ಮೀನುಗಾರಿಕೆಯಲ್ಲಿ ಕೌಶಲ್ಯಾಭಿವೃದ್ಧಿ ಮತ್ತು ಸುರಕ್ಷತಾ ತರಬೇತಿ ಕೇಂದ್ರದಿಂದ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಾರಂಭ-ಉದ್ಯೋಗಾಕಾಂಕ್ಷಿಗಳು ಸ್ವಂತ ಉದ್ಯಮ ನಡೆಸಲು ಇಲ್ಲಿದೆ ಮಾರ್ಗ

ಮೀನುಗಾರಿಕೆಯಲ್ಲಿ ಕೌಶಲ್ಯಾಭಿವೃದ್ಧಿ ಮತ್ತು ಸುರಕ್ಷತಾ ತರಬೇತಿ ಕೇಂದ್ರದಿಂದ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಾರಂಭ-ಉದ್ಯೋಗಾಕಾಂಕ್ಷಿಗಳು ಸ್ವಂತ ಉದ್ಯಮ ನಡೆಸಲು ಇಲ್ಲಿದೆ ಮಾರ್ಗ

ಕರ್ನಾಟಕ ಪಶುವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ ಇದರ ಅಂಗಸಂಸ್ಥೆಯಾದ ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯ, ಹೊಯ್ಗೆಬಜಾರ್ ಆವರಣದಲ್ಲಿರುವ ‘ಮೀನುಗಾರಿಕೆಯಲ್ಲಿ ಕೌಶಲ್ಯಾಭಿವೃದ್ಧಿ ಮತ್ತು ಸುರಕ್ಷತಾ ತರಬೇತಿ ಕೇಂದ್ರ’ದ ವತಿಯಿಂದ ‘ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್’ನ ಪ್ರಾಯೋಜಿತ ಯೋಜನೆಯಡಿ ‘ಅಕ್ವೇರಿಯಂ ತಯಾರಿಕೆ, ನಿರ್ವಹಣೆ, ಅಲಂಕಾರಿಕ ಮೀನುಗಳ ಉತ್ಪಾದನೆ ಮತ್ತು ಸಾಕಣೆ’ ಎಂಬ ಶೀರ್ಷಿಕೆಯಡಿ ೬ ದಿನಗಳವರೆಗೆ ನಡೆಸಲಾಗುವ ಕೌಶಲ್ಯ ತರಬೇತಿ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.

ಮೇ 19 ರಿಂದ ಕ್ರಮವಾಗಿ ಪ್ರತೀ 6 ದಿನಗಳವರೆಗೆ ಸೀಮಿತವಾಗಿರುವಂತೆ ಪ್ರತಿಯೊಂದು ಬ್ಯಾಚ್ (ತಂಡ) ನಲ್ಲಿ ಒಟ್ಟು ೩೦ ಜನರಂತೆ ವಿವಿಧ ಬ್ಯಾಚ್‌ಗಳಿಗೆ ಉಚಿತವಾಗಿ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಈ ಸಂದರ್ಭದಲ್ಲಿ ‘ಅಕ್ವೇರಿಯಂ ತಯಾರಿಕೆ, ನಿರ್ವಹಣೆ ಮತ್ತು ಅಲಂಕಾರಿಕ ಮೀನುಗಳ ಉತ್ಪಾದನೆ’ಗೆ ಸಂಬಂಧಪಟ್ಟ ಪ್ರಾಯೋಗಿಕ ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು. ಸಾಂಕೇತಿಕವಾಗಿ ಅಲಂಕಾರಿಕ ಮೀನುಗಳನ್ನು ಗ್ಲಾಸ್ ಜಾರ್ (ಬೌಲ್) ಗಳಿಗೆ ಬಿಡುವ ಮೂಲಕ ತರಬೇತಿಗೆ ಚಾಲನೆ ನೀಡಲಾಯಿತು.

