ಉತ್ತರಾಖಂಡದ ಕೇದಾರನಾಥ ಯಾತ್ರಾ ಮಾರ್ಗದಲ್ಲಿ ಭಾರೀ ಮಳೆ ಮತ್ತು ಭೂಕುಸಿತದಿಂದ ಭೀಕರ ಅನಾಹುತ ಸಂಭವಿಸಿದೆ. ಗೌರಿಕುಂಡದ ಬಳಿಯ ಪಾದಯಾತ್ರಾ ಮಾರ್ಗದಲ್ಲಿ ಬಂಡೆಗಳು ಹಾಗೂ ಮಣ್ಣು ಕುಸಿದು ಬಿದ್ದ ಪರಿಣಾಮ, ಕೇದಾರನಾಥ ಧಾಮಕ್ಕೆ ಹೋಗುವ ದಾರಿ ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಈ ದುರ್ಘಟನೆಯಿಂದ ಸಾವಿರಾರು ಯಾತ್ರಿಕರು ಮಾರ್ಗದ ಎರಡೂ ಕಡೆಗಳಲ್ಲಿ ಸಿಲುಕಿಕೊಂಡಿದ್ದಾರೆ.

ಕಳೆದ ರಾತ್ರಿ ಸುರಿದ ಮಳೆಯಿಂದಾಗಿ ಛೋರಿ ಹೊಳೆಯ ಬಳಿ ಬೆಟ್ಟಗಳಿಂದ ಬಂಡೆಗಳು ಮತ್ತು ಅವಶೇಷಗಳು ಕುಸಿದು ಬೀಳುತ್ತಿದ್ದು, ಪಾದಯಾತ್ರೆಯ ದಾರಿ ಸಂಪೂರ್ಣವಾಗಿ ಬಂದ್ ಆಗಿದೆ. ಹವಾಮಾನ ಇಲಾಖೆ ಮತ್ತೆ ಭಾರೀ ಮಳೆಯ ಮುನ್ಸೂಚನೆ ನೀಡಿರುವುದರಿಂದ, ಎಸ್ಡಿಆರ್ಎಫ್ ಹಾಗೂ ಇತರೆ ರಕ್ಷಣಾ ಪಡೆಗಳು ಕಾರ್ಯಾಚರಣೆಯನ್ನು ಗಂಭೀರವಾಗಿ ಕೈಗೆತ್ತಿಕೊಂಡಿವೆ.
ಕೇದಾರನಾಥಕ್ಕೆ ತೆರಳುತ್ತಿರುವ ಹಾಗೂ ಅಲ್ಲಿಂದ ವಾಪಸಾಗುತ್ತಿರುವ ಯಾತ್ರಿಕರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗುತ್ತಿದ್ದು, ಸೋನ್ಪ್ರಯಾಗ್-ಗೌರಿಕುಂಡ ಮೋಟಾರು ಮಾರ್ಗದಲ್ಲಿಯೂ ಭೂಕುಸಿತದಿಂದ ತೊಂದರೆಯಾಗಿದೆ. ಪ್ರಯಾಣ ಸುಗಮವಾಗಿಸಲು ವಿವಿಧ ಇಲಾಖೆಗಳು ಪರಸ್ಪರ ಸಹಕಾರದೊಂದಿಗೆ ಕಾರ್ಯನಿರ್ವಹಿಸುತ್ತಿವೆ. ಹವಾಮಾನ ಸುಧಾರಿಸಿದ ನಂತರ ಯಾತ್ರೆ ಪುನರಾರಂಭಿಸುವ ಸಾಧ್ಯತೆ ಇದೆ.