
ರಾಜ್ಯದ ಪ್ರಸಿದ್ದ ಪ್ರವಾಸಿ ಸ್ಥಳ ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ ಅರಣ್ಯ ಪ್ರದೇಶಕ್ಕೆ ಪ್ರವಾಸಕ್ಕೆ ಬಂದ ಕಿಡಿಗೇಡಿಗಳು ಹಚ್ಚಿದ ಬೆಂಕಿಯ ಕಿಡಿಗೆ ಕಾಡು ಹೊತ್ತಿ ಉರಿಯುತ್ತಿದ್ದು ಸಾವಿರಾರು ವನ್ಯ ಜೀವಿಗಳು ಪ್ರಾಣಪಾಯದಲ್ಲಿದೆನೂರಾರು ಎಕರೆ ಪ್ರದೇಶಕ್ಕೆ ಹರಡಿರುವ ಬೆಂಕಿನ ಜ್ವಾಲೆಗೆ ಅಮೂಲ್ಯ ಅರಣ್ಯ ಸಂಪತ್ತು ಸುಟ್ಟು ಭಸ್ಮವಾಗುತ್ತಿದ್ದು, ಅಗ್ನಿಯನ್ನು ನಿಯಂತ್ರಿಸಲು ಸಾಧ್ಯವಾಗದೆ ಅರಣ್ಯಾಧಿಕಾರಿಗಳು ಕಂಗಾಲಾಗಿದ್ದಾರೆ.

ಚನ್ನಗೋಡನಹಳ್ಳಿ ಅರಣ್ಯದಲ್ಲಿ ಆರಂಭಕ್ಕೆ ಕಾಣಿಸಿಕೊಂಡ ಬೆಂಕಿ ಗಾಳಿಯಿಂದ ವ್ಯಾಪಿಸಿದ್ದು ಅಪಾರ ಪ್ರಮಾಣದಲ್ಲಿ ಅರಣ್ಯ ಸಂಪತ್ತು ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಿದೆ. ಬೆಂಕಿಯ ಕೆನ್ನಾಲಿಗೆ ಈಗಾಗಲೇ ಸಾಕಷ್ಟು ಅರಣ್ಯ ಪ್ರದೇಶವನ್ನು ವ್ಯಾಪಿಸಿದೆ. ಬಿಸಿಲ ಧಗೆ ಮತ್ತು ಗಾಳಿಯಿಂದ ಬೆಂಕಿಯನ್ನು ನಂದಿಸಲು ಸಾಧ್ಯವಾಗದೆ ಅರಣ್ಯ ಇಲಾಖೆ ಸಿಬ್ಬಂದಿ ಪರದಾಡುತ್ತಿದ್ದಾರೆ.
ಕ್ಲಿಷ್ಟಕರ ಪ್ರದೇಶದಲ್ಲಿ ಬೆಂಕಿ ಆವರಿಸಿದ್ದು, ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದರೂ ಬೆಂಕಿ ನಂದಿಸಲು ಸಾಧ್ಯವಾಗುತ್ತಿಲ್ಲ. ಅಮೂಲ್ಯ ಔಷಧಗುಣವುಳ್ಳ ಸಸ್ಯ ಸಂಪತ್ತು, ಮರಗಿಡಗಳು ಈಗಾಗಲೇ ಬೆಂಕಿಗೆ ಆಹುತಿಯಾಗಿವೆ ತಿಳಿದು ಬಂಧಿದೆ. ಪ್ರವಾಸಿಗರು ಮಾಡಿದ ಕಿಡಿಗೇಡಿತನದಿಂದ ಅರಣ್ಯ ಪ್ರದೇಶಕ್ಕೆ ಬೆಂಕಿ ಬಿದ್ದಿದೆ ಎನ್ನಲಾಗುತ್ತಿದ್ದು, ಮತ್ತೊಂದೆಡೆ ಕಾಡಾನೆಗಳ ಹಿಂಡು ಜಿಲ್ಲೆಯಲ್ಲಿ ಬೀಡು ಬಿಟ್ಟಿವೆ. ಚಿಕ್ಕೊಳಲೆಯಲ್ಲಿ ಬೀಡು ಬಿಟ್ಟಿರುವ ಆನೆಗಳು ಸ್ಥಳದಿಂದ ಕದಲುತ್ತಿಲ್ಲ. ಬೆಂಕಿಯ ಕೆನ್ನಾಲಿಗೆ ರಸ್ತೆ ಬದಿಯಲ್ಲೂ ವ್ಯಾಪಿಸಿರುವುದರಿಂದ ಪ್ರವಾಸಿಗರು ಅಲ್ಲಿಯೇ ಸಿಲುಕಿಕೊಂಡಿದ್ದಾರೆ.
ದುರ್ಗಮ ಪ್ರದೇಶವಾಗಿರುವುದರಿಂದ ಬೆಂಕಿ ನಂದಿಸಲು ಕಷ್ಟವಾಗುತ್ತಿದೆ. ಗಾಳಿ ಮತ್ತು ಒಣಗಿದ ಮರಗಳ ಎಲೆಗಳಿಂದ ಬೆಂಕಿ ಸಾಕಷ್ಟು ವ್ಯಾಪಿಸುತ್ತಿದೆ. ಒಂದು ಕಡೆ ಕಾಡಾನೆಗಳ ನಿಯಂತ್ರಣ ಅವುಗಳ ಚಲನ ವಲನ ನಿಗಾ ಇಡಬೇಕು. ಮತ್ತೊಂದು ಕಡೆ ಯಾರೋ ಮಾಡಿರುವ ಕಿಡಿಗೇಡಿ ಕೃತ್ಯದಿಂದ ಬೆಂಕಿ ಹತ್ತಿದ್ದು, ಬೆಂಕಿ ನಂದಿಸು ಕಾರ್ಯವನ್ನು ಮಾಡಬೇಕಿದೆ. ಇದರಿಂದ ಹೈರಾಣಾಗಿ ಹೋಗಿದ್ದೇವೆಂದು ತಮ್ಮ ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ. ಪ್ರವಾಸಿಗರ ಮೋಜು ಮಸ್ತಿಗೆ ಅಮಾಯಕ ಕಾಡು ಪ್ರಾಣಿಗಳು ಬಲಿಯಾಗುತ್ತಿರುವುದು ಮಾನವ ಕುಲಕ್ಕೆ ಕಲಂಕವಾಗಿದೆ. ಇನ್ನಾದರೂ ಸಂಬಂಧಪಟ್ಟವರು ಇಂತಹ ಕೃತ್ಯಕ್ಕೆ ಕಡಿವಾಣ ಹಾಕಿ ಸೂಕ್ತ ಕ್ರಮ ಕೈಗೊಳ್ಳಬೇಕು ಎನ್ನುವುದು ಪರಿಸರವಾದಿಗಳ ಅಭಿಪ್ರಾಯ.
