
ಅಡಿಕೆಯು ಆಯುರ್ವೇದೀಯ ಗುಣಗಳನ್ನು ಹೊಂದಿದ್ದರೂ, ಅಡಿಕೆಯನ್ನು ಕ್ಯಾನ್ಸರ್ಕಾರಕವೆಂಬ ವಿಶ್ವ ಆರೋಗ್ಯ ಸಂಸ್ಥೆಯ ಏಕಪಕ್ಷೀಯ ನಿರ್ಣಯಕ್ಕೆ ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕ್ಯಾಂಪ್ಕೊ 1973 ರಲ್ಲಿ ಅಡಿಕೆಬೆಳೆಗಾರರ ಹಿತ ಕಾಪಾಡಲು ಬಹು ರಾಜ್ಯ ಸಹಕಾರ ಕಾಯಿದೆ ಅಡಿಯಲ್ಲಿ ಸ್ಥಾಪಿಸಲ್ಪಟ್ಟ ಸಂಸ್ಥೆ. ಕಳೆದ 5 ದಶಕಗಳಿಂದ ರೈತರ ಹಿತ ಕಾಪಾಡಲು ನಿರಂತರ ಪ್ರಯತ್ನ ಮಾಡುತ್ತಿದೆ. ಈಗಲೂ ಆ ಕೆಲಸ ಮಾಡುತ್ತಿದೆ.
ಪುರಾತನ ಕಾಲದಿಂದಲೂ ಅಡಿಕೆಯು ಭಾರತೀಯ ಸಂಸ್ಕೃತಿಯಲ್ಲಿ ಪವಿತ್ರ ಸ್ಥಾನವನ್ನು ಪಡೆದಿದೆ. ಶುಭ ಸಮಾರಂಭಗಳಲ್ಲಿ ವೀಳ್ಯದೆಲೆಯೊಂದಿಗೆ ಅಡಿಕೆಯನ್ನು ಸೇರಿಸಿ ತಾಂಬೂಲ ನೀಡುವುದು ಭಾರತೀಯ ಸಂಸ್ಕೃತಿ ಪ್ರತೀಕ. ಆಯುರ್ವೇದ ಶಾಸ್ತ್ರದಲ್ಲಿಯೂ ಅಡಿಕೆಗೆ ಅದರದೇ ಆದ ಔಷದೀಯ ಗುಣಗಳಿಂದಾಗಿ ವಿಶೇಷಸ್ಥಾನ ಮಾನವಿದೆ. ಅಡಿಕೆ ಕಫ ಮತ್ತು ಪಿತ್ಥದ ಸಮಸ್ಯೆ ಶಮನಗೊಳಿಸುವ ಮತ್ತು ಜೀರ್ಣಕ್ರೀಯೆಯನ್ನು ಉದ್ದೀಪನಗೊಳಿಸುವ ಗುಣ ಹೊಂದಿದೆ. ಇದರ ಆಯುರ್ವೇದದ ಸತ್ವದಿಂದಾಗಿ ವೀಳ್ಯದೆಲೆಯೊಂದಿಗೆ ಅಡಿಕೆ ಬಳಸಿ ತಾಂಬೂಲ ತಿನ್ನುವುದು ಸತ್-ಸಂಪ್ರದಾಯ ಮತ್ತು ಆರೋಗ್ಯದಾಯಕ. ಹಾಗಿದ್ದರೂ ಅಡಿಕೆಕ್ಯಾನ್ಸರ್ಕಾರಕ ಎಂಬ WHO ವರದಿ ಅಡಿಕೆ ಬೆಳೆಗಾರರನ್ನು ತೀವ್ರಸಂಕಷ್ಟಕ್ಕೆ ಸಿಲುಕಿಸಿದೆ.
ಈ ವರದಿಯಿಂದ ಅಡಿಕೆ ಬೆಳೆಗಾರರ ಹಿತರಕ್ಷಣೆಗೆ ಶ್ರಮಿಸುತ್ತಿರುವ ಕ್ಯಾಂಪ್ಕೊ ಕಾನೂನಾತ್ಮಕ ತೊಂದರೆಗಳನ್ನು ಅನುಭವಿಸುತ್ತಿದೆ. WHO ವರದಿಗಳು ಸಂಶೋಧನೆಗಳ ಸಂಪೂರ್ಣ ಮಾಹಿತಿಗಳನ್ನು ಬಹಿರಂಗಪಡಿಸಿರುವುದಿಲ್ಲ. ಹಾಗಾಗಿ ಸತ್ಯಾಸತ್ಯತೆಗಳನ್ನು ಮುಚ್ಚಿಟ್ಟಿರಬಹುದು ಅಥವಾ ವರದಿಗಳನ್ನು ತಿರುಚಿರಬಹುದೆಂಬ ಸಂಶಯ ಮೂಡುತ್ತಿದೆ. ಪುರಾತನಕಾಲದಿಂದಲೂ ಅಡಿಕೆಯ ಔಷದೀಯ ಗುಣಗಳ ಬಗ್ಗೆ ಜನಸಾಮಾನ್ಯರಿಗೂ ಅರಿವು ಇದೆ. ಹೀಗಿದ್ದರೂ ಕೂಡ WHO ಅಡಿಕೆಯ ಉಪಯೋಗದ ಬಗೆಗಿನ ನೈಜವರದಿಗಳನ್ನು ಗಣನೆಗೆ ತೆಗೆದುಕೊಳ್ಳದೆ ಏಕಪಕ್ಷೀಯ ನಿರ್ಣಯ ತೆಗೆದುಕೊಂಡಿರುವುದಕ್ಕೆ ಕ್ಯಾಂಪ್ಕೊ ಖಂಡನೆಯನ್ನು ವ್ಯಕ್ತಪಡಿಸುತ್ತದೆ ಎಂದು ಕಿಶೋರ್ ಕುಮಾರ್ ಕೊಡ್ಗಿ ಹೇಳಿದ್ದಾರೆ.
