
ನವದೆಹಲಿ: ಭಾರತದ ಪ್ರಸಿದ್ಧ ಜಾವಲಿನ್ ಎಸೆತಗಾರ ಮತ್ತು ಒಲಿಂಪಿಕ್ ಪದಕ ವಿಜೇತ ನೀರಾಜ್ ಚೋಪ್ರಾಗೆ ಟೆರಿಟೋರಿಯಲ್ ಆರ್ಮಿಯಲ್ಲಿ ಲೆಫ್ಟಿನೆಂಟ್ ಕರ್ನಲ್ ಗೌರವ ಹುದ್ದೆ ನೀಡಲಾಗಿದೆ. ಈ ನೇಮಕಾತಿ ಏಪ್ರಿಲ್ 16 ರಿಂದ ಜಾರಿಗೆ ಬರುವಂತೆ ಗಜೆಟ್ ಆಫ್ ಇಂಡಿಯಾದಲ್ಲಿ ಪ್ರಕಟಿಸಲಾಗಿದೆ.


ಟೋಕಿಯೋ 2020 ಒಲಿಂಪಿಕ್ಸ್ ನಲ್ಲಿ ಭಾರತದ ಮೊದಲ ಟ್ರಾಕ್ ಮತ್ತು ಫೀಲ್ಡ್ ಚಿನ್ನದ ಪದಕವನ್ನು ಗೆದ್ದು ಇತಿಹಾಸ ನಿರ್ಮಿಸಿದ್ದ ಚೋಪ್ರಾ, 2024 ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕವನ್ನು ಗೆದ್ದು ತನ್ನ ಖ್ಯಾತಿಯನ್ನು ಮತ್ತಷ್ಟು ದೃಢಪಡಿಸಿದರು. ಎರಡು ಒಲಿಂಪಿಕ್ ಪದಕಗಳೊಂದಿಗೆ, ಅವರು ಭಾರತದ ಅತಿ ಯಶಸ್ವಿ ಒಲಿಂಪಿಕ್ ಕ್ರೀಡಾಪಟು ಆಗಿದ್ದಾರೆ.
ಈ ಗೌರವ ಹುದ್ದೆಗೆ ಮುನ್ನ, 2016 ರ ಆಗಸ್ಟ್ 26 ರಂದು ನೀರಾಜ್ ಚೋಪ್ರಾ ಅವರು ಭಾರತೀಯ ಸೇನೆಯಲ್ಲಿ ನಾಯಬ್ ಸುಬೇದಾರ್ ಹುದ್ದೆಯ ಜೂನಿಯರ್ ಕಮಿಷನ್ಡ್ ಆಫೀಸರ್ (ಜೆಸಿಒ) ಆಗಿ ಸೇರಿಸಿದ್ದರು. ಟೋಕಿಯೋ ಒಲಿಂಪಿಕ್ಸ್ ನಲ್ಲಿ ಅವರ ಗಮನಾರ್ಹ ಪ್ರದರ್ಶನದ ನಂತರ, 2021 ರಲ್ಲಿ ಅವರನ್ನು ಸುಬೇದಾರ್ ಹುದ್ದೆಗೆ ಬಡ್ತಿ ಕೊಡಲಾಯಿತು.
ಚೋಪ್ರಾ ಇದೀಗ ಸೇನೆ ಗೌರವ ಹುದ್ದೆ ನೀಡಲಾದ ಕೆಲವು ಭಾರತೀಯ ಒಲಿಂಪಿಕ್ಸ್ ಕ್ರೀಡಾಪಟುಗಳ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. 2008 ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದ ಶೂಟರ್ ಅಭಿನವ್ ಬಿಂದ್ರಾಗೆ ಲೆಫ್ಟಿನೆಂಟ್ ಕರ್ನಲ್ ಹುದ್ದೆ ನೀಡಲಾಗಿತ್ತು. 2012 ಲಂಡನ್ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಶೂಟರ್ ವಿಜಯ್ ಕುಮಾರ್ ಅವರನ್ನು ಕಾಪ್ಟನ್ ಹುದ್ದೆ ಗೌರವ ನೀಡಲಾಗಿತ್ತು.
ಕ್ರಿಕೆಟ್ ಜಗತ್ತಿನ, ಮಾಜಿ ಭಾರತೀಯ ಕಪ್ತಾನ ಮಹೇಂದ್ರ ಸಿಂಗ್ ಧೋನಿಗೆ 2011 ರಲ್ಲಿ ಟಿ 20 ವಿಶ್ವಕಪ್ (2007) ಮತ್ತು ಏಕದಿನ ವಿಶ್ವಕಪ್ (2011) ಗೆಲುವಿನ ನಂತರ ಲೆಫ್ಟಿನೆಂಟ್ ಕರ್ನಲ್ ಹುದ್ದೆ ನೀಡಲಾಗಿತ್ತು.
ನೀರಜ್ ಚೋಪ್ರಾಗೆ ನೀಡಲಾದ ಈ ಗೌರವ ಹುದ್ದೆ ಕೇವಲ ಅವರ ಕ್ರೀಡಾ ಸಾಧನೆಗೆ ಸೀಮಿತವಾಗಿರದೇ, ಅವರು ದೇಶದ ಸೇವೆಗೆ ಸಲ್ಲಿಸಿದ ಬದ್ಧತೆಯನ್ನು ತೋರಿಸುತ್ತದೆ.