಜೈಲಿನೊಳಗೆ ಎಸೆಯಲಾಗಿದ್ದ 366 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
- ಮಂಗಳೂರು ಜೈಲು: ಇಲ್ಲಿಂದ 4 ಮೊಬೈಲ್ ಫೋನ್ಗಳನ್ನು ಜಪ್ತಿ ಮಾಡಲಾಗಿದೆ.
- ವಿಜಯಪುರ ಜೈಲು: ಶೋಧದ ವೇಳೆ 1 ಮೊಬೈಲ್ ಫೋನ್ ಪತ್ತೆಯಾಗಿದೆ.
ಜೈಲಿನೊಳಗೆ ನಿಷೇಧಿತ ವಸ್ತುಗಳು ಹೇಗೆ ಪೂರೈಕೆಯಾಗುತ್ತಿವೆ ಎಂಬ ಬಗ್ಗೆ ತನಿಖೆ ತೀವ್ರಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಲ್ಲದೆ, ಇಂತಹ ವಿಶೇಷ ಕಾರ್ಯಾಚರಣೆಗಳು ಮುಂದಿನ ದಿನಗಳಲ್ಲೂ ಮುಂದುವರಿಯಲಿವೆ ಎಂದು ಡಿಜಿಪಿ ಅಲೋಕ್ ಕುಮಾರ್ ಎಚ್ಚರಿಸಿದ್ದಾರೆ. ಇತ್ತೀಚೆಗಷ್ಟೇ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿದ್ದ ಅವರು, ಡಿಸೆಂಬರ್ 31ರೊಳಗೆ ಜೈಲಿನ ವ್ಯವಸ್ಥೆಯನ್ನು ಸುಧಾರಿಸುವಂತೆ ಗಡುವು ನೀಡಿದ್ದರು ಎಂಬುದು ಗಮನಾರ್ಹ.

