ಮಂಗಳೂರು – ಎಲೆಕ್ಟ್ರಿಕಲ್ ಆಟೊರಿಕ್ಷಾಗಳಿಗೆ ಜಿಲ್ಲೆಯಾದ್ಯಂತ ಸಂಚರಿಸಲು ಜಿಲ್ಲಾಡಳಿತ ಅವಕಾಶ :ಆದೇಶದ ವಿರುದ್ದ ರಸ್ತೆಗಿಳಿದ ಇತರ ಆಟೋ ಚಾಲಕರು.

ಮಂಗಳೂರು – ಎಲೆಕ್ಟ್ರಿಕಲ್ ಆಟೊರಿಕ್ಷಾಗಳಿಗೆ ಜಿಲ್ಲೆಯಾದ್ಯಂತ ಸಂಚರಿಸಲು ಜಿಲ್ಲಾಡಳಿತ ಅವಕಾಶ :ಆದೇಶದ ವಿರುದ್ದ ರಸ್ತೆಗಿಳಿದ ಇತರ ಆಟೋ ಚಾಲಕರು.

ಮಂಗಳೂರು ಅಗಸ್ಟ್ 29: ಎಲೆಕ್ಟ್ರಿಕಲ್ ಆಟೊರಿಕ್ಷಾಗಳಿಗೆ ಜಿಲ್ಲೆಯಾದ್ಯಂತ ಸಂಚರಿಸಲು ಜಿಲ್ಲಾಡಳಿತ ಅವಕಾಶ ನೀಡಿರುವುದನ್ನು ವಿರೋಧಿಸಿ ಇತರ ಆಟೊರಿಕ್ಷಾ ಚಾಲಕ ಮಾಲೀಕರ ಸಂಘಗಳ ಒಕ್ಕೂಟದ ನೇತೃತ್ವದಲ್ಲಿ ಆಟೊರಿಕ್ಷಾ ಚಾಲಕರು ಪ್ರತಿಭಟನೆ‌ ನಡೆಸಿದರು. ನಗರದ ಜ್ಯೋತಿ ಸರ್ಕಲ್‌ನಿಂದ ಮೆರವಣಿಗೆ ಆರಂಭಿಸಿದ ಆಟೊರಿಕ್ಷಾ ಚಾಲಕರು, ಕ್ಲಾಕ್ ಟವರ್ ವರೆಗೆ ಮೆರವಣಿಗೆ‌ ನಡೆಸಿದರು.

ದಕ್ಷಿಣ ಕನ್ನಡ ಜಿಲ್ಲಾ ಆಟೋರಿಕ್ಷಾ ಚಾಲಕರ ಮಾಲಕರ ಸಂಘಗಳ ಒಕ್ಕೂಟ ಮತ್ತು ಸಮಾನ ಮನಸ್ಕ ಆಟೋರಿಕ್ಷಾ ಚಾಲಕರ ಮಾಲಕರ ಸಂಘಟನೆಗಳ ನೇತೃತ್ವದಲ್ಲಿ ನಗರದ ಅಂಬೇಡ್ಕರ್ ವೃತ್ತದಿಂದ ಕ್ಲಾಕ್ ಟವರವರೆಗೆ ಮೆರವಣಿಗೆ ಮೂಲಕ ಸಾವಿರವರು ಆಟೋ ಚಾಲಕರು ಮಾಲಕರು ಮೆರವಣಿಗೆ ಮೂಲಕ ಬಂದು , ಸ್ಥಳಕ್ಕೆ ಜಿಲ್ಲಾಧಿಕಾರಿ ಆಗಮಿಸಿ ಮನವಿ ಸ್ವೀಕರಿಸಲು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

ಈ ವೇಳೆ ಸಿಐಟಿಯು ಮುಖಂಡ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ಎಲೆಕ್ಟ್ರಿಕ್ ರಿಕ್ಷಾಗಳಿಗೆ‌ ಜಿಲ್ಲೆಯಾದ್ಯಂತ ಸಂಚಾರಕ್ಕೆ ಅನುಮತಿ ನೀಡಿರುವ ಜಿಲ್ಲಾಧಿಕಾರಿ ಆದೇಶವು ಏಕಪಕ್ಷೀಯವಾಗಿದೆ. ಈ ಆದೇಶ‌ ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಹೋರಾಟ ಮುಂದುವರಿಯಲಿದೆ ಎಂದರು. ಈ ಆದೇಶವು ಹೊಟ್ಟೆಪಾಡಿಗಾಗಿ‌ ದುಡಿಯುವ ರಿಕ್ಷಾ ಚಾಲಕರ ಬದುಕಿಗೆ‌ ಕೊಳ್ಳಿ ಇಟ್ಟಂತೆ ಆಗಿದೆ. ಡಿಸಿ ಸ್ಥಳಕ್ಕೆ ಬರಬೇಕು ಅಥವಾ ಅವರು ಅಧಿಕೃತ ಅಧಿಕಾರಿಯನ್ನು ಸ್ಥಳಕ್ಕೆ‌ ಕಳುಹಿಸುವವರೆಗೆ ಸ್ಥಳದಿಂದ ಕದಲುವುದಿಲ್ಲ ಎಂದರು.

ಇದು ಕೇಂದ್ರ ಸರ್ಕಾರದ ತೀರ್ಮಾನ ಎಂದು ಅಧಿಕಾರಿಗಳು ಹೇಳುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏಕಾಏಕಿ ಈ ಆದೇಶ ಹೊರಡಿಸಲಾಗಿದೆ. ಪಕ್ಕದ ಉಡುಪಿಯಲ್ಲಿ ಇದು ಅನುಷ್ಠಾನ ಗೊಂಡಿಲ್ಲ. ಜಿಲ್ಲಾಡಳಿತ ಎಲೆಕ್ಟ್ರಿಕ್ ಕಂಪನಿ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ ಎಂದು ಆರೋಪಿಸಿದರು. ಸಂಘಟನೆ ಪ್ರಮುಖರಾದ ಅಶೋಕ ಶೆಟ್ಟಿ, ಭರತ್, ಮುಹಮ್ಮದ್ ಅನ್ಸಾರ್, ಲೋಕೇಶ್ ಬಲ್ಲಾಳ್ ಬಾಗ್‌ ಮತ್ತಿತರರು ಇದ್ದರು. ಚಾಲಕರು ರಿಕ್ಷಾ ಸಂಚಾರ ಬಂದ್ ಮಾಡಿ ಪ್ರತಿಭಟನೆ ಯಲ್ಲಿ ಭಾಗವಹಿಸಿದ್ದರಿಂದ ಪ್ರಯಾಣಿಕರು ಪರದಾಡುವಂತಾಯಿತು.‌ ಎಲೆಕ್ಟ್ರಿಕ್‌ ರಿಕ್ಷಾಗಳು ವಿರಳ‌ ಸಂಖ್ಯೆಯಲ್ಲಿ ಸಂಚರಿಸುತ್ತಿರುವುದು ಕಂಡು ಬಂತು

ರಾಜ್ಯ