
ಮೂಡುಬಿದಿರೆ: ಆಳ್ವಾಸ್ ಸಂಸ್ಥೆಯ ವತಿಯಿಂದ ವಿದ್ಯಾಗಿರಿಯ ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಎರಡು ದಿನಗಳ ಕಾಲ ನಡೆಯುವ ಆಳ್ವಾಸ್ ಪ್ರಗತಿಯ 14ನೆ ಆವೃತ್ತಿಯ ಉದ್ಯೋಗ ಮೇಳಕ್ಕೆ ಎಂಆರ್ ಜಿ ಗ್ರೂಪ್ ನ ಸ್ಥಾಪಕ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಶುಕ್ರವಾರ ಚಾಲನೆ ನೀಡಿದರು.


ವಿದ್ಯಾರ್ಥಿಗಳಿಗೆ ವಿದ್ಯೆಯ ಜತೆಗೆ ಸಾಮಾನ್ಯ ಜ್ಞಾನವು ಹೆಚ್ಚು ಅವಶ್ಯಕ. ಯೋಜನೆ , ಆಡಳಿತ, ವ್ಯವಹಾರದ ಕೌಶಲ್ಯ ವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಯಾವುದೇ ಸವಾಲನ್ನು ಸುಲಭವಾಗಿ ಎದುರಿಸಬಹುದು ಎಂದು ಪ್ರಕಾಶ್ ಶೆಟ್ಟಿ ಹೇಳಿದರು.

ಕ್ರಿಯಾಶೀಲತೆ ಮತ್ತು ದೂರದೃಷ್ಟಿ ಜೊತೆಗೆ ಪ್ರಯತ್ನವಿದ್ದಾಗ ಯಾವುದೇ ಕಾರ್ಯದಲ್ಲೂ ಯಶಸ್ಸು ಕಾಣಲು ಸುಲಭ ಸಾಧ್ಯ ಸಾಂಸ್ಕೃತಿಕ,ಕ್ರೀಡೆ, ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಛಾಪನ್ನು ಮೂಡಿಸಿರುವ ಮೂಡಬಿದ್ರೆಯ ಆಳ್ವಾಸ್ ಸಂಸ್ಥೆ ಹಲವು ವರ್ಷಗಳಿಂದ ಅನೇಕ ಉದ್ಯೋಗಾ ಕಾಂಕ್ಷಿಗಳಿಗೆ ಸೂಕ್ತ ಉದ್ಯೋಗಾವಕಾಶವನ್ನು ಕಲ್ಪಿಸುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಕಳ ವಿಧಾನ ಸಭಾ ಕ್ಷೇತ್ರದ ಶಾಸಕ ಉಮಾನಾಥ ಎ. ಕೋಟ್ಯಾನ್ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ,ಆಳ್ವಾಸ್ ಪ್ರಗತಿ ಬೃಹತ್ ಉದ್ಯೋಗ ಮೇಳ ಸಾವಿರಾರು ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗವನ್ನು ಕಲ್ಪಿಸುವಲ್ಲಿ ಯಶಸ್ವಿಯಾ ಗಿದೆ. ಸಾಕಷ್ಟು ವಿದ್ಯಾವಂತರನ್ನು ಹೊಂದಿರುವ ಮತ್ತು ಶೈಕ್ಷಣಿಕವಾಗಿ ಮುಂದಿರುವ ಕರಾವಳಿ ಯಲ್ಲಿ ಉದ್ಯೋಗಾಕಾಂಕ್ಷಿ ಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದ್ದರಿಂದಾಗಿ ಇನ್ನಷ್ಟು ಐಟಿ ಕಂಪನಿಗಳು, ಉದ್ಯಮಿಗಳು ಕರಾವಳಿಗೆ ಬರಬೇಕಾಗಿದೆ ಎಂದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ ಪ್ರಾಸ್ತಾವಿಕವಾಗಿ ಮಾತನಾಡಿ ಪ್ರತಿ ಉದ್ಯೋಗ ಮೇಳ ವನ್ನು ಉದ್ಯೋಗಾರ್ಥಿ ಗಳು ಸದುಪಯೋಗ ಪಡಿಸಿಕೊಳ್ಳಬೇಕು.ಇದರ ಹಿಂದೆ ಸಾಕಷ್ಟು ಪರಿಶ್ರಮ ಮತ್ತು ಭವಿಷ್ಯದ ಮಹತ್ವದ ಚಿಂತನೆ ಇದೆ.ಇದು ಸಂಪೂರ್ಣವಾಗಿ ಉಚಿತವಾಗಿ ನಡೆಯುವಂತಹ ಬೃಹತ್ ಉದ್ಯೋಗ ಮೇಳ. ಈ ಬಾರಿಯೂ ದೇಶ ವಿದೇಶಗಳಿಂದ 254 ಪ್ರತಿಷ್ಠಿತ ಸಂಸ್ಥೆಗಳು ನೇಮಕಾತಿಯನ್ನು ನಡೆಸಲು ಮುಂಬರುತ್ತಿರುವುದು ಸಂತಸದ ವಿಷಯ ಇದರ ಉದ್ದೇಶವನ್ನು ಅರಿತುಕೊಂಡು ಪ್ರಯೋಜನವನ್ನು ಪಡೆದುಕೊಳ್ಳುವಂತಾಗ ಬೇಕು ಎಂದರು.
