ಉತ್ತರಾಖಂಡದ ಪವಿತ್ರ ತೀರ್ಥಕ್ಷೇತ್ರ ಕೇದಾರನಾಥ್ಗೆ ತೆರಳುತ್ತಿದ್ದ ಆರ್ಯನ್ ಏವಿಯೇಷನ್ ಸಂಸ್ಥೆಗೆ ಸೇರಿದ ಹೆಲಿಕಾಪ್ಟರ್ ಇಂದು ಬೆಳಗ್ಗೆ ಸುಮಾರು 5.30ರ ಸಮಯದಲ್ಲಿ ರುದ್ರಪ್ರಯಾಗ ಜಿಲ್ಲೆಯ ಗೌರಿಕುಂಡ್ ಪ್ರದೇಶದಲ್ಲಿ ಪತನಗೊಂಡಿದೆ. ಈ ಭೀಕರ ದುರಂತದಲ್ಲಿ ಮಗು ಸೇರಿದಂತೆ ಏಳು ಜನರು ಸ್ಥಳದಲ್ಲಿಯೇ ದುರ್ಮರಣ ಹೊಂದಿದ್ದಾರೆ ಎಂದು ಸ್ಥಳೀಯ ಆಡಳಿತದ ಮೂಲಗಳು ದೃಢಪಡಿಸಿವೆ. ಪತನಕ್ಕೆ ಹವಾಮಾನ ವೈಪರೀತ್ಯವೇ ಮುಖ್ಯ ಕಾರಣವಾಗಿರಬಹುದು ಎಂದು ಪ್ರಾಥಮಿಕ ವರದಿಗಳು ಸೂಚಿಸುತ್ತಿವೆ.




ಘಟನೆಯು ನಡೆದ ತಕ್ಷಣವೇ ರಕ್ಷಣಾ ಕಾರ್ಯಾಚರಣೆ ಪ್ರಾರಂಭಗೊಂಡಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯಾದ NDRF ಹಾಗೂ ರಾಜ್ಯದ SDRF ತಂಡಗಳು ಸ್ಥಳಕ್ಕೆ ತೆರಳಿವೆ. ನೋಡುಗರ ಮತ್ತು ಸ್ಥಳೀಯರ ಹೇಳಿಕೆಯಲ್ಲಿ ಹೆಲಿಕಾಪ್ಟರ್ ಪತನದ ಮುನ್ನ ತೀವ್ರ ಗಾಳಿ ಮತ್ತು ದಟ್ಟ ಮಂಜು ಕವಿದ ವಾತಾವರಣವಿತ್ತು ಎಂದು ತಿಳಿದು ಬಂದಿದೆ. ಘಟನೆಯನ್ನು ನೋಡಲ್ ಅಧಿಕಾರಿ ರಾಹುಲ್ ಚೌಬೆ ಮತ್ತು ಜಿಲ್ಲಾ ವಿಪತ್ತು ನಿರ್ವಹಣಾಧಿಕಾರಿ ನಂದನ್ ಸಿಂಗ್ ರಾಜ್ವರ್ ಅವರು ದೃಢಪಡಿಸಿದ್ದಾರೆ.