ಕ್ಯಾಂಪ್ಕೊ ಈಗಾಗಲೇ ಹಲವು ಸಂಶೋಧನೆಗಳನ್ನು ನಡೆಸಿದ್ದು ,ಅವುಗಳ ವರದಿಗಳೆಲ್ಲಾ ಅಡಿಕೆ ಕ್ಯಾನ್ಸರ್ಕಾರಕವಲ್ಲ ಬದಲಾಗಿ ರೋಗವನ್ನು ಶಮನಗೊಳಿಸುವ ಔಷಧೀಯ ಗುಣಗಳನ್ನು ಹೊಂದಿರುವ ಬಗ್ಗೆ ದೃಢಪಡಿಸಿದೆ.
1974 ರಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ ಬೆಂಗಳೂರಿನ ಕುಮಾರಿ ಮತ್ತು ಇತರರು ನಡೆಸಿದ ಅಧ್ಯಯನವು ತಂಬಾಕು ರಹಿತ ಅಡಿಕೆ ಮತ್ತು ವಿಳ್ಯದೆಲೆಯ ಸೇವನೆಯಿಂದ ಯಾವುದೇ ಟ್ಯೂಮರ್ಗಳು ಉಂಟಾಗಿರುವುದನ್ನು ಕಂಡುಹಿಡಿಯಲು ಸಾಧ್ಯವಾಗಿಲ್ಲ, ಬದಲಾಗಿ ಟ್ಯೂಮರ್ ಗಳ ಬೆಳವಣಿಗೆಯನ್ನು ತಡೆಯುವಲ್ಲಿ ಯಶಸ್ವಿಯಾಗಿರುವುದು ಕಂಡುಬಂದಿದೆ ಎಂದು ಕೊಡ್ಗಿ ವಿವರಿಸಿದ್ದಾರೆ.
2016ರಲ್ಲಿ 25 ಜನರ ತಂಡವು ನಡೆಸಿದ ಅಧ್ಯಯನವು ಅಡಿಕೆಯಿಂದ ತೆಗೆದ ಸಾರವು ಹೆಪಟೋಸೆಲ್ಯುಲ ಕ್ಯಾನ್ಸರ್ಗೆ ಸಂಬಂಧಿಸಿದಂತೆ ಟ್ಯೂಮರ್ ಗಳ ಬೆಳವಣಿಗೆಯನ್ನು ತಡೆಯುವ ಗುಣಹೊಂದಿದೆ ಎಂಬುದಾಗಿ ವರದಿ ನೀಡಿದೆ. 2022ರಲ್ಲಿ ನಿಟ್ಟೆ ಯುನಿವರ್ಸಿಟಿ ಸಂಶೋಧನೆ ನಡೆಸಿದೆ. ಅವರ ಅಧ್ಯಯನವೂ ಅಡಿಕೆ ಕ್ಯಾನ್ಸರ್ಕಾರಕವಲ್ಲ ಎಂಬ ವಾದವನ್ನು ಪುಷ್ಟೀಕರಿಸಿದೆ.
ಇತ್ತೀಚೆಗೆ ವಿಶ್ವಆರೋಗ್ಯ ಸಂಸ್ಥೆ ಯ ಮಾಜಿ ವಿಜ್ಞಾನಿ ಡಾ.ಸೌಮ್ಯಸ್ವಾಮಿನಾಥನ್ ಅವರನ್ನು ಕ್ಯಾಂಪ್ಕೊ ತಂಡ ಬೇಟಿ ಮಾಡಿ ಚರ್ಚಿಸಿದಾಗ , ICMR ಮತ್ತು ICAR ನಲ್ಲಿ ಸಂಶೋಧನೆ ನಡೆಸಿ ಅಡಿಕೆ ಕ್ಯಾನ್ಸರ್ ಕಾರಕ ಎಂಬವಾದವನ್ನು ಸಮರ್ಥವಾಗಿ ಪ್ರಶ್ನಿಸುವಂತೆ ಸಲಹೆ ನೀಡಿದ್ದಾರೆ ಎಂದು ಕಿಶೋರ್ ಕುಮಾರ್ ಕೊಡ್ಗಿ ತಿಳಿಸಿದ್ದಾರೆ.
WHO ನಿಲುವನ್ನುಮರು ಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ ಭಾರತೀಯ ವಿಜ್ಞಾನ ಸಂಸ್ಥೆಯಂತಹ ಸರಕಾರಿ ಮಾನ್ಯತೆ ಪಡೆದ ಹಾಗೂ ನುರಿತ ಸಂಶೋಧನಾ ಸಂಸ್ಥೆಗಳಲ್ಲಿ ಅಧ್ಯಯನ ನಡೆಸಿ ವರದಿ ಮಂಡಿಸಲು ಸಹಕಾರ ನೀಡುವಂತೆ ಕೇಂದ್ರ ಸರಕಾರದಲ್ಲಿ ರೈತರ ಪರವಾಗಿ ಕ್ಯಾಂಪ್ಕೊ ಮನವಿ ಮಾಡುತ್ತಿದೆ ಎಂದು ಕಿಶೋರ್ ಕುಮಾರ್ ಕೊಡ್ಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