ಉದ್ಯೋಗ ಮೇಳದಲ್ಲಿ ಪ್ರತಿಷ್ಟಿತ ಕಂಪನಿಯ ಸ್ಥಾಪಕರಾದ ಗ್ಲೋಟಚ್ ಟೆಕ್ನಾಲಜಿಯ ಅಧ್ಯಕ್ಷೆ ವಿದ್ಯಾ ರವಿಚಂದ್ರನ್ , ನೀವಿಯಸ್ ಸೊಲ್ಯೂಷನ್ಸ್ ಸಹ ಸಂಸ್ಥಾಪಕ ಮತ್ತು ಸಿಇಒ ಸುಯೋಗ ಶೆಟ್ಟಿ, ಮಂಗಳೂರಿನ ಟಿಐಇಯ ಸಂಸ್ಥಾಪಕ, 99 ಗೇಮ್ಸ್ ಮತ್ತು ರೋಬೋಸಾಫ್ಟ್ ನ ಅಧ್ಯಕ್ಷ ರೋಹಿತ್ ಭಟ್, ಇಜಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ಸಿಇಒ ಮತ್ತು ನಿರ್ದೇಶಕ ಆನಂದ ಫೆರ್ನಾಂಡಿಸ್ , ಡೆಲಿವರಿ ಜುಯೆಗೋ ಸ್ಟುಡಿಯೊಸ್ ಪ್ರೈವೇಟ್ ಲಿಮಿಟೆಡ್ ನ ಉಪಾಧ್ಯಕ್ಷ ಅಭಿಜಿತ್ ಶೆಟ್ಟಿ , ಮಂಗಳೂರಿನ ಬಿಪಿಎಂ ಆಪರೇಶನ್ಸ್ ಇನ್ಫೋಸಿಸ್ ನ ಮುಖ್ಯಸ್ಥ ಲಲಿತ್ ರೈ ಯವರನ್ನು ಸನ್ಮಾನಿಸಲಾಯಿತು.