ನಗರದ ಹೊಯ್ಗೆಬಜಾರ್‌ನಲ್ಲಿ ಸೋಮವಾರ ಪ್ರಾರಂಭವಾದ ಈ ತರಬೇತಿ ಕಾರ್ಯಕ್ರಮವನ್ನು ಮೀನುಗಾರಿಕೆ ಅಪರ ನಿರ್ದೇಶಕ ಹಾಗೂ ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಗಣೇಶ್ ಕೆ. ರವರು ಉದ್ಘಾಟನಾ ಭಾಷಣ ಮಾಡಿ, ಇಂದಿನ ಯುವಕ-ಯುವತಿಯರು ಉಚಿತವಾಗಿ ನೀಡುವ ಇಂತಹ ತರಬೇತಿ ಕಾರ್ಯಕ್ರಮದ ಸೌಲಭ್ಯವನ್ನು ಸದುಪಯೋಗಪಟ್ಟು ಉದ್ಯಮಶೀಲರಾಗಬೇಕೆಂದು ಕರೆ ನೀಡಿದರು. ಮುಂದಿನ ದಿನಗಳಲ್ಲಿ ಇಂತಹ ಕೌಶಲ್ಯಾಧಾರಿತ ತರಬೇತಿ ಕಾರ್ಯಕ್ರಮಗಳಿಗೆ ನಿಗಮದ ಸಹಕಾರ ಇರುತ್ತದೆ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ದ.ಕ. ಜಿಲ್ಲಾ ಪಂಚಾಯತ್‌ನ ಯೋಜನಾ ನಿರ್ದೇಶಕ ಕೆ.ಇ. ಜಯರಾಮ್ ಮಾತನಾಡಿ, ಅಕ್ವೇರಿಯಂಗಳನ್ನು ಮನೆಗಳಲ್ಲಿ ಇಟ್ಟರೆ ಮಾನವನಿಗೆ ಬರುವ ಸಹಜವಾದ ಮಾನಸಿಕ ರೋಗಗಳನ್ನು ನಿವಾರಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು. ಬಣ್ಣಬಣ್ಣದ ಮೀನುಗಳ ಚಲನವಲನಗಳನ್ನು ಅಕ್ವೇರಿಯಂಗಳಲ್ಲಿ ವೀಕ್ಷಿಸಿದರೆ ದಣಿದು ಬಂದ ಜೀವಕ್ಕೆ ಮರುಜೀವ ಬರುವುದರಲ್ಲಿ ಯಾವುದೇ ಸಂಶಯವಿಲ್ಲ ಮತ್ತು ಮನಸ್ಸಿಗೆ ಆನಂದವನ್ನೂ ಸಹ ಕೊಡುತ್ತದೆ ಎಂದು ತಿಳಿಸಿದರು. ಈ ರೀತಿಯ ತರಬೇತಿ ಕಾರ್ಯಕ್ರಮಗಳಿಂದ ಇಂದಿನ ಯುವಪೀಳಿಗೆಗಳು ದೇಶದ ಏಳಿಗೆಗೆ ಸಹಕಾರಿಯಾಗಲು ಸುಯೋಗ ಎಂದು ಅಭಿಪ್ರಾಯಪಟ್ಟರು.

ಇನ್ನೋರ್ವ ಅತಿಥಿಯಾಗಿ ಆಗಮಿಸಿದ ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಪ್ರಧಾನ ವ್ಯವಸ್ಥಾಪಕ ಮಹೇಶ್ ಕುಮಾರ ಮಾತನಾಡಿ ಇಂತಹ ಕೌಶಲ್ಯ ಕಾರ್ಯಕ್ರಮಗಳು ಸ್ವಂತ ಉದ್ಯಮ ಮಾಡುವವರಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು. ಮೀನುಗಾರರು ತಮ್ಮ ದಿನನಿತ್ಯದ ಕಾರ್ಯಚಟುವಟಿಕೆಗಳೊಂದಿಗೆ ಕೌಶಲ್ಯಾಧರಿತ ಜ್ಞಾನವನ್ನು ಪಡೆದರೆ ಅವರಿಗೂ ತಮ್ಮ ಜೀವನೋಪಾಯ ನಡೆಸಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

