
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ ಮುಂದುವರಿದಿದ್ದು, ನೇತ್ರಾವತಿ ನದಿಯಲ್ಲಿ ಗುರುವಾರ ನೀರಿನ ಹರಿವು ಅಪಾಯದ ಮಟ್ಟವನ್ನು ತಲುಪಿದೆ.


ಉಪ್ಪಿನಂಗಡಿಯ ಬಳಿ ನೇತ್ರಾವತಿ ನೀರು ಹರಿವಿಗೆ 29 ಮೀಟರ್ ಅಪಾಯದ ಮಟ್ಟವಾಗಿದ್ದು, ಇಲ್ಲಿ ನೀರು 28.7 ಮೀಟರ್ವರೆಗೆ ತಲುಪಿದೆ. ಶಂಭೂರು ಎಎಂಆರ್ ಅಣೆಕಟ್ಟೆ ಬಳಿ ನದಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, 18.9 ಮೀಟರ್ ವರೆಗೂ ನೀರಿನ ಮಟ್ಟ ತಲುಪಿದೆ. ಈ ಅಣೆಕಟ್ಟೆಯ ಎಲ್ಲ ಗೇಟುಗಳನ್ನು ತೆರೆಯಲಾಗಿದೆ. 7 ಮೀ ಎತ್ತರದಷ್ಟು ನೀರು ಸಂಗ್ರಹಿಸುವ ಸಾಮರ್ಥ್ಯ ಹೊಂದಿರುವ ತುಂಬೆ ಅಣೆಕಟ್ಟೆಯಲ್ಲಿ ಸದ್ಯಕ್ಕೆ 6 ಮೀ ವರೆಗೆ ಮಾತ್ರ ನೀರು ಸಂಗ್ರಹಿಸಲಾಗುತ್ತದೆ. ಈ ಅಣೆಕಟ್ಟೆಯ ಎಲ್ಲಾ 30 ಗೇಟ್ಗಳನ್ನು ತೆರೆಯಲಾಗಿದ್ದು ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಈಗಾಗಲೇ ತಗ್ಗು ಪ್ರದೇಶಗಳಿಗೆ ನೀರು ನುಗ್ಗುತ್ತಿದ್ದು ನದಿ ತೀರದ ಹಲವು ತೋಟಗಳು ಜಲಾವೃತವಾಗಿದೆ ಎಂದು ತಿಳಿದು ಬಂದಿದೆ.
