ದಕ್ಷಿಣ ಕನ್ನಡ, ಉಡುಪಿಯಲ್ಲಿ ರೆಡ್‌ ಅಲರ್ಟ್‌; ಸಮುದ್ರ ತೀರದಲ್ಲಿ ಮನರಂಜನಾ ಚಟುವಟಿಕೆ ಸ್ಥಗಿತಗೊಳಿಸುವಂತೆ ಹವಾಮಾನ ಇಲಾಖೆ ಸೂಚನೆ

ದಕ್ಷಿಣ ಕನ್ನಡ, ಉಡುಪಿಯಲ್ಲಿ ರೆಡ್‌ ಅಲರ್ಟ್‌; ಸಮುದ್ರ ತೀರದಲ್ಲಿ ಮನರಂಜನಾ ಚಟುವಟಿಕೆ ಸ್ಥಗಿತಗೊಳಿಸುವಂತೆ ಹವಾಮಾನ ಇಲಾಖೆ ಸೂಚನೆ

.

: ರಾಜ್ಯಾದ್ಯಂತ ನಿರಂತರ ಮಳೆ ಸುರಿಯುತ್ತಿದೆ. ಕೆಲವೆಡೆ 18 ಸೆಮೀ ಮಳೆ ವರದಿಯಾಗಿದೆ. ಇಂದು ಕೂಡಾ ಅನೇಕ ಕಡೆ ಭಾರೀ ಮಳೆ ಆಗಲಿದ್ದು ಹವಾಮಾನ ಇಲಾಖೆಯು ದ.ಕನ್ನಡ, ಉ. ಕನ್ನಡ. ಉಡುಪಿಯಲ್ಲಿ ರೆಡ್‌ ಅಲರ್ಟ್‌ ಘೋಷಿಸಿದೆ. ಮೀನುಕಾರಿಕೆ, ಸಮುದ್ರ ತೀರದಲ್ಲಿ ಮನರಂಜನಾ ಚಟುವಟಿಕೆಯನ್ನು ಸ್ಥಗಿತಗೊಳಿಸುವಂತೆ ಸೂಚಿಸಲಾಗಿದೆ.

ನಿನ್ನೆ ಎಲ್ಲೆಲ್ಲಿ, ಎಷ್ಟು ಮಳೆ ಆಯ್ತು?

ನಿನ್ನೆ ಕರಾವಳಿಯ ಬಹುತೇಕ ಕಡೆ ಭಾರೀ ಮಳೆ ಆಗಿದೆ. ದ.ಕನ್ನಡ ಜಿಲ್ಲೆಯ ಮೂಲ್ಕಿಯಲ್ಲಿ 18 ಸೆಮೀ, ಉ. ಕನ್ನಡ ಜಿಲ್ಲೆಯ ಮಂಕಿಯಲ್ಲಿ 17 ಸೆಮೀ, ಭಾಗಮಂಡಲದಲ್ಲಿ 15 ಸೆಮೀ, ದ.ಕನ್ನಡ ಜಿಲ್ಲೆಯ ಮಣಿಯಲ್ಲಿ 14 ಸೆಮೀ, ಮಂಗಳೂರು ವಿಮಾನ ನಿಲ್ದಾಣದಲ್ಲಿ 13 ಸೆಮೀ, ಉಡುಪಿಯ ಕುಂದಾಪುದಲ್ಲಿ 13 ಸೆಮೀನಷ್ಟು ಮಳೆ ಆಗಿದ್ದು ಅತಿ ಹೆಚ್ಚು ಮಳೆ ಆದ ಪ್ರದೇಶಗಳಾಗಿವೆ. ಇದನ್ನು ಹೊರತುಪಡಿಸಿ ಅಂಕೋಲಾ, ಗೋಕರ್ಣದಲ್ಲಿ ತಲಾ 11 ಸೆಮೀ, ಸುಳ್ಯ, ಪಣಂಬೂರು, ಪುತ್ತೂರಿನಲ್ಲಿ ತಲಾ 10 ಸೆಮೀ, ಉಪ್ಪಿನಂಗಡಿ, ಮಂಗಳೂರಿನಲ್ಲಿ ತಲಾ 10, ಸಿದ್ದಾಪುರ, ಆಗುಂಬೆ, ನಾಪೋಕ್ಲು, ಕುಮಟಾ, ಉ, ಕನ್ನಡದಲ್ಲಿ ತಲಾ 9, ಗೇರ್ಸೊಪ್ಪ ಹೊನ್ನಾವರ, ಪೊನ್ನಂಪೇಟೆ, ಶಿರಾಲಿ, ಕೋಟ ಕೊಟ್ಟಿಗೆಹಾರ, ಮೂರ್ನಾಡುವಿನಲ್ಲಿ ತಲಾ 7 ಸೆಮೀನಷ್ಟು ಮಳೆ ಆಗಿದೆ. ಹಾಗೇ ಕದ್ರಾ, ಸಿದ್ದಾಪುರದಲ್ಲಿ ತಲಾ 6, ಧರ್ಮಸ್ಥಳ, ಕಾರ್ಕಳ, ಕಮ್ಮರಡಿ, ಲಿಂಗನಮಕ್ಕಿಯಲ್ಲಿ 5, ಸೋಮವಾರ ಪೇಟೆ, ತಾಳಗುಪ್ಪ, ಶೃಂಗೇರಿಯಲ್ಲಿ ತಲಾ 4, ಕಾರವಾರ , ಯಲ್ಲಾಪುರ, ಲೋಂಡಾ, ಹುಂಚದಕಟ್ಟೆ ಕಳಸದಲ್ಲಿ ತಲಾ 3 ಸೆಮೀನಷ್ಟು ಮಳೆ ಆಗಿದೆ.

