ಬೆಳ್ತಂಗಡಿಯಲ್ಲಿ ಹಾಡಹಗಲೇ ಮನೆಯಿಂದ ಕಳವು

ಬೆಳ್ತಂಗಡಿಯಲ್ಲಿ ಹಾಡಹಗಲೇ ಮನೆಯಿಂದ ಕಳವು

ಬೆಳ್ತಂಗಡಿ: ಕುವೆಟ್ಟು ಗ್ರಾಮದ ಗುರುವಾಯನಕೆರೆ ಅಯ್ಯಪ್ಪ ಗುಡಿ ಸಮೀಪದ ರಾಮನಗರ ಎಂಬಲ್ಲಿ ಹಾಡುಹಗಲೇ ಮನೆಯೊಂದರ ಬೀಗ ಮುರಿದು ಒಳಗನುಗ್ಗಿದ್ದ ಕಳ್ಳರು ನಗದು, ಚಿನ್ನದ ಸರ ಸೇರಿದಂತೆ ಸುಮಾರು 70 ಸಾವಿರ ರೂ. ಮೌಲ್ಯದ ಸೊತ್ತುಗಳನ್ನು ಕಳವುಗೈದ ಘಟನೆ ಸಂಭವಿಸಿದೆ.

ರಾಮನಗರ ಶ್ರೀ ದುರ್ಗಾ ನಿವಾಸಿ ರಾಘವೇಂದ್ರ ಆಚಾರ್ಯ ಅವರ ಮನೆಯಿಂದ ಈ ಕಳ್ಳತನ ನಡೆದಿದೆ. ರಾಘವೇಂದ್ರ ಆಚಾರ್ಯ ಅವರು ಬೆಳ್ತಂಗಡಿಯಲ್ಲಿ ಚಿನ್ನಾಭರಣ ತಯಾರಿ ಕೆಲಸವನ್ನು ಮಾಡುತ್ತಿದ್ದು ಬೆಳಗ್ಗೆ ಅಲ್ಲಿಗೆ ಹೋಗಿದ್ದರು. ಪತ್ನಿ ಕೆಲಸಕ್ಕೆ ಹೋಗಿದ್ದು, ಮಕ್ಕಳು ಶಾಲೆಗೆ ಹೋಗಿರುವುದರಿಂದ ಮನೆಯಲ್ಲಿ ಯಾರೂ ಇರಲಿಲ್ಲ. ಇದೇ ಸಂದರ್ಭವನ್ನು ಬಳಸಿಕೊಂಡ ಕಳ್ಳರು ಮನೆಯ ಎದುರು ಬಾಗಿಲಿನ ಚಿಲಕವನ್ನು ಮುರಿದು ಒಳ ನುಗ್ಗಿ ಮೂರು ಬೀರುವನ್ನು ತೆರೆದು ಚಿನ್ನಾಭರಣ ಹಾಗೂ ನಗದಿಗಾಗಿ ಹುಡುಕಾಡಿರುವುದು ಕಂಡುಬಂದಿದೆ.

ಬೀರುವಿನಲ್ಲಿದ್ದ 15 ಸಾವಿರ ರೂ. ನಗದು ಹಾಗೂ ಸುಮಾರು 50 ಸಾವಿರ ರೂ. ಮೌಲ್ಯದ ಒಂದು ಪವನ್‌ನ ಚಿನ್ನದ ಸರ ಹಾಗೂ ಬೆಳ್ಳಿಯ ಕೌಲಿಗೆಯನ್ನು ಕೊಂಡು ಹೋಗಿದ್ದಾರೆ ಎಂದು ಮನೆಯ ಮಾಲಕ ರಾಘವೇಂದ್ರ ಆಚಾರ್ಯ ತಿಳಿಸಿದ್ದಾರೆ.ಮಧ್ಯಾಹ್ನ ರಾಘವೇಂದ್ರ ಆಚಾರ್ಯ ಅವರು ಮನೆಗೆ ಬಂದಾಗ ಈ ಪ್ರಕರಣ ಬೆಳಕಿಗೆ ಬಂದಿತ್ತು.

ರಾಘವೇಂದ್ರ ಆಚಾರ್ಯರು ಠಾಣೆಗೆ ಬಂದು ಮಾಹಿತಿ ನೀಡಿದ ಬಳಿಕ ಬೆಳ್ತಂಗಡಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.ಸ್ಥಳೀಯ ಪರಿಸರದಲ್ಲಿ ಬೆಳಗ್ಗೆ ಅಪರಿಚತ ವ್ಯಕ್ತಿಯೋರ್ವ ಓಡಾಟ ನಡೆಸಿದ್ದನ್ನು ಸ್ಥಳೀಯರು ವಿಚಾರಿಸಿದಾಗ ಆತ ತಾನು ಜೋತಿಷ ಹೇಳುವವ ಎಂದು ಹೇಳಿದ್ದನೆನ್ನಲಾಗಿದೆ. ಈತನೇ ಈ ಕಳ್ಳತನ ನಡೆಸಿದನೇ ಅಥವಾ ಬೇರೆಯಾದರೂ ಈ ಕೃತ್ಯ ಎಸಗಿದರೇ, ಎಂಬ ಅನುಮಾನ ವ್ಯಕ್ತವಾಗಿದೆ.

ರಾಜ್ಯ