
ವಯನಾಡ್: ಗುಡ್ಡ ಕುಸಿತದಿಂದ ನಿರ್ನಾಮವಾಗಿರುವ ವಯನಾಡ್ ನ ಪ್ರದೇಶಗಳಿಗೆ ಕಾಂಗ್ರೆಸ್ ನಾಯಕ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಪ್ರಿಯಂಕಾ ಗಾಂಧಿ ಭೇಟಿ ನೀಡಿದ್ದಾರೆ.


ಗಮ್ ಬೂಟ್ ಮತ್ತು ಮಳೆಯಿಂದ ರಕ್ಷಣೆಗಾಗಿ ರೈನ್ ಕೋಟ್ ಧರಿಸಿಕೊಂಡ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ದುರಂತ ಸಂಭವಿಸಿದ ಸ್ಥಳದಲ್ಲಿ ಓಡಾಡಿ ಸಿಬ್ಬಂದಿಗಳಿಂದ ಮಾಹಿತಿ ಪಡೆದರು.
ಸುರಿಯುವ ಮಳೆಯ ನಡುವೆಯೂ ರಾಹುಲ್ ಸ್ಥಳ ಪರಿಶೀಲನೆ ನಡೆಸಿದರು. ಚೂರ್ಲಮಲದ ದುರಂತ ಸ್ಥಳ, ಮೇಪ್ಪಾಡಿಯ ಸಂತ್ರಸ್ತರ ಕೇಂದ್ರಗಳಿಗೂ ರಾಹುಲ್ ಭೇಟಿ ನೀಡಿದರು.
ಗುಡ್ಡ ಕುಸಿತ ಸಂಭವಿಸಿದ ಸ್ಥಳ ಈಗ ಕೆಸರು ಗೆದ್ದೆಯಂತಾಗಿದೆ. ಮಣ್ಣು ಮತ್ತು ನೀರು ಸೇರಿಕೊಂಡು ನಡೆಯಲೂ ಕಷ್ಟವಾಗುವಂತಹ ಪರಿಸ್ಥಿತಿ ಎದುರಾಗಿದೆ. ಪರಿಹಾರ ಕಾರ್ಯ ಮುಂದುವರಿಸಲು ರಕ್ಷಣಾ ಸಿಬ್ಬಂದಿಗಳು ತಾತ್ಕಾಲಿಕವಾಗಿ ಸೇತುವೆ, ಡೇರೆಗಳನ್ನು ನಿರ್ಮಿಸಿಕೊಂಡಿದ್ದಾರೆ.
ಗುಡ್ಡ ಕುಸಿತದಿಂದಾಗಿ ವಯನಾಡಿನಲ್ಲಿ ಸಾವನ್ನಪ್ಪಿದವರ ಸಂಖ್ಯೆ 300 ಕ್ಕೆ ತಲುಪಿದೆ. ಇನ್ನೂ ನೂರಾರು ಜನ ನಾಪತ್ತೆಯಾಗಿದ್ದು ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.