ಅಧ್ಯಕ್ಷತೆವಹಿಸಿದ್ದ ಮೀನುಗಾರಿಕಾ ಮಹಾವಿದ್ಯಾಲಯದ ಡೀನ್ ಡಾ. ಹೆಚ್.ಎನ್. ಅಂಜನೇಯಪ್ಪ ಮಾತನಾಡಿ, ಈ ಕೇಂದ್ರವು ನಿರುದ್ಯೋಗಿ ಯುವಕ-ಯುವತಿಯರು, ಯುವ ಉದ್ಯಮಿಗಳು, ವಿಸ್ತರಣಾ ಕಾರ್ಯಕರ್ತರು, ಸ್ವಉದ್ಯೋಗಾಕಾಂಕ್ಷಿ ಯುವಕರು ಹಾಗೂ ಮೀನುಗಾರರು ಮತ್ತು ಕೃಷಿಕರಿಗೆ ಸಹಕಾರಿಯಾಗಿದೆ ಎಂದು ಹೇಳಿದರು. ಈ ಕೇಂದ್ರದಲ್ಲಿ ಭಾಗವಹಿಸುವವರಿಗೆ ಸ್ವಉದ್ಯೋಗ ಮತ್ತು ಆದಾಯ ಉತ್ಪಾದನಾ ಚಟುವಟಿಕೆಗಳನ್ನು ತಿಳಿಸಿಕೊಡಲಾಗುತ್ತದೆ ಎಂದು ಹೇಳಿದರು. ಆರ್ಥಿಕ ಸಂಪಾದನೆ ಮಾಡುವವರು ಇಂತಹ ತರಬೇತಿಗಳಿಂದ ಪರಿಪೂರ್ಣ ವ್ಯಕ್ತಿಯಾಗಲು ಮತ್ತು ತಮ್ಮ ಸ್ವಂತ ಕಾಲಿನ ಮೇಲೆ ನಿಲ್ಲಲು ಸಹಕಾರಿಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಡಾ. ಹೆಚ್.ಎನ್. ಅಂಜನೇಯಪ್ಪ ರವರು ತಾಂತ್ರಿಕ ಕೌಶಲ್ಯಗಳ ಜೊತೆಗೆ ತಮ್ಮದೇ ಆದ ವ್ಯವಹಾರಗಳನ್ನು ಮಾಡಲು ಅಥವಾ ವಿಸ್ತರಿಸಲು ಸಹಾಯವಾಗುವಂತೆ ಹಾಗೂ ವಿವಿಧ ಯೋಜನೆಗಳಿಗೆ ಪ್ರವೇಶಿಸುವ ಬಗ್ಗೆ ಮಾರ್ಗದರ್ಶನವನ್ನು ಈ ಕೇಂದ್ರದಿಂದ ಒದಗಿಸಲಾಗುತ್ತದೆ ಎಂದು ಹೇಳಿದರು. ಉದ್ಯಮಶೀಲತೆಯನ್ನು ಉತ್ತೇಜಿಸಲು, ಸುಸ್ಥಿರ ಅಭ್ಯಾಸಗಳನ್ನು ಬೆಂಬಲಿಸಲು ಮತ್ತು ಮೀನುಗಾರಿಕೆ ವಲಯದಲ್ಲಿ ಜೀವನೋಪಾಯವನ್ನು ಸುಧಾರಿಸಲು ಹಾಗೂ ಯಶಸ್ವಿಯಾಗಲು ಅಗತ್ಯವಾದ ತಾಂತ್ರಿಕ ಪರಿಣಿತಿ ಮತ್ತು ಜ್ಞಾನವುಳ್ಳ ಸಂಪನ್ಮೂಲಗಳೊಂದಿಗೆ ಸಬಲೀಕರಣಗೊಳಿಸಲು ವಿನ್ಯಾಸಗೊಳಿಸಲಾಗುವುದು ಎಂದರು.

ಮೀನುಗಾರಿಕೆಯಲ್ಲಿ ಕೌಶಲ್ಯಾಭಿವೃದ್ಧಿ ಮತ್ತು ಸುರಕ್ಷತಾ ತರಬೇತಿ ಕೇಂದ್ರದ ಸಂಯೋಜಕರು ಹಾಗೂ ಪ್ರಧಾನ ಸಂಶೋಧಕರು ಮತ್ತು ಮೀನುಗಾರಿಕಾ ಕಾಲೇಜಿನ ಪ್ರೊಫೆಸರ್ ಡಾ. ಎ.ಟಿ. ರಾಮಚಂದ್ರ ನಾಯ್ಕ ರವರು ಈ ಯೋಜನೆಯ ಹಿನ್ನೆಲೆ ತಿಳಿಸಿ ಸ್ವಾಗತಿಸಿದರು. ವಿವಿಧ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮಗಳನ್ನು ಗುರುತಿಸಲಾದ ಪ್ರಮುಖ ಕ್ಷೇತ್ರಗಳನ್ನು ಈ ಸಂದರ್ಭದಲ್ಲಿ ವಿವರಿಸಿದರು. ಅವುಗಳೆಂದರೆ:

