ಮಂಗಳೂರು : ನಕಲಿ ಚಿನ್ನಾಭರಣ ಅಡವಿಟ್ಟು ವಂಚನೆ; ಪ್ರಕರಣ ದಾಖಲು

ಮಂಗಳೂರು : ನಕಲಿ ಚಿನ್ನಾಭರಣ ಅಡವಿಟ್ಟು ವಂಚನೆ; ಪ್ರಕರಣ ದಾಖಲು

ಮಂಗಳೂರು: ನಕಲಿ ಚಿನ್ನಾಭರಣ ಅಡವಿಟ್ಟು ಸಾಲ ಪಡೆದು ವಂಚಿಸಿರುವ ಬಗ್ಗೆ ಮಂಗಳೂರಿನ ವೆಲೆನ್ಸಿಯಾ ಕೆನರಾ ಬ್ಯಾಂಕ್‌ ಶಾಖೆಯ ಮ್ಯಾನೇಜರ್‌ ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರಭಾವತಿ ಪ್ರಭು 2024ರ ಅ. 22ರಂದು 1.40 ಲ.ರೂ., ಅ. 25ರಂದು 1.41 ಲ.ರೂ., ನ. 21ರಂದು 1.44 ಲ.ರೂ., ನ. 25ರಂದು 1.46 ಲ.ರೂ., ನ. 29ರಂದು 2.98 ಲ.ರೂ. ಡಿ. 3ರಂದು 2.96 ಲ.ರೂ. ಸಾಲ ಪಡೆದುಕೊಂಡಿದ್ದರು.

ಅಪ್ರೈಸರ್‌ ಆಗಿದ್ದ ಹರೀಶ್‌ ರಾಜ್‌ ಚಿನ್ನಾಭರಣಗಳನ್ನು ಪರಿಶೀಲಿಸಿದ್ದರು. ಡಿ. 6ರಂದು ಪ್ರಭಾವತಿ ಮತ್ತೆ ಚಿನ್ನಾಭರಣ ಅಡವಿಡಲು ಬಂದಾಗ ಈ ಹಿಂದೆ ಅಪ್ರೈಸರ್‌ ಆಗಿದ್ದ ಹರೀಶ್‌ ರಾಜ್‌ ಇರಲಿಲ್ಲ. ಹಾಗಾಗಿ ರಾಜೇಶ್‌ ಎಂಬವರನ್ನು ಕರೆಸಿ ಚಿನ್ನಾಭರಣಗಳನ್ನು ಪರಿಶೀಲಿಸಿದಾಗ ಅವು ನಕಲಿ ಎಂದು ಗೊತ್ತಾಗಿದೆ. ಬಳಿಕ ಪ್ರಭಾವತಿ ಹಿಂದೆ ಅಡವಿಟ್ಟಿದ್ದ ಆಭರಣಗಳನ್ನು ಪರಿಶೀಲಿಸಿದಾಗ ಎಲ್ಲವೂ ನಕಲಿಯಾಗಿದ್ದವು.
ಈ ಬಗ್ಗೆ ಪ್ರಭಾವತಿ ಅವರನ್ನು ಬ್ಯಾಂಕ್‌ ಮ್ಯಾನೇಜರ್‌ ಪ್ರಶ್ನಿಸಿದಾಗ ಚಿನ್ನಾಭರಣ ಸಂಬಂಧಿ ಸುನೀಲ್‌ ಅವರದಾಗಿದ್ದು, ಆತನ ಸೂಚನೆಯಂತೆ ಸಾಲ ಪಡೆದು ಹಣವನ್ನು ಸುನಿಲ್‌ ಖಾತೆಗಳಿಗೆ ಜಮೆ ಮಾಡಿರುವುದಾಗಿ ತಿಳಿಸಿದ್ದಾರೆ. ಮಂಗಳೂರು ನಗರ ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