ಶಿವಮೊಗ್ಗ: ಕಾಂತಾರ ಚಾಪ್ಟರ್-1 ಚಿತ್ರೀಕರಣ ಪ್ರಾರಂಭವಾದಾಗಿನಿಂದ ಒಂದಲ್ಲ ಒಂದು ಅವಘಡ ಸಂಭವಿಸುತ್ತಲೇ ಇದೆ. ಇತ್ತೀಚೆಗೆ ಮೂವರು ಕಲಾವಿದರು ಸಾವನ್ನಪ್ಪಿದ ನಂತರ, ಈಗ ಸ್ವತಃ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿಯ ಜೀವನಕ್ಕೂ ಅಪಾಯ ಉಂಟಾಗುವಂತಹ ಪರಿಸ್ಥಿತಿ ಚಿತ್ರೀಕರಣದ ವೇಳೆ ಎದುರಾಗಿದೆ.


ಮಾಸ್ತಿಕಟ್ಟೆಯ ಮಾಣಿ ಜಲಾಶಯದಲ್ಲಿ ಶೂಟಿಂಗ್ ವೇಳೆ ದೋಣಿ ಮಗುಚಿದ ಘಟನೆ ನಡೆದಿದೆ. ಇದರಲ್ಲಿ ಕ್ಯಾಮೆರಾಮನ್ ಹಾಗೂ ನಟ ರಿಷಬ್ ಶೆಟ್ಟಿ ಸೇರಿ ಸುಮಾರು 30 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಪದೆಪದೆ ಈ ತರದ ಘಟನೆಗಳು ಸಂಭವಿಸುತ್ತಿರುವುದು ಚಿತ್ರತಂಡದ ಮೇಲೆ ಪಂಜುರ್ಲಿ ದೈವದ ಕೋಪಕ್ಕೆ ತುತ್ತಾಗಿದೆಯೇ? ಎಂಬ ಅನುಮಾನ ಜನರಲ್ಲಿ ಮೂಡಿದೆ. ‘ಕಾಂತಾರ ಚಾಪ್ಟರ್-1’ ಚಿತ್ರವನ್ನು ಅಕ್ಟೋಬರ್ 2ರಂದು ಬಿಡುಗಡೆ ಮಾಡಲು ಯೋಜನೆ ರೂಪಿಸಲಾಗಿದೆ.