೧. ಅಕ್ವೇರಿಯಂ ತಯಾರಿಕೆ, ಅಲಂಕಾರಿಕ ಮೀನುಗಳ ನಿರ್ವಹಣೆ ಮತ್ತು ಸಾಕಣೆ
೨. ಅಕ್ವಾಪೋನಿಕ್ಸ್ ಮತ್ತು ಹೈಡ್ರೋಪೋನಿಕ್ಸ್ ಗಳನ್ನು ತೋಟಗಾರಿಕೆಯೊಂದಿಗೆ ಸಂಯೋಜಿಸುವುದು
೩. ಮೌಲ್ಯವರ್ಧಿತ ಮೀನು ಉತ್ಪನ್ನಗಳ ಉತ್ಪಾದನೆ ಮತ್ತು ಪ್ರಚಾರ
೪. ಮೀನು ಸಂರಕ್ಷಣೆಯ ಸುಧಾರಿತ ತಂತ್ರಜ್ಞಾನ ಮತ್ತು ಅದರ ಪ್ರತಿಫಲ
೫. ಗೊಬ್ಬರಕ್ಕಾಗಿ ಮೀನಿನ ತ್ಯಾಜ್ಯಗಳ ಬಳಕೆ
೬. ಸ್ಕೂಬಾ ಡೈವಿಂಗ್ ಮತ್ತು ಸ್ನಾರ್ಕ್ಲಿಂಗ್
೭. ಮೀನುಗಾರಿಕೆ ದೋಣಿಗಳ ಆಧುನೀಕರಣ ಮತ್ತು ಸುರಕ್ಷತೆ
೮. ಹಸ್ತಚಾಲಿತ ಮೀನು ಬಲೆ ಹೆಣೆಯುವುದು ಮತ್ತು ದುರಸ್ತಿ

ಡಾ. ಎ.ಟಿ. ರಾಮಚಂದ್ರ ನಾಯ್ಕ ರವರು ದೀರ್ಘಾವಧಿಯ ತರಬೇತಿಗಳ ಜೊತೆಗೆ, ಅಲ್ಪಾವಧಿಯ ಮತ್ತು ವೃತ್ತಿಪರ ತರಬೇತಿಗಳನ್ನು ಅಪೇಕ್ಷಣೀಯ ಫಲಾನುಭವಿಗಳಿಗೆ ನೀಡಲಾಗುವುದು. ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳ ಸ್ಪಷ್ಟೀಕರಣದ ಕರೆಯನ್ನು ಗಮನದಲ್ಲಿಟ್ಟುಕೊಂಡು ಈ ಕೇಂದ್ರವು ತನ್ನ ಆಕಾಂಕ್ಷಿಗಳಿಗೆ ನಿರ್ದಿಷ್ಟ ಕೌಶಲ್ಯಗಳನ್ನು ನೀಡುತ್ತದೆ. ಜ್ಞಾನ ಮತ್ತು ಪ್ರಾಯೋಗಿಕ ಸಾಮರ್ಥ್ಯಗಳೊಂದಿಗೆ ಮೀನುಗಾರಿಕೆಯಲ್ಲಿ ಕೌಶಲ್ಯಪೂರ್ಣ ಕಾರ್ಯಕ್ರಮಗಳು ಜೀವನದಲ್ಲಿ ಯಶಸ್ವಿಯಾಗಲು ಅವಶ್ಯಕ, ವಿಶೇಷವಾಗಿ ಸ್ವಂತ ಉದ್ಯಮ ಸ್ಥಾಪಿಸುವವರಿಗೆ ಸಹಾಯವಾಗಲಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವವರು ಈ ಸ್ಪರ್ಧಾತ್ಮಕ ಯುಗದಲ್ಲಿ ತಮ್ಮ ಸಾಮರ್ಥ್ಯವನ್ನು ಸುಧಾರಿಸಲು ಸರಿಯಾದ ವಿಧಾನಗಳು ಮತ್ತು ಸಾಧನಗಳನ್ನು ಬಳಸುವುದನ್ನು ಒಳಗೊಂಡಿರುವ ವಿವಿಧ ತಂತ್ರಗಳನ್ನು ಕಲಿಯಬಹುದಾಗಿದೆ. ಇದಲ್ಲದೆ, ವಿಶೇಷ ಕೌಶಲ್ಯ ತರಬೇತಿಗಳನ್ನು ಪಡೆಯುತ್ತಿರುವವರು ಸುಸ್ಥಿರತೆ ಮತ್ತು ಜವಾಬ್ದಾರಿಯುತ ಅಭ್ಯಾಸಗಳನ್ನು ಉತ್ತೇಜಿಸುವ ವಲಯಗಳಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಿದ್ಧರಾಗಬಹುದಾಗಿದೆ ಎಂದು ಹೇಳಿದರು.

