
ವಿಜಯನಗರ: ದಿನಾಂಕ 06-02-2025ರಂದು 2ನೆಯ ತರಗತಿಯ ಕನ್ನಡ ಪಠ್ಯಪುಸ್ತಕದಲ್ಲಿರುವ ಕವಿತೆ ಕಡಲು(ಪದ್ಯ) ಬರೆದ ಕವಯಿತ್ರಿ ಶ್ರೀಮತಿ ವಾಣಿಸುಬ್ಬಯ್ಯನವರು ಮೈಸೂರಿನ ವಿಜಯನಗರದಲ್ಲಿರುವ ರಾಷ್ಟ್ರೋತ್ಥಾನ ವಿದ್ಯಾಕೇಂದ್ರಕ್ಕೆ ಭೇಟಿ ನೀಡಿದ್ದರು. ಮುಂಜಾನೆಯಿಂದ ಶಾಲೆಯ ಮಕ್ಕಳೊಡನೆಯೇ ಇದ್ದ ಅವರು ಮಕ್ಕಳ ಆಟಪಾಠಗಳನ್ನು ಕಂಡು ಮನಸೋತರು. ಜೊತೆಗೆ ತಾವೇ ರಚಿಸಿದ ‘ಬಂಡೀಪುರದ ಕಾಡು’ ಎಂಬ ಪದ್ಯವನ್ನು ಮಕ್ಕಳೆಲ್ಲರಿಗೂ ಕಲಿಸಿ, ಹಾಡಿ, ಕುಣಿಯುತ್ತಾ ಅವರನ್ನು ಸಂತಸಗೊಳಿಸಿದರು. ಕಾರ್ಯಕ್ರಮದ ನಂತರ 2ನೇ ತರಗತಿಯ ಮಕ್ಕಳಿಗೆ ಪ್ರತ್ಯೇಕವಾಗಿ ‘ಕಡಲು’ ಪದ್ಯವನ್ನು ಓದಿಸಿ, ರಾಗವಾಗಿ ತಾವೇ ಹಾಡಿ, ಮಕ್ಕಳಿಗೆ ಅರಿವಾಗುವಂತೆ ವಿವರಿಸಿದರು. ಮಕ್ಕಳು ಕವಯಿತ್ರಿಯ ಮನದಾಳದ ಮಾತುಗಳಿಗೆ ಮನಸೋತು ಆನಂದಿಸಿದರು. ಜೊತೆಗೆ ಅವರ ಮಾತುಗಳಿಂದ ಬರೆಯುವ ಸ್ಫೂರ್ತಿ ಪಡೆದರು. ಪುಸ್ತಕದಲ್ಲಿ ಹೆಸರಾಗಿದ್ದ ವ್ಯಕ್ತಿಯನ್ನು ನೋಡಿದಾಗ ಮಕ್ಕಳಿಗೆ ಆಶ್ಚರ್ಯ, ಸಂತಸ ಎಲ್ಲವೂ ಒಟ್ಟಾಗಿ ವ್ಯಕ್ತವಾಗಿ, ಕುಪ್ಪಳಿಸುತ್ತಿದ್ದರು.

