
ಉಳ್ಳಾಲ: ಕಳೆದ ಏಳು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಉಳ್ಳಾಲ ತಾಲೂಕಿನ ಹರೇಕಳ ಕಡವಿನಬಳಿಯ ಅಂಗಡಿ ಮಾಲೀಕನ ದರೋಡೆ ಮತ್ತು ಕೊಲೆಯತ್ನ ಪ್ರಕರಣದ ಆರೋಪಿಯಾಗಿದ್ದ.

ಉಳ್ಳಾಲದ ಉಳಿಯ ಮರಿಯಕ್ಲಬ್ ನಿವಾಸಿ ರಾಜೇಶ್ ಸುವರ್ಣ (24) ಎಂಬಾತನನ್ನು ಎಸಿಪಿ ಧನ್ಯಾ ನಾಯಕ್ ನೇತೃತ್ವದ ಮಾದಕದ್ರವ್ಯ ವಿರೋಧಿ ಪೊಲೀಸ್ ತಂಡ ಬಂಧಿಸಿದೆ.
ಹರೇಕಳ ಕಡವಿನ ಬಳಿ ಬಳಿಯಿರುವ ಎನ್ .ಎಫ್ ಜನರಲ್ ಸ್ಟೋರ್ ಮಾಲೀಕ ಅಬ್ದುಲ್ ರಹಿಮಾನ್ ಎಂಬವರ ಮೇಲೆ 2017ರ ಮೇ.24 ರಂದು ರಿಕ್ಷಾದಲ್ಲಿ ಬಂದಿದ್ದ ಅಶ್ರಫ್ ಮತ್ತು ಮೂವರು ಸೇರಿಕೊಂಡು ರಾತ್ರಿ 10ಕ್ಕೆ ಅಂಗಡಿಯೊಳಕ್ಕೆ ನುಗ್ಗಿ ತಲವಾರು ತೋರಿಸಿ ಅವಾಚ್ಯ ಪದಗಳಿಂದ ನಿಂದಿಸಿದ್ದರು. ಪೊಲೀಸರಿಗೆ ತಮ್ಮ ವಿರುದ್ಧ ಮಾಹಿತಿ ನೀಡಿರುವುದು ಯಾಕೆ ಎಂದು ಬೈದು, ತಲವಾರಿನಿಂದ ದಾಳಿ ನಡೆಸಿ ಕೊಲೆಗೆ ಯತ್ನಿಸಿದ್ದರು. ಅಲ್ಲದೆ ಕ್ಯಾಷಿನಲ್ಲಿದ್ದ ರೂ.50,000 ವ್ಯಾಪಾರದ ಹಣವನ್ನು ದರೋಡೆ ನಡೆಸಿದ್ದರು.ಈ ಸಂಬಂಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿತ್ತು. ಪ್ರಮುಖ ಆರೋಪಿ ಅಶ್ರಫ್ ಸೇರಿದಂತೆ ರಾಜೇಶ್ ಹಾಗೂ ಇನ್ನೋರ್ವನ ವಿರುದ್ಧ ಪ್ರಕರಣ ದಾಖಲಾಗಿತ್ತು. ಅಶ್ರಫ್ ಹಾಗೂ ಇನ್ನೋರ್ವನನ್ನು ಪೊಲೀಸರು ಅಂದೇ ಬಂಧಿಸಿದ್ದರು. ರಾಜೇಶ ತಲೆಮರೆಸಿಕೊಂಡಿದ್ದು, ಇದೀಗ ಏಳು ವರ್ಷಗಳ ನಂತರ ಬಂಧನವಾಗಿದೆ. ಆರೋಪಿಗಳ ವಿರುದ್ಧ 120(ಬಿ), 448,307,394,504 ಜೊತೆಗೆ 34 ಐಪಿಸಿ ಮತ್ತು 25(ಬಿ) ಆರ್ಮ್ಸ್ ಕಾಯಿದೆಯಡಿ ಪ್ರಕರಣ ದಾಖಲಾಗಿದೆ.