ಮೀನುಗಾರಿಕಾ ಕಾಲೇಜಿನ ವಿಭಾಗ ಮುಖ್ಯಸ್ಥರಾದ ಡಾ. ಎಸ್. ವರದರಾಜು, ಅಕ್ವಾಟಿಕ್ ಬಯೋಸಿಸ್ಟಮ್‌ನ ವ್ಯವಸ್ಥಾಪಕ ನಿರ್ದೇಶಕ ಡಾ. ಅಶ್ವಿನ್ ರೈ, ಪ್ರಾಧ್ಯಾಪಕ ಡಾ. ಲಕ್ಷ್ಮೀಪತಿ ಎಂಟಿ., ಕಾಲೇಜಿನ ನಿವೃತ್ತ ಸಿಬ್ಬಂದಿ ನಾರಾಯಣ ಅಮುಂಜೆ, ಗ್ರಂಥಾಲಯದ ಸಿಬ್ಬಂದಿ ವೇಣುಗೋಪಾಲ್ ಪಿ.ಪಿ., ಇತರೆ ಸಿಬ್ಬಂದಿಗಳಾದ ಪ್ರಕಾಶ್, ರಾಖೇಶ್, ದಿನೇಶ್ ಆಯ್ತಪ್ಪ, ಕಾಲೇಜಿನ ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಪದವಿಯ ವಿದ್ಯಾರ್ಥಿ-ವಿದ್ಯಾರ್ಥಿನಿಯರು, ತರಬೇತಿಗೆ ಆಗಮಿಸಿದ ಮೂಡಬಿದಿರೆ, ಬಂಟ್ವಾಳ ಮತ್ತು ಮಂಗಳೂರಿನ ಒಟ್ಟು ೩೦ ಶಿಬಿರಾರ್ಥಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಮೀನುಗಾರಿಕೆಯಲ್ಲಿ ಕೌಶಲ್ಯಾಭಿವೃದ್ಧಿ ಮತ್ತು ಸುರಕ್ಷತಾ ತರಬೇತಿ ಕೇಂದ್ರದ ಇನ್ನೋರ್ವ ಸಂಯೋಜಕರು ಹಾಗೂ ಪ್ರಧಾನ ಸಂಶೋಧಕರು ಮತ್ತು ಮೀನುಗಾರಿಕಾ ಕಾಲೇಜಿನ ಅಸೋಸಿಯೇಟ್ ಪ್ರೊಫೆಸರ್ ಡಾ. ಕುಮಾರನಾಯ್ಕ ಎ.ಎಸ್. ವಂದಿಸಿದರು. ಸಹಾಯಕ ಪ್ರಾಧ್ಯಾಪಕಿ ಡಾ. ಶೀತಲ್ ಕೆ.ಯು. ನಿರೂಪಿಸಿದರು. ಸ್ನಾತಕೋತ್ತರ ಪದವಿಯ ವಿದ್ಯಾರ್ಥಿನಿ ಹರಿತಾ ಪ್ರಾರ್ಥಿಸಿದರು.

ಉದ್ಯೋಗ ತಂತ್ರಜ್ಞಾನ