ಸುಹಾಸ್ ಶೆಟ್ಟಿ ಹತ್ಯೆ – ಬೂದಿ ಮುಚ್ಚಿದ ಕೆಂಡವಾದ ದಕ್ಷಿಣ ಕನ್ನಡ ಜಿಲ್ಲೆ.

ಸುಹಾಸ್ ಶೆಟ್ಟಿ ಹತ್ಯೆ – ಬೂದಿ ಮುಚ್ಚಿದ ಕೆಂಡವಾದ ದಕ್ಷಿಣ ಕನ್ನಡ ಜಿಲ್ಲೆ.

ಮಂಗಳೂರು ಬಜಪೆ ಪ್ರದೇಶದಲ್ಲಿ ಮೇ 1, 2025 ರಂದು ನಡೆದ ರೌಡಿಶೀಟರ್ ಸುಹಾಸ್ ಶೆಟ್ಟಿ ಅವರ ಹತ್ಯೆ ಪ್ರಕರಣವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿದೆ.​

ಸಂಜೆ 8:30ರ ಸುಮಾರಿಗೆ, ಬಜಪೆ ಕಿನ್ನಿಪದವು ಬಳಿ, ಸುಹಾಸ್ ಶೆಟ್ಟಿ ಅವರು ಪ್ರಯಾಣಿಸುತ್ತಿದ್ದ ಕಾರು ಒಂದು ಪಿಕಪ್ ವಾಹನದೊಂದಿಗೆ ಡಿಕ್ಕಿಯಾಗಿ, ಕಾರು ಸಮೀಪದ ಅಂಗಡಿಯೊಂದರಲ್ಲಿ ಢಿಕ್ಕಿ ಹೊಡೆದಿದೆ. ಈ ಸಂದರ್ಭದಲ್ಲಿ, ನಾಲ್ವರು ದುಷ್ಕರ್ಮಿಗಳ ತಂಡವು ತಲವಾರುಗಳೊಂದಿಗೆ ದಾಳಿ ನಡೆಸಿ, ನಡು ರಸ್ತೆಯಲ್ಲೇ ಸುಹಾಸ್ ಶೆಟ್ಟಿ ಅವರನ್ನು ಬರ್ಬರವಾಗಿ ಕೊಂದು ಹಾಕಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ಆತಂಕ ಹೆಚ್ಚಿಸಿದೆ.

ಸುಹಾಸ್ ಶೆಟ್ಟಿ ಅವರು ಹಿಂದೂ ಕಾರ್ಯಕರ್ತರಾಗಿದ್ದು, ಮಂಗಳೂರು ಹೊರವಲಯದ ಬಜಪೆ ನಿವಾಸಿಯಾಗಿದ್ದರು. ಅವರು 2022ರ ಜುಲೈ 28ರಂದು ಸುರತ್ಕಲ್‌ನಲ್ಲಿ ನಡೆದ ಫಾಜಿಲ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಆಗಿದ್ದರು. ಈ ಪ್ರಕರಣದಲ್ಲಿ ಬಂಧಿತರಾದ ನಂತರ, ಅವರು ಜಾಮೀನಿನಲ್ಲಿ ಹೊರಬಂದಿದ್ದರು.

ಈ ಹತ್ಯೆ ಪ್ರಕರಣವು ಪ್ರತೀಕಾರದ ಕೃತ್ಯವಾಗಿರುವ ಸಾಧ್ಯತೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸಲು ವಿಶೇಷ ತಂಡಗಳನ್ನು ರಚಿಸಲಾಗಿದೆ. ಬಜಪೆ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ .​

ಅಪರಾಧ