ಇಂದು ಎಲ್ಲಿ ಮಳೆ ಆಗಲಿದೆ?

ಇಂದು ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ವಿಜಯನಗರ, ಜಿಲ್ಲೆಗಳ ಹಲವು ಸ್ಥಳಗಳಲ್ಲಿ ಮತ್ತು ಉತ್ತರ ಒಳನಾಡಿನ ಬಾಗಲಕೋಟೆ, ಬೀದರ್‌, ಗದಗ, ಕಲಬುರ್ಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆ ಆಗುವ ಸಾಧ್ಯತೆ ಇದೆ.

ಯಾವ ಸ್ಥಳದಲ್ಲಿ ಎಚ್ಚರಿಕೆ ಅಗತ್ಯ?

ಇಂದು ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಗಾಳಿಯೊಂದಿಗೆ ಭಾರೀ ಮಳೆ ಸಂಭವಿಸುವ ಸಾಧ್ಯತೆ ಇದೆ. ಧಾರವಾಡ, ಹಾವೇರಿ, ಬೆಳಗಾವಿ, ಹಾಸನ ಜಿಲ್ಲೆಗಳಲ್ಲಿ ಗಂಟೆಗೆ 45-55 ಕಿಮೀ ವೇಗದ ಗಾಳಿಯೊಂದಿಗೆ ಭಾರೀ ಮಳೆ ಬೀಳಲಿದೆ. ಭಾರತೀಯ ಹವಾಮಾನ ಇಲಾಖೆಯು ದಕ್ಷಿಣ ಕನ್ನಡ, ಕರ್ನಾಟಕ ಕರಾವಳಿಯಲ್ಲಿ ಮುಲ್ಕಿಯಿಂದ ಮಂಗಳೂರಿನವರೆಗೆ, ಬೈಂದೂರಿನಿಂದ ಕಾಪುವರೆಗಿನ ಉಡುಪಿ ಸಮುದ್ರ ತೀರದಲ್ಲಿ, ಉತ್ತರ ಕನ್ನಡ ಮಾಜಾಳಿಯಿಂದ ಭಟ್ಕಳದವರೆಗೆ ಅಲೆಗಳ ಎಚ್ಚರಿಕೆ ನೀಡಿದ್ದು ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸೂಚಿಸಿದೆ. ಸಮುದ್ರದಲ್ಲಿ ಸಣ್ಣ ಹಡಗುಗಳು ಸಂಚರಿಸದಂತೆ ಸಮುದ್ರ ತೀರದಲ್ಲಿ ಮನರಂಜನಾ ಚಟುವಟಿಕೆಗಳನ್ನು ಸಂಪೂರ್ಣ ಸ್ಥಗಿತಗೊಳಿಸುವಂತೆ ಸೂಚಿಸಿದೆ.

ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡದಲ್ಲಿ ರೆಡ್‌ ಅಲರ್ಟ್‌, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗಿನಲ್ಲಿ ಆರೆಂಜ್‌ ಅಲರ್ಟ್‌, ಬೆಳಗಾವಿ, ಧಾರವಾಡ, ಹಾವೇರಿ, ಹಾಸನ, ಮೈಸೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ.

ಬೆಂಗಳೂರಿನ ವಾತಾವರಣ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು ಮೋಡ ಕವಿದ ವಾತಾವಣವಿದ್ದು ಹಗುರದಿಂದ ಸಾಧಾರಣ ಮಳೆ ಆಗುವ ಸಾಧ್ಯತೆ ಇದೆ. ನಿರಂತರ ಗಾಳಿಯ ವೇಗ ಗಂಟೆಗೆ 30-40 ವೇಗದಲ್ಲಿ ಬೀಸಲಿದೆ. ಮುಂದಿನ 48 ಗಂಟೆಗಳಲ್ಲಿ ಕೂಡಾ ಇದೇ ವಾತಾವರಣ ಮುಂದುವರೆಯಲಿದೆ.

ರಾಜ್ಯ