
ಹಾಸನ: ಕೆ.ಎಸ್.ಆರ್.ಟಿ.ಸಿ. ಬಸ್ ನ ಬ್ರೇಕ್ ಫೇಲ್ ಆದ ಪರಿಣಾಮ ಬಸ್ ಶಾಲೆಯೊಂದಕ್ಕೆ ನುಗ್ಗಿರುವ ಘಟನೆ ನಡೆದಿದ್ದು, ಪರಿಣಾಮವಾಗಿ ಬಸ್ ನಲ್ಲಿದ್ದ ಓರ್ವ ಪ್ರಯಾಣಿಕ ಸಾವನ್ನಪ್ಪಿದ್ದಾನೆ.

ಈ ಘಟನೆ ನಡೆದಿರೋದು ಸಕಲೇಶಪುರ ತಾಲೂಕಿನ ಬಾಗೆ ಬಳಿಯಲ್ಲಿ. ಅಪಘಾತಕ್ಕೀಡಾದ ಬಸ್ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ತೆರಳುತ್ತಿತ್ತು. ಮಾರ್ಗ ಮಧ್ಯೆ ಬ್ರೇಕ್ ಫೇಲ್ ಆಗಿ ಬಸ್ ಶಾಲೆಗೆ ನುಗ್ಗಿತ್ತು. ಈ ವೇಳೆ ಬಸ್ಸಿನ ಕಿಟಕಿ ಸೀಟ್ ನಲ್ಲಿ ಕುಳಿತಿದ್ದ ಪ್ರಯಾಣಿಕ ಸಾವನ್ನಪ್ಪಿದ್ದು, ಹಲವು ಪ್ರಯಾಣಿಕರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.
ಇಂದು ಭಾನುವಾರವಾಗಿದ್ದರಿಂದಾಗಿ ಶಾಲೆಗೆ ರಜೆ ಇತ್ತು. ಹೀಗಾಗಿ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ. ಶಾಲೆಯ ಕಟ್ಟಡ ಕೂಡ ಹಾನಿಯಾಗಿದ್ದು, ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ.