ಈಶ್ವರಮಂಗಲದ ಮೆಟ್ರಿಕ್‌ಪೂರ್ವ ಪರಿಶಿಷ್ಟ ಪಂಗಡದ ಬಾಲಕರ ವಸತಿ ನಿಲಯದಲ್ಲಿ ಅಡುಗೆ ಸಿಬ್ಬಂದಿ  ದೌರ್ಜನ್ಯ ಆರೋಪ -ವಿದ್ಯಾರ್ಥಿಗಳಿಂದ ಪ್ರತಿಭಟನೆ

ಈಶ್ವರಮಂಗಲದ ಮೆಟ್ರಿಕ್‌ಪೂರ್ವ ಪರಿಶಿಷ್ಟ ಪಂಗಡದ ಬಾಲಕರ ವಸತಿ ನಿಲಯದಲ್ಲಿ ಅಡುಗೆ ಸಿಬ್ಬಂದಿ ದೌರ್ಜನ್ಯ ಆರೋಪ -ವಿದ್ಯಾರ್ಥಿಗಳಿಂದ ಪ್ರತಿಭಟನೆ

ಪುತ್ತೂರಿರು ತಾಲ್ಲೂಕು ಈಶ್ವರಮಂಗಲದಲ್ಲಿರುವ ಮೆಟ್ರಿಕ್‌ಪೂರ್ವ ಪರಿಶಿಷ್ಟ ಪಂಗಡದ ಬಾಲಕರ ವಸತಿ ನಿಲಯದ ಅಡುಗೆ ಸಿಬ್ಬಂದಿ ದೌರ್ಜನ್ಯ ನಡೆಸುತ್ತಿದ್ದು, ದೂರು ಕೊಟ್ಟರು ಅವರ ವಿರುದ್ದ ಕ್ರಮ ಕೈಗೊಂಡಿಲ್ಲವೆಂದು ಆಕ್ರೋಶಗೊಂಡ ವಿದ್ಯಾರ್ಥಿಗಳು ಸೋಮವಾರ ವಸತಿನಿಲಯದ ಎದುರು ಧರಣಿ ಪ್ರತಿಭಟನೆ ನಡೆಸಿದರು.

ವಸತಿ ನಿಲಯದ ಅಡುಗೆ ಸಿಬ್ಬಂದಿ ವಿರುದ್ಧ ಸೂಕ್ತ ಕಾನೂನು ಕೈಗೊಳ್ಳಬೇಕೆಂದು ಈ ವೇಳೆ ವಿದ್ಯಾರ್ಥಿಗಳು ಆಗ್ರಹಿಸಿದರು.ಈ ವಸತಿ ನಿಲಯದಲ್ಲಿ ನೆಲೆಸಿರುವ ವಿದ್ಯಾರ್ಥಿಗಳು ಸೋಮವಾರ ಮಧ್ಯಾಹ್ನ ದಿಢೀರ್‌ ಪ್ರತಿಭಟನೆ ನಡೆಸಿದರು. ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಶಾರದಾ ಅವರು ವಿದ್ಯಾರ್ಥಿಗಳ ಮನವೊಲಿಕೆಗೆ ಪ್ರಯತ್ನಿಸಿದರು. ಆದರೇ ವಿದ್ಯಾರ್ಥಿಗಳು ಇದಕ್ಕೆ ಬಗ್ಗಲಿಲ್ಲ.

ವಸತಿ ನಿಲಯದ ಮೇಲ್ವಿಚಾರಕರು ಇಲ್ಲವೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೇ ಇಲ್ಲಿಗೆ ಬಂದು ನಮಗಾಗುತ್ತಿರುವ ಸಮಸ್ಯೆಗಳನ್ನು ಆಲಿಸಬೇಕು, ಅವರು ಸ್ಥಳಕ್ಕೆ ಬಂದು ನ್ಯಾಯ ಒದಗಿಸಿದ ಬಳಿಕವೇ ನಾವು ಇಲ್ಲಿಂದ ತೆರಳುವುದು ಎಂದು ಪಟ್ಟು ಹಿಡಿದರು.ವಸತಿ ನಿಲಯದ ಮೇಲ್ವಿಚಾರಕಿ ಅಕ್ಷತಾ ಪೈ ಅವರು ಸ್ಥಳಕ್ಕೆ ಬಂದಾಗ ವಿದ್ಯಾರ್ಥಿಗಳು ಅಡುಗೆ ಸಿಬ್ಬಂದಿಯಿಂದಾಗುತ್ತಿರುವ ದೌರ್ಜನ್ಯದ ಕುರಿತು ವಿವರಿಸಿ, ಅಡುಗೆ ಸಿಬ್ಬಂದಿಯನ್ನು ಬದಲಾಯಿಸುವಂತೆ ಆಗ್ರಹಿಸಿದರು.

ವಿದ್ಯಾರ್ಥಿಗಳಿಗೆ ತೊಂದರೆ ನೀಡದಂತೆ ಈಗಾಗಲೇ ಅವರಿಗೆ ಸೂಚಿಸಲಾಗಿದೆ. ನಿಮ್ಮ ಸಮಸ್ಯೆಗಳನ್ನು ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೇವೆ ಎಂದು ಆಕ್ರೋಶಿತ ವಿದ್ಯಾರ್ಥಿಗಳನ್ನು ಸಮಾಧಾನಿಸಲು ಯತ್ನಿಸಿದರು. ಆದರೇ ವಿದ್ಯಾರ್ಥಿಗಳಿಗೆ ಈ ಉತ್ತರ ತೃಪ್ತಿ ತಾರದ ಹಿನ್ನಲೆ ಪ್ರತಿಭಟನೆ ಮುಂದುವರಿಸಿದರು.ಈ ನಡುವೆ ಸ್ಥಳಕ್ಕೆ ಬಂದ ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಾಮ ಮೇನಾಲ ಅವರು, ಮಕ್ಕಳ ಮೇಲೆ ನಿರಂತರವಾಗಿ ದೌರ್ಜನ್ಯ ಎಸಗುತ್ತಿರುವ ಅಡುಗೆ ಸಿಬ್ಬಂದಿಯನ್ನು ಬದಲಾವಣೆ ಮಾಡಲು ಇಷ್ಟೊಂದು ಸಮಯ ಬೇಕೆ, ಗ್ರಾಮ ಪಂಚಾಯಿತಿಯಲ್ಲಿ ಕೈಗೊಂಡ ನಿರ್ಣಯಕ್ಕೆ ಬೆಲೆ ಇಲ್ಲವೇ ಎಂದು ಪ್ರಶ್ನಿಸಿ ವಸತಿ ನಿಲಯದ ಮೇಲ್ವಿಚಾರಕಿಯನ್ನು ತರಾಟೆಗೆ ತೆಗೆದುಕೊಂಡರು.

ಸಮಾಜಕಲ್ಯಾಣ ಇಲಾಖಾಧಿಕಾರಿಗೆ ಕರೆ ಮಾಡಿದಾಗ ಅವರು, ಈ ಶೈಕ್ಷಣಿಕ ವರ್ಷ ಮಗಿಯುವ ತನಕ ಅಡುಗೆ ಸಿಬ್ಬಂದಿ ಇಲ್ಲೇ ಇರಲಿ, ಮತ್ತೆ ಬದಲಾಯಿಸುತ್ತೇವೆ ಎಂದು ಹೇಳಿರುವುದರಿಂದ ಆಕ್ರೋಶಗೊಂಡ ರಾಮ ಮೇನಾಲ ಅವರು, ಗುರುವಾರದೊಳಗೆ ಇಲ್ಲಿನ ಅಡುಗೆ ಸಿಬ್ಬಂದಿಯನ್ನು ಬದಲಾವಣೆ ಮಾಡಿದ್ದರೆ ಮಕ್ಕಳ ಜತೆ ನಾವು ಸೇರಿಕೊಂಡು ಪ್ರತಿಭಟನೆಗಿಳಿಯುತ್ತೇವೆ ಎಂದು ಎಚ್ಚರಿಸಿದರು. ಅಲ್ಲದೆ ಮಕ್ಕಳಿಗೆ ಧೈರ್ಯ ತುಂಬಿ ಪ್ರತಿಭಟನೆ ಹಿಂತೆಗೆದುಕೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾದರು ಎಂದು ತಿಳಿದು ಬಂದಿದೆ.

ರಾಜ್ಯ