ಉದ್ಯಮಿ ಕೆ. ಶ್ರೀಪತಿ ಭಟ್ ಅತಿಥಿಯಾಗಿ ಭಾಗವಹಿಸಿದ್ದರು. ಎರಡು ದಿನಗಳ ಕಾಲ ನಡೆಯುವ ಆಳ್ವಾಸ್ ಪ್ರಗತಿಯ 14 ನೇ ಆವೃತ್ತಿಯಲ್ಲಿ ಐಟಿ, ಐಟಿಇಎಸ್, ಉತ್ಪಾದನೆ, ಬಿಎಫ್ಎಸ್ಐ, ಮಾರಾಟ ಮತ್ತು ಚಿಲ್ಲರೆ, ಹಾಸ್ಪಿಟಾಲಿಟಿ, ಟೆಲಿಕಾಂ, ಆರೋಗ್ಯ, ಮಾಧ್ಯಮ, ನಿರ್ಮಾಣ, ಶಿಕ್ಷಣ ಮತ್ತು ಎನ್ಜಿಒಗಳಂತಹ ಪ್ರಮುಖ ವಲಯಗಳನ್ನು ಪ್ರತಿನಿಧಿಸುವ ಉನ್ನತ ನೇಮಕಾತಿದಾರರು ವೈದ್ಯಕೀಯ ಮತ್ತು ಪ್ಯಾರಾ-ಮೆಡಿಕಲ್, ಎಂಜಿನಿ ಯರಿಂಗ್, ಕಲೆ, ವಾಣಿಜ್ಯ ಮತ್ತು ನಿರ್ವಹಣೆ, ವಿಜ್ಞಾನ, ನರ್ಸಿಂಗ್ ಜೊತೆಗೆ ಐಟಿಐ, ಡಿಪ್ಲೊಮಾ, ಪಿಯುಸಿ ಮತ್ತು ಎಸ್ಎಸ್ಎಲ್ಸಿ ಮತ್ತು ಇತರ ಅರ್ಹ ಪದವೀಧರರು ಮತ್ತು ಸ್ನಾತಕೋತ್ತರ ಪದವೀಧರರಿಗೆ ಈ ವಲಯಗಳು ಹೆಚ್ಚಿನ ಸಂಖ್ಯೆಯ ಅವಕಾಶಗಳನ್ನು ನೀಡಲಿದೆ. ಇದಲ್ಲದೆ, ಅಂತಿಮ ಸೆಮಿಸ್ಟರ್ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು, ಹಾಗೆಯೇ ಅನುಭವಿ ಅಭ್ಯರ್ಥಿಗಳಿಗೂ ಅವಕಾಶ ಕಲ್ಪಿಸಲಾಗಿದೆ.600 ವಿದ್ಯಾರ್ಥಿ ಸ್ವಯಂ ಸೇವಕರು, 300 ಪ್ರಮುಖ ಸಿಬ್ಬಂದಿಗಳು , 952 ಕಂಪ್ಯೂಟರ್ ವ್ಯವಸ್ಥೆ , ಒಳ ಗೊಂಡ ಬೃಹತ್ ಉದ್ಯೋಗ ಮೇಳದಲ್ಲಿ ಅಭ್ಯರ್ಥಿಗಳು ಕ್ಯಾಂಪಸ್ ಗೆ ಪ್ರವೇಶವಾದ ನಂತರ ನೋಂದಣಿ ವ್ಯವಸ್ಥೆ, ವಿದ್ಯಾರ್ಹತೆಗೆ ತಕ್ಕಂತೆ ಕಲರ್ ಕೋಡ್ ಅನ್ನು ವಿತರಿಸಲಾಯಿಸುವ ವ್ಯವಸ್ಥೆ, ಕಲರ್ ಕೋಡ್ ಗೆ ಸಮವಾಗಿರುವ ವಿವಿಧ ಉದ್ಯೋಗಗಳ ಸಂದರ್ಶನ ನೀಡುವ ವ್ಯವಸ್ಥೆ , ಎಲ್ಲ ವಿಭಾಗದ ಉದ್ಯೋಗದ ಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಉಪಯುಕ್ತ ಮಾಹಿತಿ ಕೈಪಿಡಿಯನ್ನು ಪ್ರತಿ ಅಭ್ಯರ್ಥಿಗಳಿಗೆ ಕೊಡಲಾಯಿತು. ಉದ್ಯೋಗ ಆಕಾಂಕ್ಷಿಗಳಿಗೆ ಮಾರ್ಗದರ್ಶನ ನೀಡಲು ಉದ್ಯೋಗ ಮಾಹಿತಿ ಕೇಂದ್ರ ಹಾಗೂ ತರಬೇತಿ ವ್ಯವಸ್ಥೆ ಕಲ್ಪಿಸಲಾಗಿತ್ತು.
ಉದ್ಘಾಟನಾ ಸಮಾರಂಭದಲ್ಲಿಆಳ್ವಾಸ್ ಪದವಿ ಪೂರ್ವ ಕಾಲೇಜಿನ ಕಲಾ ವಿಭಾಗದ ಡೀನ್ ವೇಣುಗೋಪಾಲ್ ಶೆಟ್ಟಿ ನಿರೂಪಿಸಿದರು. ಎಂಬಿಎ ವಿಭಾಗದ ಮುಖ್ಯಸ್ಥೆ ಡೀನ್ ಪ್ರಿಯಾ ಸಿಕ್ವೇರಾ ಸನ್ಮಾನ ಪತ್ರ ವಾಚಿಸಿದರು.
