ಕೊನೆಗೂ ಬೆಂಗಳೂರಿಗೆ ಬಂದ  ಪ್ರಜ್ವಲ್ ರೇವಣ್ಣ: ಏರ್‌ಪೋರ್ಟ್‌ನಲ್ಲೇ ಬಂಧಿಸಿದ ಎಸ್ಐಟಿ

ಕೊನೆಗೂ ಬೆಂಗಳೂರಿಗೆ ಬಂದ  ಪ್ರಜ್ವಲ್ ರೇವಣ್ಣ: ಏರ್‌ಪೋರ್ಟ್‌ನಲ್ಲೇ ಬಂಧಿಸಿದ ಎಸ್ಐಟಿ

ಬೆಂಗಳೂರು: ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಆರೋಪಿಯಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಕೊನೆಗೂ ಬೆಂಗಳೂರು ಏರ್‌ಪೋರ್ಟ್‌ಗೆ ಆಗಮಿಸಿದ್ದು, ತಕ್ಷಣ ಅವರನ್ನು ಎಸ್ಐಟಿ ಅಧಿಕಾರಿಗಳು‌ ಬಂಧಿಸಿದ್ದಾರೆ.

ಕಳೆದ 34 ದಿನಗಳಿಂದ ಅಂದರೆ ಏಪ್ರಿಲ್‌ 26ರಿಂದ ವಿದೇಶಗಳಲ್ಲೇ ತಲೆಮರೆಸಿಕೊಂಡಿದ್ದ ಪ್ರಜ್ವಲ್ ರೇವಣ್ಣ ಗುರುವಾರ ಮದ್ಯರಾತ್ರಿ 12:50ರ ಹೊತ್ತಿಗೆ ಲುಫ್ತಾನ್ಸ ವಿಮಾನದಲ್ಲಿ ದೇವನಹಳ್ಳಿಯ ಕೆಂಪೇಗೌಡ ಏರ್‌ಪೋರ್ಟ್ ಗೆ ಬಂದಿಳಿದಾಗ ಮೊದಲು ಇಮಿಗ್ರೇಶನ್ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದು ಬಳಿಕ ಎಸ್ಐಟಿಗೆ ಹಸ್ತಾಂತರಿಸಿದ್ದಾರೆ.ಪ್ರಜ್ವಲ್ ವಿರುದ್ಧ ಲುಕ್ ಔಟ್ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ಕೂಡಲೇ ಅವರನ್ನು ವಿಮಾನ ನಿಲ್ದಾಣದ ಸಿಬ್ಬಂದಿ ಗುರುತಿಸಿ ಎಸ್‌ಐಟಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ಬೆಂಗಳೂರು ಎಸ್‌ಐಟಿ ಪೊಲೀಸರು ಕೂಡ ವಿಮಾನ ನಿಲ್ದಾಣದೊಳಗೆ ಹೋಗಿ ಸಿಐಎಸ್‌ಎಫ್‌ ಪೊಲೀಸರ ನೆರವಿನಿಂದ ಪ್ರಜ್ವಲ್‌ ರೇವಣ್ಣರನ್ನು ಬಂಧಸಿದ್ದಾರೆ.ಭಾರತೀಯ ಕಾಲಮಾನ ಪ್ರಕಾರ, ಗುರುವಾರ ಸಂಜೆ 4.09 ಕ್ಕೆ ಜರ್ಮನಿಯ ಮ್ಯೂನಿಕ್‌ನಿಂದ ಹೊರಟಿದ್ದ ವಿಮಾನದಲ್ಲಿ ಪ್ರಜ್ವಲ್ ಪ್ರಯಾಣಿಸುತ್ತಿರುವುದು ಖಚಿತವಾಗಿತ್ತು. ಲುಫ್ತಾನ್ಸ ಏರ್‌ಲೈನ್ಸ್‌ನ LH764 ವಿಮಾನದ ಬ್ಯುಸಿನೆಸ್ ಕ್ಲಾಸ್‌ನಲ್ಲಿ ಪ್ರಜ್ವಲ್‌ ಪ್ರಯಾಣಿಸಿದ್ದು ಗುರುವಾರ ಮಧ್ಯರಾತ್ರಿ 12:50ರ ಸುಮಾರಿಗೆ ಬೆಂಗಳೂರಿಗೆ ಆಗಮಿಸಿದ್ದಾರೆ.ಮ್ಯೂನಿಕ್‌ನಿಂದ ಬೆಂಗಳೂರಿಗೆ ಆಗಮಿಸಿದ್ದ ಪ್ರಜ್ವಲ್‌ ರೇವಣ್ಣರನ್ನು ಏರ್‌ಪೋರ್ಟ್‌ನಲ್ಲಿ ಎಸ್ಐಟಿ ಅಧಿಕಾರಿಗಳು ಬಂಧಿಸಿದರು. ಬಳಿಕ ಪ್ರಜ್ವಲ್‌ರನ್ನು ಸಿಐಡಿ ಕಚೇರಿಗೆ ಕರೆದೊಯ್ದಿದ್ದಾರೆ.

ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸಿಐಡಿ ಕಚೇರಿ ಬಳಿ ಪೊಲೀಸ್ ಬಿಗಿ ಬಂದೋಬಸ್ತ್‌ ಒದಗಿಸಲಾಗಿದ್ದು, 2 ಕೆ ಎಸ್ ಆರ್ ಪಿ ತುಕಡಿ, 50ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಸಿಐಡಿ ಕಚೇರಿ ಮುಂದೆ ಬ್ಯಾರಿಕೇಡ್‌ಗಳನ್ನೂ ಹಾಕಲಾಗಿದೆ.

ಪ್ರಜ್ವಲ್‌ ವಿರುದ್ಧ ಲುಕ್‌ಔಟ್‌ ನೋಟಿಸ್ ಇರುವುದರಿಂದ ಇಮಿಗ್ರೇಷನ್‌ ಅಧಿಕಾರಿಗಳೇ ಪ್ರಜ್ವಲ್‌ನನ್ನು ವಶಕ್ಕೆ ಪಡೆದಿದ್ದು, ಬಳಿಕ ಅರೆಸ್ಟ್‌ ವಾರಂಟ್‌ ಇರುವುದರಿಂದ ಎಸ್‌ಐಟಿ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.

ಪ್ರಜ್ವಲ್ ಆಗಮನ ವಿಚಾರ ತಿಳಿಯುತ್ತಿದ್ದಂತೆ ವಿವಿಧ ಸಂಘಟನೆಗಳು ಸಿಡಿದೆದ್ದಿವೆ. ಪ್ರಜ್ವಲ್‌ರನ್ನು ಅರೆಸ್ಟ್‌ ಮಾಡಬೇಕು ಸಂತ್ರಸ್ತೆಯರ ಘನತೆ ಕಾಪಾಡಬೇಕು ಎಂದು ಆಗ್ರಹಿಸಿ ಹಾಸನದಲ್ಲಿ ಗುರುವಾರ ದೊಡ್ಡ ಹೋರಾಟ ನಡೆಸಲಾಗಿದೆ. ಸಾವಿರಾರು ಸಂಖ್ಯೆಯಲ್ಲಿದ್ದ ಪ್ರತಿಭಟನಾಕಾರರು, ಹೇಮಾವತಿ ಪ್ರತಿಮೆಯಿಂದ ಡಿಸಿ ಕಚೇರಿವರೆಗೂ ರ‍್ಯಾಲಿ ನಡೆಸಿದ್ದರು. ಬಳಿಕ ಬಹಿರಂಗ ಸಭೆ ಮಾಡಿದ್ದು ಮನವಿ ಸ್ವೀಕರಿಸಲು ಡಿಸಿ ಬದಲು ಎಡಿಸಿ ಶಾಂತಲಾ ಆಗಮಿಸಿದ್ದಕ್ಕೆ ಹೋರಾಟಗಾರರು ಆಕ್ರೋಶಗೊಂಡಿದ್ದರು

ರಾಜ್ಯ